ದಾವಣಗೆರೆಯಲ್ಲೊಬ್ಬ ಹಸಿವಿಗೆ ಅನ್ನದಾತ, ಕಷ್ಟಕ್ಕೆ ಮಿಡಿವ ಹೃದಯವಂತ
ದಾವಣಗೆರೆ, ಆಗಸ್ಟ್ 05: ಪಕ್ಷಿಗಳಿಗೆ ಆಹಾರವಾಗಿ ತಮ್ಮ ಅಡಕೆ ತೋಟದಲ್ಲಿ ಕಾಳು ಸಿಗುವಂತೆ ಜೋಳದ ಬೆಳೆ ಬೆಳೆಯುವ ಮೂಲಕ ಹಕ್ಕಿ-ಪಕ್ಷಿಗಳಿಗೆ ರೈತರೋರ್ವರು ಅನ್ನದಾತನಾಗಿದ್ದಾರೆ.
Recommended Video
ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಾಮನೂರು ಚಂದ್ರಶೇಖರ್ ಸಂಕೋಳ್ ಅವರು ತಮ್ಮ ಮೂರು ಎಕರೆ ಕೃಷಿ ಜಮೀನಿನಲ್ಲಿ ಅಡಿಕೆ ತೋಟದ ಜತೆಗೆ ಜೋಳ ಬಿತ್ತಿದ್ದು, ಅದನ್ನು ಪಕ್ಷಿಗಳಿಗೆ ಆಹಾರಕ್ಕಾಗಿ ಮೀಸಲಿಟ್ಟಿದ್ದಾರೆ.
ಸಾಮಾನ್ಯವಾಗಿ ಜೂನ್ ಆರಂಭದಲ್ಲಿ ಜೋಳ ಬಿತ್ತನೆ ಮಾಡಲಾಗುತ್ತದೆ. ಆದರೆ ಚಂದ್ರಶೇಖರ್ ಸಂಕೋಳ್ ಏಪ್ರಿಲ್ ಕೊನೆ ವಾರದಲ್ಲಿ 20 ಸಾವಿರ ವೆಚ್ಚದಲ್ಲಿ ಊಟದ (ಹೈಬ್ರೀಡ್) ಜೋಳ ಬಿತ್ತಿ ಬೆಳೆಸಿದ್ದಾರೆ. ಬಿತ್ತನೆ ಅವಧಿಗೂ ಮುನ್ನವೇ ಜೋಳ ಬಿತ್ತಿದರೆ ಬೆಳೆ ಬರುವುದಿಲ್ಲ ಎಂದು ಸ್ನೇಹಿತರೆಲ್ಲ ಹೇಳಿದ್ದರು. ಆದರೆ ಯಾವುದೇ ಸಮಸ್ಯೆ ಇಲ್ಲದೆ ಉತ್ತಮ ಬೆಳೆ ಬಂದಿದ್ದು, ಬೆಳೆಯನ್ನು ಕಟಾವು ಮಾಡದೆ ಹಕ್ಕಿಗಳಿಗಾಗಿ ತಿನ್ನಲು ಬಿಟ್ಟಿದ್ದಾರೆ.

ಅಡಕೆ ತೋಟದಲ್ಲಿ ಜೋಳ ಬೆಳೆದು ಬಿಡಲು ನಿರ್ಧರಿಸಿದೆ
ಕೊರೊನಾ ವೈರಸ್ ಕಾಲಿಟ್ಟಾಗಿನಿಂದ ಅನ್ನ ನೀರಿಲ್ಲದೇ, ಜನರು, ಪ್ರಾಣಿ, ಪಕ್ಷಿಗಳು ಪರದಾಡಿದ್ದು ಸಾಕಷ್ಟು ಸುದ್ದಿ ಮಾಧ್ಯಮದಲ್ಲಿ ವರದಿಯಾಗಿರುವುದನ್ನು ನೋಡಿದ್ದೇನೆ. ನಾನು ಚಿಕ್ಕಂದಿನಿಂದಲೂ ಮನೆಯ ಮುಂದೆ ಬರುವ ಮನುಷ್ಯನೇ ಇಷ್ಟೊಂದು ಸಂಕಷ್ಟಪಡುತ್ತಿರುವಾಗ ಇನ್ನು ಪ್ರಾಣಿ ಪಕ್ಷಿಗಳ ಪಾಡೇನು ಎಂಬ ಆಲೋಚನೆ ಮಾಡುತ್ತಿದ್ದೆ. ಅವುಗಳಿಗಾಗಿ ಸ್ವಲ್ಪವಾದರೂ ನೆರವಾಗಬೇಕೆಂಬ ಉದ್ದೇಶದಿಂದ ಅಡಕೆ ತೋಟದಲ್ಲಿ ಜೋಳ ಬೆಳೆದು ಬಿಡಲು ನಿರ್ಧರಿಸಿದೆ ಎನ್ನುತ್ತಾರೆ ಚಂದ್ರಶೇಖರ್.

