ಪಿಯುಸಿ, ಪದವಿ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ: ಆರಗ ಜ್ಞಾನೇಂದ್ರ
ದಾವಣಗೆರೆ, ಸೆಪ್ಟೆಂಬರ್ 2: "ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ತಡೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆ ಕೊಡಲಾಗಿದೆ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
"ಈಗಾಗಲೇ ಟನ್ಗಟ್ಟಲೇ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಯುವ ಪೀಳಿಗೆಯವರು ಅದರಲ್ಲಿಯೂ ಪಿಯುಸಿ, ಪದವಿ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದು ಗಂಭೀರ ವಿಚಾರವಾಗಿದೆ," ಎಂದು ತಿಳಿಸಿದರು.
"ಈಗಾಗಲೇ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುವ ಜಾಲ ಪತ್ತೆ ಹಚ್ಚಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡಬೇಡಿ ಎಂಬುದಾಗಿ ಸೂಚನೆ ನೀಡಿರುವುದಾಗಿ," ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಹೊನ್ನಾಳಿ ಪಟ್ಟಣಕ್ಕೆ ಭೇಟಿ ನೀಡಿದ ಅವರು, ಶಾಸಕ ಎಂ. ಪಿ. ರೇಣುಕಾಚಾರ್ಯರ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದರು. ಈಗಾಗಲೇ ಮಾದಕ ವಸ್ತುಗಳ ವಿರುದ್ಧ ಪೊಲೀಸರು ಬೇಟೆ ನಡೆಸುತ್ತಿದ್ದಾರೆ. ಇದು ನಿಲ್ಲದು ಎಂದು ಮಾಹಿತಿ ನೀಡಿದರು.

ನಾನ್ ಪೊಲೀಸ್ ಕೆಲಸ ಮಾಡಲ್ಲ
"ಕೆಲವೊಂದು ವೇಳೆ ಪೊಲೀಸರು ಕಠಿಣವಾಗಿ ವರ್ತನೆ ಮಾಡಬೇಕಾಗುತ್ತದೆ. ಜನರು ಸಹ ಸಹಕಾರ ನೀಡಿದರೆ ಅವರು ಆ ರೀತಿ ವರ್ತಿಸುವುದಿಲ್ಲ. ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ, ಮಾಡುತ್ತಿದ್ದೇನೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಹೊಸದಾಗಿಯೇನೂ ಬಂದಿಲ್ಲ. ಈ ಹಿಂದಿನಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತಮವಾಗಿ ಕೆಲಸ ಮಾಡುವವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದ ಅವರು, ನಾನು ಪೊಲೀಸ್ ಕೆಲಸ ಮಾಡಲು ಆಗುವುದಿಲ್ಲ," ಎಂದು ತಿಳಿಸಿದರು.

ಪೊಲೀಸ್ ಕಾನ್ಸ್ಟೆಬಲ್ಗಳ ಸಮಸ್ಯೆ ಆಲಿಸಿದ್ದೇನೆ
"ನಾನು ಪೊಲೀಸ್ ಕಾನ್ಸ್ಟೆಬಲ್ಗಳ ಮನೆಗೆ ಹೋಗಿದ್ದೇನೆ. ಶೇಕಡಾ 40ಕ್ಕೂ ಹೆಚ್ಚು ಪೊಲೀಸರು ಡಬಲ್ ಬೆಡ್ ರೂಂ ಮನೆ ಹೊಂದಿಲ್ಲ. ಅವರ ಭಾವನೆ, ಕಷ್ಟ- ನಷ್ಟ, ನೋವು ನಲಿವಿನ ಬಗ್ಗೆ ತಿಳಿಯುವ ಕೆಲಸ ಮಾಡಿದ್ದೇನೆ. ಇತಿಹಾಸದಲ್ಲಿ ಮೊದಲ ಬಾರಿ ಎಂಬಂತೆ ನಾನು ನೂರಾರು ಕಾನ್ಸ್ಟೆಬಲ್ಗಳ ಜೊತೆ ಸಂವಾದ ನಡೆಸಿದ್ದೇನೆ, ಅವರ ಭಾವನೆಗಳನ್ನು ಆಲಿಸಿದ್ದೇನೆ. ಮುಂಬರುವ ದಿನಗಳಲ್ಲಿ ಅವರಿಗೆ ಸೂಕ್ತ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ," ಎಂದು ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.

