ಮಾಸ್ಕ್ ಹಾಕದೆ ಸಂಚರಿಸುತ್ತಿದ್ದ ದಾವಣಗೆರೆ ಜನರು: ದಂಡ ವಸೂಲಿ ಮಾಡಿದ ಡಿಸಿ-ಎಸ್ಪಿ
ದಾವಣಗೆರೆ, ಅಕ್ಟೋಬರ್ 9: ಮಾಸ್ಕ್ ಇಲ್ಲದೆ ದಾವಣಗೆರೆ ನಗರ ಪ್ರದೇಶದಲ್ಲಿ ಸಂಚರಿಸುತ್ತಿದ್ದವರಿಗೆ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಜಂಟಿಯಾಗಿ ರಸ್ತೆಗಿಳಿದು ಮಾಸ್ಕ್ ವಿತರಿಸಿ, ಜಾಗೃತಿ ಮೂಡಿಸಿದರಲ್ಲದೇ, ದಂಡ ವಿಧಿಸಿ ಪುನಃ ಮಾಸ್ಕ್ ಧರಿಸದೇ ಸಾರ್ವಜನಿಕವಾಗಿ ಓಡಾಡದಂತೆ ಮುನ್ನೆಚ್ಚರಿಕೆ ನೀಡಿದರು.
ಕೋವಿಡ್-19 ಸೋಂಕು ತಡೆಗಟ್ಟಲು ಮಾಸ್ಕ್ ಇಲ್ಲದೆ ನಗರ ಪ್ರದೇಶದಲ್ಲಿ ಸಂಚರಿಸುವವರಿಗೆ ೫೦೦ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಬಳಸದಿದ್ದರೆ 250 ರೂ. ದಂಡ ವಸೂಲಾತಿಗೆ ರಾಜ್ಯ ಸರ್ಕಾರ ಮರು ಆದೇಶಿಸಿದೆ. ಮನೆಯಿಂದ ಹೊರಗಡೆ ಬಂದರೆ ಮಾಸ್ಕ್ ಮತ್ತು ಅಂತರ ಕಾಯ್ದುಕೊಳ್ಳಬೇಕು. ಈ ಎರಡು ಬಹಳ ಮುಖ್ಯ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ನಿಯಮವನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಮಾಸ್ಕ್ ಧರಿಸುವಂತೆ ಅರಿವು
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ನಗರದ ವಿವಿದೆಡೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಬ್ಬರೂ ಸಹ ರಸ್ತೆಗಿಳಿದು ಮಾಸ್ಕ್ ಜಾಗೃತಿ ಅಭಿಯಾನ ನಡೆಸಿದರು. ಮಾಸ್ಕ್ ಧರಿಸದೇ ಸುತ್ತಾಡುವವರನ್ನು ತರಾಟೆಗೆ ತೆಗೆದುಕೊಂಡರು. ಮಾಸ್ಕ್ ಧರಿಸುವಂತೆ ಅರಿವು ಮೂಡಿಸಿದರು.

350 ಮಂದಿಗೆ ಮಾಸ್ಕ್ ನೀಡಿ ದಂಡ ವಸೂಲಿ
ದಾವಣಗೆರೆ ನಗರದ ಅರಳಿಮರ ವೃತ್ತದಿಂದ ಅಭಿಯಾನ ಆರಂಭಿಸಿದ ಈ ಇಬ್ಬರೂ, ವಿದ್ಯಾನಗರ ಮುಖ್ಯ ರಸ್ತೆ, ಮಾಮಾಸ್ ಜಾಯಿಂಟ್ ರಸ್ತೆ, ಡೆಂಟಲ್ ಕಾಲೇಜ್ ರಸ್ತೆ, ಎಂಸಿಸಿ ಬಿ ಬ್ಲಾಕ್, ಕೃಷ್ಣಯ್ಯ ಶ್ರೇಷ್ಟಿ ಪಾರ್ಕ್ ಹಾಗೂ ಪ್ರಮುಖ ಹೋಟೆಲ್, ಜಿಮ್, ಬಟ್ಟೆ ಅಂಗಡಿ ಸೇರಿದಂತೆ ನಗರದ ಕೆಲವೆಡೆ ಜಿಲ್ಲಾಧಿಕಾರಿಗಳು ಸಂಚರಿಸಿ ಮಾಸ್ಕ್ ಹಾಕದೆ ಇರುವ ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸಿ ಅವರಿಗೆ ಮಾಸ್ಕ್ ನೀಡಿ 250 ರೂ. ದಂಡ ವಸೂಲಿ ಮಾಡಿದರು. ಒಟ್ಟು 350 ಮಂದಿಗೆ ಮಾಸ್ಕ್ ನೀಡಿ ದಂಡ ವಸೂಲಿ ಮಾಡಲಾಯಿತು.

84 ಲಕ್ಷ ರುಪಾಯಿ ದಂಡ ವಸೂಲಿಯಾಗಿದೆ
ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕೋವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಇತ್ತಿಚಿಗೆ ಸರ್ಕಾರದ ಆದೇಶದಂತೆ ನಗರ ಪ್ರದೇಶದಲ್ಲಿ 500 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಬಳಸದಿದ್ದರೆ 250 ರೂ. ದಂಡ ವಿಧಿಸಲು ಕ್ರಮ ಕೈಗ್ಗೊಳಲು ನಮಗೆ ಆದೇಶಿಸಿದ್ದಾರೆ. ಒಟ್ಟು ಮಾರ್ಚ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ನಗರದಲ್ಲಿ 84 ಲಕ್ಷ ರುಪಾಯಿ ದಂಡ ವಸೂಲಿಯಾಗಿದೆ ಎಂದರು.

ಜನರ ಮನ ಪರಿವರ್ತನೆ ಆಗಬೇಕು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಮಾಸ್ಕ್ ಮತ್ತು ಅಂತರ ಕಾಯ್ದುಕೊಳ್ಳುವುದು ಸರ್ಕಾರದ ಆದೇಶದಂತೆ ಎಲ್ಲರೂ ದೈನಂದಿನ ಜೀವನ ಶೈಲಿಯಾಗಿ ರೂಢಿಸಿಕೊಳಬೇಕು. ಯಾವುದೇ ಒತ್ತಾಯದಿಂದ ಮಾಡುವುದಲ್ಲ. ಜನರ ಮನ ಪರಿವರ್ತನೆ ಆಗಬೇಕು. ಸರ್ಕಾರದ ಸೂಚನೆಗಳನ್ನು ಗಂಭೀರವಾಗಿ ಪಾಲಿಸಬೇಕು ಎಂದರು. ಈ ಜಾಗೃತಿ ಅಭಿಯಾನದಲ್ಲಿ ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಪೊಲೀಸ್ ಇಲಾಖಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.












Click it and Unblock the Notifications