ಹೀಗೊಂದು ವಿಶೇಷ: ಕುಟುಂಬ ಸಮೇತರಾಗಿ ಕಾಂತಾರ ವೀಕ್ಷಿಸಿದ ಪೊಲೀಸರು
ದಾವಣಗೆರೆ ಅಕ್ಟೋಬರ್ 22: ಕರುನಾಡಿನಲ್ಲಿ ಈಗ ಕಾಂತಾರದ್ದೇ ಕ್ರೇಜ್. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಈ ಸಿನಿಮಾದ್ದೇ ಎಲ್ಲೆಡೆ ಸುದ್ದಿ. ವಿವಾದ, ಚಿತ್ರದ ಮೇಕಿಂಗ್, ರಿಷಬ್ ಶೆಟ್ಟಿ ನಟನೆ ಸೇರಿದಂತೆ ಚಿತ್ರ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಸ್ಯಾಂಡಲ್ವುಡ್ ಅಷ್ಟೇ ಅಲ್ಲ, ಕಾಲಿವುಡ್, ಬಾಲಿವುಡ್, ಮಾಲಿವುಡ್, ಟಾಲಿವುಡ್ನಲ್ಲಿ ಹವಾ ಸೃಷ್ಟಿಸಿದೆ.
ಬೆಣ್ಣೆನಗರಿ ದಾವಣಗೆರೆಯಲ್ಲೂ ಕಾಂತಾರ ಹವಾ ಜೋರಾಗಿದೆ. ಜಿಲ್ಲೆಯ ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಸಿಬ್ಬಂದಿ ಕಾಂತಾರ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಯಾವಾಗಲೂ ಕೆಲಸದ ಒತ್ತಡದಲ್ಲಿ ಇರುತ್ತಿದ್ದ ಪೊಲೀಸ್ ಸಿಬ್ಬಂದಿ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.
ದಾವಣಗೆರೆಯಲ್ಲಿ ದುಪ್ಪಟ್ಟಾಯ್ತು ಹೂ ದರ: ದಸರಾಕ್ಕಿಂತ ದೀಪಾವಳಿಗೆ ಹಣ್ಣು ಅಗ್ಗ
ದಾವಣಗೆರೆಯಲ್ಲಿ ಪೊಲೀಸರು ಸ್ವಲ್ಪ ಬಿಡುವು ಮಾಡಿಕೊಂಡು ಚಿತ್ರ ವೀಕ್ಷಣೆ ಮಾಡಿದ್ದಾರೆ. ಒಂದು ಪ್ರದರ್ಶನ ಬುಕ್ ಮಾಡಿ ಫ್ಯಾಮಿಲಿ ಜೊತೆ ಬಂದು ಕಾಂತಾರ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸಿನಿಮಾದ ವೈಭವ ಕಣ್ತುಂಬಿಕೊಂಡರು. ನಗರದ ಗೀತಾಂಜಲಿ ಚಿತ್ರಮಂದಿರದ ಮಾಲೀಕರ ಸಹಕಾರದಿಂದ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರಿಗೆ ಪ್ರತ್ಯೇಕ ಶೋ ವ್ಯವಸ್ಥೆ ಮಾಡಲಾಗಿತ್ತು. ಈ ಚಿತ್ರಮಂದಿರದಲ್ಲಿ ಕಾಂತಾರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು, ಕಾಂತಾರ ಟಿಕೆಟ್ಗಾಗಿ ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ. ಟಿಕೆಟ್ ಕೂಡ ಮುಂಗಡವಾಗಿ ಬುಕ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಸೇರಿ ಸಿನಿಮಾ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.
ಈ ಬಗ್ಗೆ ಪೊಲೀಸ್ ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, "ಯಾವಾಗಲೂ ಕೆಲಸದ ಒತ್ತಡದಲ್ಲಿ ಇರುತ್ತಿದ್ದೆವು. ರಕ್ಷಣೆ, ಭದ್ರತೆ, ಅಪರಾಧ ಪ್ರಕರಣಗಳು ಹೀಗೆ ಬ್ಯುಸಿ ಇರುತ್ತಿದ್ದೆವು. ಸಿನಿಮಾ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ವೀಕ್ಷಣೆ ಮಾಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಭೂತಕೋಲದ ಬಗ್ಗೆ ಅತ್ಯುತ್ತಮವಾಗಿ ಮೂಡಿಬಂದಿದೆ. ಕರಾವಳಿ ಜನರ ನಂಬಿಕೆಯಾಗಿರುವ ಭೂತಕೋಲದ ಬಗ್ಗೆ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ವೃಷಬ್ ಶೆಟ್ಟಿ, ಕಿಶೋರ್ ಸೇರಿದಂತೆ ಎಲ್ಲರ ನಟನೆ ಸೂಪರ್. ಸಿನಿಮಾ ಮುಗಿಯುವವರೆಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅತ್ಯುತ್ತಮ ಚಿತ್ರ ಎಂದರೆ ಉತ್ಪ್ರೇಕ್ಷೆ ಆಗದು. ಅದರಲ್ಲಿಯೂ ಕುಟುಂಬದ ಸಮೇತ ಪೊಲೀಸ್ ಸಿಬ್ಬಂದಿ ವೀಕ್ಷಣೆ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ" ಎಂದು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಂತಸ ಹಂಚಿಕೊಂಡರು.
ಕಾಂತಾರ ಸಿನಿಮಾ ಬಿಡುಗಡೆಯಾದ ದಿನದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಚಿತ್ರಕ್ಕೆ ದಿಗ್ಗಜ ನಟರೆಲ್ಲರೂ ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ. ದಾವಣಗೆರೆಯಲ್ಲಿಯೂ ಸಹ ಕಾಂತಾರ ಸಿನಿಮಾ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.