ಶ್ರೀ ಭಗವದ್ಗೀತಾ ಜ್ಞಾನದ ಗಂಗೆ: ದಾವಣಗೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಂದೇಶ
ದಾವಣಗೆರೆ, ಡಿಸೆಂಬರ್, 04: ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಚಿಂತನೆಯೊಂದಿಗೆ ಮುನ್ನಡೆಯುವ ಜವಾಬ್ದಾರಿ ನಮ್ಮ ಯುವ ಪೀಳಿಗೆಯ ಮೇಲಿದೆ. ಯುವಕರ ಧರ್ಮ-ಸಂಸ್ಕೃತಿ ಮತ್ತು ಶ್ರೀ ಭಗವದ್ಗೀತಾ ಜ್ಞಾನವನ್ನು ಅಳವಡಿಸಿಕೊಂಡು ಸರ್ವರೂ ಸಮಾನರು, ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಜೀವನ ನಡೆಸಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ, ಸಮಾನತೆ, ಮಾನವೀಯತೆಯನ್ನು ಕಾಪಾಡಲು ಮುಂದಾಗಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ದಾವಣಗೆರೆಯಲ್ಲಿ ತಿಳಿಸಿದರು.
ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ-2ರ ರಾಜ್ಯ ಮಟ್ಟದ ಶ್ರೀ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. 2007ರಿಂದ ಶ್ರೀ ಗಂಗಾ ಧರಣೇಂದ್ರ ಸರಸ್ವತಿ ಸ್ವಾಮೀಜಿ ಅವರ ಮೂಲಕ ಶ್ರೀ ಭಗವದ್ಗೀತಾ ಅಭಿಯಾನವನ್ನು ಶ್ಲೋಕಗಳ ಪಠಣ, ಗೀತಾ ಪ್ರವಚನ, ಪುಸ್ತಕಗಳ ವಿತರಣೆ, ಗೀತಾ ಪುಸ್ತಕಗಳ ಪ್ರದರ್ಶನ, ಶ್ರೀ ಭಗವದ್ಗೀತೆಯ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಬಾಲ್ಯದಿಂದಲೇ ಗೀತಾ ಜ್ಞಾನವನ್ನು ನೀಡಲಾಗುತ್ತಿದೆ. ನಿಮ್ಮ ಈ ಕಾರ್ಯ ಶ್ಲಾಘನೀಯ, ಇದಕ್ಕಾಗಿ ನಾವು ನಿಮಗೆ ಕೃತಜ್ಞರಾಗಿರುತ್ತೇವೆ ಎಂದರು.
ದಾವಣಗೆರೆಯಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್ ಕಣಕ್ಕೆ, ಬಿಜೆಪಿ ಅಭ್ಯರ್ಥಿ ಬಗ್ಗೆ ಕುತೂಹಲ
ಒತ್ತಡ ಮುಕ್ತ ಜೀವನ ನಡೆಸುವ ಕಲೆ ಗೊತ್ತಾಗುತ್ತದೆ
ಮಹಾಭಾರತ ಯುದ್ಧದ ಆರಂಭದ ಮೊದಲು, ಶ್ರೀಕೃಷ್ಣನು ಅರ್ಜುನನಿಗೆ ಜೀವನದಲ್ಲಿ ಕರ್ಮದ ವಿವಿಧ ಅಂಶಗಳನ್ನು ವಿವರಿಸಿದನು. ಮತ್ತು ಅವನು ಬೋಧಿಸಿದ ಬೋಧನೆಗಳನ್ನು ಶ್ರೀಮದ್ ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಗೀತೆಯು ಜ್ಞಾನ, ಧರ್ಮ, ಸಂಸ್ಕೃತಿಯಾಗಿದೆ. ಗೀತೆಯು ಶುಭ ಜೀವನದ ಪುಸ್ತಕವಾಗಿದೆ. ಇದು ಒತ್ತಡ ಮುಕ್ತ ಜೀವನವನ್ನು ನಡೆಸುವ ಕಲೆಯನ್ನು ನಮಗೆ ಕಲಿಸುತ್ತದೆ ಎಂದು ಹೇಳಿದರು.
