ದಾವಣಗೆರೆಯ ಸೂಳೆಕೆರೆ ಸರ್ವೇ ಕಾರ್ಯಕ್ಕೆ ಸಿಕ್ಕಿತು ದ್ರೋಣ್ ಕ್ಯಾಮೆರಾ ಸಾಥ್
ದಾವಣಗೆರೆ, ಜನವರಿ 19: ದಾವಣಗೆರೆ ಹಾಗೂ ಚಿತ್ರದುರ್ಗದ ಜೀವನಾಡಿಯಾದ ಸೂಳೆಕೆರ ಸರ್ವೆ ಕಾರ್ಯಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಕೆರೆ ಒತ್ತುವರಿ ತೆರವುಗೊಳಿಸಬೇಕು ಹಾಗೂ ಸರ್ವೇ ಕಾರ್ಯ ಮಾಡಬೇಕು ಎಂದು ಬಹು ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಸೂಳೆ ಕೆರೆ ಸಂರಕ್ಷಣಾ ವೇದಿಕೆ ಹಾಗೂ ಖಡ್ಗ ಸಂಘಟನೆಗೆ ಪ್ರಾರಂಭಿಕ ಜಯ ಸಿಕ್ಕಂತಾಗಿದೆ.
ದಾವಣಗೆರೆಯ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ ನೇತೃತ್ವದಲ್ಲಿ ದ್ರೋಣ್ ಕ್ಯಾಮೆರಾ ಸಹಾಯದಿಂದ ಕೆರೆ ಸರ್ವೆ ಕಾರ್ಯಕ್ಕೆ ಚಾಲನೆ ದೊರೆತಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಸೂಳೆಕೆರೆ, ಶಾಂತಿಸಾಗರ ಎಂದೂ ಕರೆಸಿಕೊಳ್ಳುವ ಈ ಕೆರೆ ಚಿತ್ರದುರ್ಗ ಹಾಗೂ ದಾವಣಗೆರೆ ಎರಡು ಜಿಲ್ಲೆ ಜನರ ಜೀವನಾಡಿ.

ಆದರೆ 6500 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಸಾವಿರಾರು ಎಕರೆ ಒತ್ತುವರಿಯಾಗಿದ್ದು, ಖಡ್ಗ ಹಾಗೂ ಸೂಳೆ ಕೆರೆ ಸಂರಕ್ಷಣಾ ವೇದಿಕೆ ಕೆರೆ ಉಳಿವಿಗಾಗಿ ಹೋರಾಟ ಮಾಡಿಕೊಂಡು ಬಂದಿದ್ದವು. ಇದರ ಫಲವಾಗಿ ಕೆರೆಯ ಸರ್ವೇ ಕೆಲಸಕ್ಕೆ ಚಾಲನೆ ಸಿಕ್ಕಿದೆ. 27 ಅಡಿ ಸಾಮರ್ಥ್ಯದ ಈ ಕೆರೆಯ ವಿಸ್ತೀರ್ಣ ಸುಮಾರು 32 ಕಿಲೋಮೀಟರ್ ಇದೆ. ದ್ರೋಣ್ ಕ್ಯಾಮೆರಾ ಮೂಲಕ ಸರ್ವೇ ನಡೆಸಿ, ಅದನ್ನೇ ದಾಖಲೆಯಾಗಿಟ್ಟುಕೊಂಡು ಅಧಿಕಾರಿಗಳು ಕೆರೆ ಒತ್ತುವರಿಯಾಗಿದ್ದರೆ, ಅದನ್ನು ತೆರವು ಮಾಡಲು ಸಿದ್ಧತೆ ನಡೆಸಿದ್ದಾರೆ.

ಕಳೆದ ವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ನಡೆದ ಸೂಳೆಕೆರೆ ಸರ್ವೆ ಕುರಿತ ಸಭೆಯಲ್ಲಿ ಗುತ್ತಿಗೆದಾರರಿಗೆ ಫೆಬ್ರುವರಿ 29ರೂಳಗೆ ಸರ್ವೆ ಕಾರ್ಯ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಗುತ್ತಿಗೆದಾರರು ಕಾರ್ಯ ಆರಂಭಿಸಿದ್ದಾರೆ. ಎಸಿ ಮಮತಾ ನೇತೃತ್ವದಲ್ಲಿ ಸರ್ವೆ ಕೆಲಸ ನಡೆಯಲಿದೆ. ಕೆರೆ ಸಂಪೂರ್ಣ ನೀರಿನಿಂದ ತುಂಬಿರುವುದರಿಂದ ಕೆರೆಯ ಸುಪರ್ದಿಯನ್ನು ಗುರುತಿಸಲು ಅನುಕೂಲವಾಗಿದೆ. ದ್ರೋಣ್ ಕ್ಯಾಮೆರಾಗಳಿಂದ ಸರ್ವೆ ಕಾರ್ಯ ಸರಾಗವಾಗಿ ನಡೆಯುತ್ತಿದೆ.












Click it and Unblock the Notifications