ಏನ್ ಹೇಳಿದ್ರೂ ಏನೇನೋ ಆಗುತ್ತೆ
"ಮೈಸೂರಿನ ಚಾಮುಂಡೇಶ್ವರಿ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಅಷ್ಟೊತ್ತಿಗೆ ಹೋಗಬಾರದಿತ್ತು ಎಂಬರ್ಥದಲ್ಲಿ ಹೇಳಿಕೆ ಕೊಟ್ಟಿದ್ದೆ. ಆದರೆ ಅದನ್ನೇ ಬೇರೆ ಬೇರೆ ರೀತಿಯಲ್ಲಿ ಚರ್ಚಿಸಲಾಯಿತು, ಆರೋಪ ಮಾಡಲಾಯಿತು. ಏನಾದರೂ ಹೇಳಿದರೆ ಇನ್ನೊಂದು ಏನೋ ಆಗುತ್ತಿದೆ. ಹೆಣ್ಣುಮಕ್ಕಳ ಮಾನ, ಪ್ರಾಣ ಎರಡಕ್ಕೂ ಆದ್ಯತೆ ನೀಡಲಾಗುವುದು. ಏಳೂವರೆಗೆ ಅಲ್ಲಿಗೆ ಯಾಕೆ ಹೋಗುತ್ತಿಯಾ ಅಂತಾ ಸಹೋದರರು, ಪೋಷಕರು ಕೇಳುವುದು ಸಾಮಾನ್ಯ. ನಮ್ಮ ಮನೆಯಲ್ಲಿಯಾದರೂ ನಾವು ಕೇಳುತ್ತೇವೆ ಅಲ್ವಾ?. ಅದೇ ರೀತಿಯಲ್ಲಿ ಹೇಳಿದ್ದೇ ಅಷ್ಟೇ. ವಿರೋಧ ಪಕ್ಷದವರಿಗೆ ಆರೋಪ ಮಾಡಲು ಬೇರೆ ವಿಚಾರ ಇಲ್ಲ. ಈ ಕಾರಣಕ್ಕೆ ವಿನಾಕಾರಣ ಆರೋಪ ಮಾಡುತ್ತಾರೆ," ಎಂದು ಹೇಳಿದರು.

ಪೊಲೀಸ್ ಇಲಾಖೆಯತ್ತ ಯುವಕರು ಆಕರ್ಷಿತರಾಗುತ್ತಿದ್ದಾರೆ
"ಇತ್ತೀಚಿನ ದಿನಗಳಲ್ಲಿ ಯುವಕರು ಪೊಲೀಸ್ ಇಲಾಖೆಯತ್ತ ಆಕರ್ಷಿತರಾಗುತ್ತಿದ್ದಾರೆ. ನಾನು ಕಡೂರಿಗೆ ಹೋದಾಗ ಪೊಲೀಸ್ ಇಲಾಖೆಗೆ ಸೇರಲು ತರಬೇತಿಗೆ ಬಂದವರು ಹೆಚ್ಚಿನವರು ಓದಿದವರೇ. 50ಕ್ಕೂ ಹೆಚ್ಚು ಯುವಕರು ಇಂಜಿನಿಯರಿಂಗ್ ಓದಿ ವಿದ್ಯಾರ್ಥಿಗಳು ಬಂದಿದ್ದರೆ, 30 ರಿಂದ 40 ಯುವಕರು ಪಿಯುಸಿ ಓದಿದವರು. ಇನ್ನುಳಿದವರು ಪದವಿ ಅಭ್ಯಾಸ ಮಾಡಿದವರು. ಇಲಾಖೆಗೆ ವಿದ್ಯಾವಂತರು ಹೆಚ್ಚಾಗಿ ಬರುತ್ತಿರುವುದು ಖುಷಿಯ ವಿಚಾರ," ಎಂದು ಗೃಹ ಸಚಿವರು ತಿಳಿಸಿದರು.
Recommended Video

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ
ಇನ್ನು ಹೊನ್ನಾಳಿ ಪಟ್ಟಣದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಲಾರ್ಪಣೆ ಮಾಡಿದರು. ಈ ವೇಳೆ ಶಾಸಕ ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಬಿಜೆಪಿಯ ಪ್ರಮುಖರು ಹಾಜರಿದ್ದರು. ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿದ ಆರಗ ಜ್ಞಾನೇಂದ್ರರನ್ನು ರೇಣುಕಾಚಾರ್ಯ ಆತ್ಮೀಯವಾಗಿ ಬರಮಾಡಿಕೊಂಡರು. ತಮ್ಮ ನಿವಾಸಕ್ಕೆ ಆಗಮಿಸಿದ ಸಚಿವರ ಜೊತೆ ಸಮಾಲೋಚನೆ ನಡೆಸಿದರು.












Click it and Unblock the Notifications