ಭಗವದ್ಗೀತಾ ಧರ್ಮದ ಜ್ಞಾನ ನೀಡುತ್ತದೆ
ಗೀತಾ ಜ್ಞಾನವು ಮಾನವ ಜೀವನದ ಮಂಗಳಕರ ಮತ್ತು ಕಲ್ಯಾಣದ ಆಧಾರವಾಗಿದೆ, ಅದರ ಸಾರವನ್ನು ಹೀರಿಕೊಳ್ಳುವವನು ದೈವಿಕ ಪ್ರಕಾಶದಿಂದ ತುಂಬುತ್ತಾನೆ. ಮತ್ತು ಅವನ ಜೀವನವು ಯಶಸ್ವಿ ಆಗುತ್ತದೆ. ಶ್ರೀಮದ್ ಭಗವದ್ಗೀತಾ ಧರ್ಮದ ಜ್ಞಾನವನ್ನು ನೀಡುತ್ತದೆ. ಹಾಗೆಯೇ ಜೀವನದ ವಿಧಾನವನ್ನು ಸಹ ಹೇಳುತ್ತದೆ. ಗೀತಾ ಬೋಧನೆಗಳನ್ನು ಪಾಲಿಸುವುದರಿಂದ ನಮಗಷ್ಟೇ ಅಲ್ಲ ಸಮಾಜಕ್ಕೂ ಒಳ್ಳೆಯದನ್ನು ಮಾಡಬಹುದು ಎಂದು ಹೇಳಿದರು. ಶ್ರೀಮದ್ ಭಗವದ್ಗೀತೆಯು ಮಾನವ ಜೀವನದ ಎಲ್ಲಾ ಕಷ್ಟಗಳನ್ನು ಪರಿಹರಿಸುವ ಪವಿತ್ರ ಗ್ರಂಥವಾಗಿದೆ. ಇದು ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಹೇಗೆ ಮುಂದುವರಿಯಬೇಕು ಎಂದು ನಮಗೆ ಕಲಿಸುತ್ತದೆ. "ಕೋಪವು ಗೊಂದಲವನ್ನು ಉಂಟುಮಾಡುತ್ತದೆ, ಗೊಂದಲವು ಬುದ್ಧಿಯನ್ನು ಕದಡುತ್ತದೆ," ಎಂದು ಗೀತೆಯಲ್ಲಿ ಹೇಳಲಾಗಿದೆ. ಬುದ್ಧಿಯು ವಿಚಲಿತವಾದಾಗ, ವಿವೇಚನಾ ಸಾಮರ್ಥ್ಯವೂ ದುರ್ಬಲಗೊಳ್ಳುತ್ತದೆ. ಒಬ್ಬ ವ್ಯಕ್ತಿಯು ತಾರ್ಕಿಕ ಸಾಮರ್ಥ್ಯವನ್ನು ಕಳೆದುಕೊಂಡಾಗ, ಅವನು ಅವನತಿಯತ್ತ ಸಾಗುತ್ತಾನೆ. ಅದಕ್ಕಾಗಿಯೇ ಕೋಪವನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಗೀತೆಯು ಜ್ಞಾನದ ಗಂಗೆಯಾಗಿದೆ-ಗೆಹ್ಲೋಟ್
ಗೀತೆಯ ಸಾರ್ವತ್ರಿಕ ಭ್ರಾತೃತ್ವದ ಉಪದೇಶವು ಶಾಂತಿ, ಆಧ್ಯಾತ್ಮಿಕತೆ ಮತ್ತು ಲೋಕಕಲ್ಯಾಣಕ್ಕಾಗಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ. ಗೀತೆಯು ಜ್ಞಾನದ ಗಂಗೆಯಾಗಿದೆ, ಇದರಲ್ಲಿ ದೈವಿಕ ಕರ್ಮ, ದೈವಿಕ ಜ್ಞಾನ, ದೈವಿಕ ಭಕ್ತಿಯ ತ್ರಿವೇಣಿಯು ಒಟ್ಟಿಗೆ ಇರುತ್ತದೆ. ಇದರಿಂದ ಕೋಟಿಗಟ್ಟಲೇ ಮಹಾಪುರುಷರು ಸತ್ಯ ಮತ್ತು ಸನ್ಮಾರ್ಗದಲ್ಲಿ ನಡೆಯಲು ಸ್ಫೂರ್ತಿ ಪಡೆದಿದ್ದಾರೆ. ಭಾರತವು