ಪರಿಶ್ರಮಕ್ಕೆ ನಿಸರ್ಗ ಮಾತೆ ಬೆನ್ನು ತಟ್ಟಿದಳು
"ನಿತ್ಯ ಗುಬ್ಬಚ್ಚಿ, ಕಾಗೆ, ಗಿಳಿ, ಪಾರಿವಾಳ ಹೀಗೆ ವಿವಿಧ ಬಗೆಯ ಪಕ್ಷಿಗಳು ಬಂದು ತೆನೆ ಮೇಲೆ ಬಂದು ಕುಳಿತು ಕಾಳನ್ನು ತಿಂದು ಹೋಗುತ್ತವೆ. ಅವುಗಳ ಹಾರಾಟ, ದನಿ ಕೇಳಿ 25 ಸಾವಿರ ಪಕ್ಷಿಗಳ ಹಿಂಡು ಬರುತ್ತವೆ. ಹಕ್ಕಿಗಳು ಕಾಳು ತಿನ್ನುವುದನ್ನು ನೋಡುವುದೇ ಖುಷಿ ಎಂದು ಸಂತಸಪಡುತ್ತಾರೆ. ಆಹಾರ ಅರಸಿ ಬರುವ ಹಕ್ಕಿಗಳು ಎಳಸು ಜೋಳದ ಕಾಳನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತಿವೆ. ಇದನ್ನು ಕಂಡು ಪ್ರತಿ ನಿತ್ಯ ಚಂದ್ರಶೇಖರ್ ಕಣ್ತುಂಬಿಕೊಳ್ಳುತ್ತಾ ತೃಪ್ತಿ ಕಂಡುಕೊಳ್ಳುತ್ತಿದ್ದಾರೆ. ನನ್ನ ಈ ಪರಿಶ್ರಮಕ್ಕೆ ನಿಸರ್ಗ ಮಾತೆ ಬೆನ್ನು ತಟ್ಟಿದಳು' ಎಂದು ಸಂತೃಪ್ತಿ ವ್ಯಕ್ತಪಡಿಸುತ್ತಾರೆ.

ಕೈಲಾದ ಮಟ್ಟಿಗೆ ನೆರವಾಗುವ ಅಭ್ಯಾಸ ಹೊಂದಿದ್ದಾರೆ
ಚಂದ್ರಶೇಖರ್ ಸಂಕೋಳ್ ಅವರು ಮಾಜಿ ಕಾರ್ಪೊರೇಟರ್ ಆದರೂ ಸಹ ಶಾಮನೂರು ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಯಾರಾದರೂ ಕಷ್ಟದಲ್ಲಿರುವುದು ಕಂಡು ಬಂದರೆ ಕೈಲಾದ ಮಟ್ಟಿಗೆ ನೆರವಾಗುವ ಅಭ್ಯಾಸ ಹೊಂದಿದ್ದು, ಚಂದ್ರಶೇಖರ್ ತಮ್ಮ ವ್ಯಾಪ್ತಿಯಲ್ಲಿ ಯಾರ ಮನೆಯಲ್ಲಾದರೂ ನಿಧನರಾದ ಮಾಹಿತಿ ಸಿಕ್ಕರೆ ಕೂಡಲೇ ಅಂತಹ ಮನೆಗೆ ಭೇಟಿ ಮಾಡಿ ಸಾಂತ್ವನ ಹೇಳುತ್ತಾರೆ.

ಪ್ರಕೃತಿ ಮೇಲಂತೂ ಅಪಾರ ಪ್ರೀತಿ ಅವರಿಗಿದೆ
ಬಡವರಾಗಿದ್ದವರಿಗೆ ಅಂತ್ಯ ಸಂಸ್ಕಾರಕ್ಕೆ ಸಹ ತಮ್ಮ ಕೈಲಾದಷ್ಟು ಹಣ ನೀಡಿ ನೆರವಾಗುವುದನ್ನು ಕಳೆದ ಅನೇಕ ವರ್ಷಗಳಿಂದಲೂ ರೂಡಿಸಿಕೊಂಡು ಬಂದವರಾಗಿದ್ದಾರೆ. ಹಾಗಾಗಿ ಈ ಭಾಗದ ಜನ ಮಾನಸದಲ್ಲಿ ಅಳಿಸದಷ್ಟು ಮಟ್ಟಕ್ಕೆ ನೆಲೆಯಾಗಿದ್ದಾರೆ. ಅಲ್ಲದೆ ಪ್ರಕೃತಿ ಮೇಲಂತೂ ಅಪಾರ ಪ್ರೀತಿ ಅವರಿಗಿದೆ ಎಂದೇ ಹೇಳಬಹುದು.












Click it and Unblock the Notifications