ಸಂಡೇ ಲಾಕ್ ಡೌನ್: ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ
ದಾವಣಗೆರೆ, ಜುಲೈ 19: 3ನೇ ಬಾರಿಯ ಭಾನುವಾರದ ಲಾಕ್ಡೌನ್ಗೆ ದಾವಣಗೆರೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ ಜನರ ಸಂಚಾರ ತುಸು ಜೋರಾಗಿದ್ದರೂ, ಮಧ್ಯಾಹ್ನದ ನಂತರ ಕಡಿಮೆಯಾಗಿತ್ತು.
Recommended Video
ಹಾಲು, ಕಿರಾಣಿ ಅಂಗಡಿ, ಮೆಡಿಕಲ್ ಶಾಪ್, ಹೂವು, ಹಣ್ಣಿನ ಅಂಗಡಿ, ಆಸ್ಪತ್ರೆ ಹಾಗೂ ಮಾಂಸದಂಗಡಿಗಳು ತೆರೆದಿದ್ದವು. ಬೆಳಿಗ್ಗೆಯೇ ಜನರು ತರಕಾರಿ ಹಾಗೂ ಮಾಂಸವನ್ನು ಖರೀದಿಸಿದರು. ಎಪಿಎಂಸಿಯಲ್ಲಿ ಮುಂಜಾನೆಯೇ ವ್ಯಾಪಾರ ವಹಿವಾಟು ನಡೆದು ನಂತರ ಸ್ಥಗಿತಗೊಳಿಸಲಾಯಿತು.
ವಿನೋಬನಗರ, ಡಾಂಗೇ ಪಾರ್ಕ್ ಮುಂತಾದ ಕಡೆಗಳಲ್ಲಿ ಜನರು ಮಾಂಸ ಖರೀದಿಗೆ ಮುಗಿಬಿದ್ದಿದ್ದರು. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಅಂತರ ಕಾಯ್ದುಕೊಂಡರು. ಅಗತ್ಯ ವಸ್ತುಗಳನ್ನು ಖರೀದಿಸಿದ ಜನರು ಮಧ್ಯಾಹ್ನದ ವೇಳೆಗೆ ಸ್ವಯಂ ಪ್ರೇರಿತರಾಗಿ ನಿರ್ಬಂಧ ಹೇರಿಕೊಂಡರು.

ಕೆಲ ವಾಹನ ಸವಾರರು ವಿನಾಕಾರಣ ರಸ್ತೆಗಿಳಿದು ಪೊಲೀಸರ ಕೈಗೆ ಸಿಕ್ಕು ದಂಡ ಸಹ ಕಟ್ಟಿದರು. ಮತ್ತೆ ಕೆಲವರು ಕುಂಟು ನೆಪ ಹೇಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.ಲಾಕ್ಡೌನ್ ಹಿನ್ನೆಲೆಯಲ್ಲಿ ಅಂಗಡಿಗಳು, ವಾಣಿಜ್ಯ ಮಳಿಗೆಗಳು ಬಂದ್ ಮಾಡುವ ಮೂಲಕ ಬಂದ್ಗೆ ಬೆಂಬಲ ಸೂಚಿಸಿದವು. ಕೆಲವು ಹೋಟೆಲ್ಗಳು ತೆರೆದಿದ್ದರೂ ಪಾರ್ಸೆಲ್ ಗೆ ಮಾತ್ರ ಅವಕಾಶವಿತ್ತು.
ಶನಿವಾರ ರಾತ್ರಿ 8 ಗಂಟೆಯಿಂದಲೇ ಕೆ.ಎಸ್.ಆರ್.ಟಿ.ಸಿ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಭಾನುವಾರ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್ಗಳು, ಕ್ಯಾಬ್ ಗಳು ರಸ್ತೆಗಿಳಿಯಲಿಲ್ಲ. ಆದರೆ ಕೆಲವೆಡೆ ಬೆರಳೆಣಿಕೆಯಷ್ಟು ಆಟೋಗಳು ಸಂಚರಿಸಿದವು.
ದಾವಣಗೆರೆ ಜಿಲ್ಲೆಯ ವಿವಿಧ ದೇವಾಲಯಗಳು, ಮಸೀದಿಗಳು ಹಾಗೂ ಚರ್ಚ್ಗಳನ್ನು ಬಂದ್ ಮಾಡಲಾಗಿತ್ತು. ನಗರದೇವತೆ ದುರ್ಗಾಂಬಿಕಾ ದೇವಾಲಯ, ಗ್ರಾಮದೇವತೆ ನಿಟುವಳ್ಳಿಯ ದುರ್ಗಾಂಬಿಕಾ ದೇವಾಲಯಗಳು ಮುಚ್ಚಿದ್ದವು.

ಚಿಕ್ಕಮಗಳೂರಿನಲ್ಲಿ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ
ಇನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಲಾಕ್ ಡೌನ್ ಗೆ ಉತ್ತಮ ಬೆಂಬಲ ನೀಡಿದರು. ಎಂ.ಜಿ ರಸ್ತೆ, ಐ.ಜಿ ರಸ್ತೆಗಳು ಖಾಲಿ ಖಾಲಿ ಹೊಡೆಯುತ್ತಿದ್ದವು.
ಹಾಲು, ದಿನಸಿ, ಮಾಂಸದಂಗಡಿ ಬಿಟ್ಟು ಉಳಿದೆಲ್ಲಾ ಅಂಗಡಿಗಳು ಬಂದ್ ಮಾಡಲಾಗಿದ್ದು, ವಾಹನ ಸಂಚಾರವೂ ಇಲ್ಲವಾಗಿತ್ತು. ಅನವಶ್ಯಕವಾಗಿ ಓಡಾಡುತ್ತಿರುವವರನ್ನು ಪೊಲೀಸರು ತಡೆದು ಪ್ರಶ್ನಿಸುತ್ತಿದ್ದರು. ಜಿಲ್ಲೆಯ ಕಡೂರು, ತರೀಕೆರೆ, ಕೊಪ್ಪ, ಎನ್.ಆರ್ ಪುರ, ಶೃಂಗೇರಿಗಳಲ್ಲೂ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.












Click it and Unblock the Notifications