ಭೂಮಿ ಋಷಿ, ಮುನಿ, ತ್ಯಾಗಿ-ತಪಸ್ವಿ ಮತ್ತು ಸಂತ-ಮಹಾತ್ಮರ ನಾಡಾಗಿದೆ. ಈ ಪುಣ್ಯಭೂಮಿಯಲ್ಲಿ ಅನೇಕ ಋಷಿಮುನಿಗಳು ಮತ್ತು ಸಂತರು ಇದ್ದಾರೆ. ಅವರು ತಮ್ಮ ಕಠೋರ ತಪಸ್ಸು, ದುಡಿಮೆ, ಆರಾಧನೆಯ ಶಕ್ತಿಯಿಂದ ವಿಶ್ವಮಟ್ಟದಲ್ಲಿ ಧರ್ಮ, ಸಂಸ್ಕೃತಿ, ಅಧ್ಯಾತ್ಮದ ಪತಾಕೆಯನ್ನು ಹಾರಿಸಿ, ಗೀತಾ ಜ್ಞಾನದಿಂದ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ಮೂಲಕ ಮಾನವನ ಬದುಕನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಗೀತೆಯ ಜ್ಞಾನವನ್ನು ಸ್ವೀಕರಿಸಲು ಮನವಿ
ಒಬ್ಬ ಮನುಷ್ಯನು ಮಾಡುವ ಕ್ರಿಯೆಗಳ ಪ್ರಕಾರ, ಅವನು ಅದರ ಫಲಿತಾಂಶವನ್ನು ಪಡೆಯುತ್ತಾನೆ ಎಂದು ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ಆದ್ದುದರಿಂದ ಜೀವನದಲ್ಲಿ ಒಳ್ಳೆಯ ಕೆಲಸಗಳಿಗೆ ಪ್ರಾಮುಖ್ಯತೆ ನೀಡಬೇಕು. ಗೀತೆಯ ಜ್ಞಾನವನ್ನು ಸ್ವೀಕರಿಸೋಣ ಮತ್ತು ಅದನ್ನು ಅನುಷ್ಠಾನಗೊಳಿಸುವ ಮೂಲಕ ಜೀವನವನ್ನು ಸಾರ್ಥಕಗೊಳಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ತರಬಾಳು ಜಗದ್ಗುರು ಬ್ರೀಹಮಠದ ಡಾ.ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮೀಜಿ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ಸಂಸದ ಜಿ.ಎಂ. ಸಿದ್ದೇಶ್ವರ್, ಮೇಯರ್ ಜಯಮ್ಮ ಗೋಪಿ ನಾಯ್ಕ್, ಶ್ರೀ ಸೊಂಡ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾದರೇಂದ್ರ ಸರಸ್ವತಿ ಮಹಾಸ್ವಾಮೀಜಿ, ಶ್ರೀ ಮಹಾಯೋಗಿ ವೇಮನ ಸಂಸ್ಥಾನ ಮಠದ ಶ್ರೀ ವೇಮನಾನಂದ ಸ್ವಾಮಿಜಿ, ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ತ್ಯಾಗಿಶ್ವರಾನಂದ ಮಹಾರಾಜ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.