ಕೂದಲು ಕತ್ತರಿಸಿ ದೇವದಾಸಿ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಿದ ಶರಣರು
ದಾವಣಗೆರೆ, ಜನವರಿ 13: ಅಸಹಾಯಕ ಪರಿಸ್ಥಿತಿಯಲ್ಲಿ ದೇವದಾಸಿ ಪದ್ಧತಿಗೆ ಒಳಗಾದ ಅಮಾಯಕ ಮಹಿಳೆಯರು ಅದರಿಂದ ಹೊರಗೆ ಬರುವುದಾದರೆ ಸರ್ಕಾರ, ಸಂಘ-ಸಂಸ್ಥೆಗಳು ಮತ್ತು ಶ್ರೀಮಠ ನಿಮಗೆ ಸಹಾಯ ಹಸ್ತ ಚಾಚಲಿದೆ ಎಂದು ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಭರವಸೆ ನೀಡಿದರು.
ದಾವಣಗೆರೆಯಲ್ಲಿ ಭಾನುವಾರ ನಡೆದ ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 63ನೇ ಸ್ಮರಣೋತ್ಸವ ಅಂಗವಾಗಿ ಶಿವಯೋಗಾಶ್ರಮದಲ್ಲಿ ದೇವದಾಸಿ ಮಹಿಳೆಯರ ಮೌಢ್ಯಾಚರಣೆ ನಿವಾರಣೆಗಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಐವರು ದೇವದಾಸಿ ಮಹಿಳೆಯರಿಗೆ 'ಜಡೆ' ಕತ್ತರಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಿ ಮಾತನಾಡಿದರು.
"ಮನೆಯ ಪರಿಸ್ಥಿತಿ ಮತ್ತು ಮೌಢ್ಯತೆಯಿಂದಾಗಿ ಅಮಾಯಕ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ತಳ್ಳಲಾಗಿರುತ್ತದೆ. ದೇವರ ಹೆಸರಿನಲ್ಲಿನ ಈ ಮೌಢ್ಯಾಚರಣೆ ಹೀನಾಯವಾದದ್ದು. 'ದಾಸಿ' ಎಂದರೆ ಗುಲಾಮಗಿರಿ. ಇದು ನಿಕೃಷ್ಟ ಪದ್ಧತಿಯಾಗಿದ್ದು, ಈ ಸ್ಥಿತಿಯಿಂದ ನೀವೆಲ್ಲರೂ ಹೊರಬಂದು ಉತ್ತಮ ಬದುಕು ಕಟ್ಟಿಕೊಂಡರೆ ಸಮಾಜ ನಿಮ್ಮನ್ನು ಒಪ್ಪಿಕೊಳ್ಳುತ್ತದೆ. ಇನ್ನು ಮುಂದೆ ಕೂದಲು ಬಿಡುವುದನ್ನು ಬಿಡಿ, ಸ್ವಚ್ಛವಾಗಿರುವುದರೆಡೆ ಗಮನ ನೀಡಿ" ಎಂದು ಹೇಳಿದರು.

"ಮಕ್ಕಳಿಗೆ ಮುತ್ತು ಕಟ್ಟಿಸಿ ಎಂದು ಯಾವ ದೇವರು ಹೇಳುತ್ತಾನೆ? ಯಾವ ದೇವಿಯು ಮುತ್ತು ಕಟ್ಟಿಸಿಕೊಂಡವರಿಗೆ ವರ ನೀಡಿದ್ದಾಳೆ? ಸಿಡಿ ಹಾಯುವುದರಿಂದ ಸೇರಿರುವ ಗಂಡಸೆರಲ್ಲಾ ನಿಮ್ಮನ್ನು ನೋಡಿ ನಗುತ್ತಾರೆ. ನಿಮ್ಮ ಮನಸಾಕ್ಷಿ ಇದಕ್ಕೆ ಒಪ್ಪುತ್ತದೆಯೇ? ಮಹಿಳೆಯರ ಬದಲಾಗಿ ಗಂಡುಮಕ್ಕಳಿಗೆ ಸಿಡಿಹಾಯಲು ಹೇಳಿ" ಎಂದ ಅವರು, "ಈ ಎಲ್ಲಾ ಪದ್ಧತಿಗಳು ನಿಮ್ಮ ಮನಶಾಂತಿಗಾಗಿ ಆಚರಿಸುತ್ತಾ ಬಂದಿದ್ದೀರಿ. ಈ ಎಲ್ಲಾ ಅನಿಷ್ಠ ಪದ್ಧತಿಯಿಂದ ಹೊರಬಂದು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅವರು ದುಡಿದು ನಿಮ್ಮನ್ನು ಸಲಹುತ್ತಾರೆ. ಆಗ ನಿಮ್ಮ ಮನಸ್ಸಿಗೆ ನಿಜವಾದ ಶಾಂತಿ ದೊರೆಯುತ್ತದೆ" ಎಂದರು.












Click it and Unblock the Notifications