ಸಿಎಂ ಕಾರಿಗೆ ಮುತ್ತಿಗೆ ಯತ್ನ; ಪೊಲೀಸರ ಜೊತೆ ಮಾತಿನ ಚಕಮಕಿ
ದಾವಣಗೆರೆ, ಫೆಬ್ರವರಿ 20; ಹರಿಹರ ನಗರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಕಾರಿಗೆ ಘೇರಾವ್ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ರಾಘವೇಂದ್ರ ಸ್ವಾಮಿ ಮಠ ಸಮೀಪದ ತುಂಗಭದ್ರಾ ನದಿತೀರದಲ್ಲಿ ಏರ್ಪಡಿಸಿದ್ದ ತುಂಗಾರತಿ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿಗಳು ವಾಪಸಾಗುತ್ತಿದ್ದ ವೇಳೆ ಪ್ರತಿಭಟನಾಕಾರರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಜನರನ್ನು ಚದುರಿಸಿದ ಪೊಲೀಸರು ಸಿಎಂ ಮತ್ತು ಸಚಿವರ ಕಾರುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹರಿಹರ ನಗರಸಭೆಯ ನೂತನ ಕಟ್ಟಡ, ಸುಸಜ್ಜಿತ ಕನ್ನಡ ಭವನ ಹಾಗೂ ಸೂಪರ್ ಮಾರ್ಕೆಟ್ ನಿರ್ಮಾಣ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿ ಬೆಡ್ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.

ಕಳೆದ ಐದಾರು ವರ್ಷಗಳಿಂದ ಕಳಪೆಯಾಗಿ ಸಂಚಾರಕ್ಕೆ ಯೋಗ್ಯವಾಗಿರದಿದ್ದ ರಸ್ತೆಯನ್ನು ಮುಖ್ಯಮಂತ್ರಿ ಆಗಮನದ ಹಿನ್ನಲೆಯಲ್ಲಿ ಮಣ್ಣು ಹಾಕಿ ತರಾತುರಿಯಲ್ಲಿ ದುರಸ್ತಿ ಮಾಡಿದ್ದು ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಕೇಸರಿ ವಸ್ತ್ರದಲ್ಲಿ ಮಿಂಚಿದ ಸಿಎಂ; ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಿಹರ ನಗರದಲ್ಲಿ ತುಂಗಾಭದ್ರಾ ಆರತಿ ಮಂಟಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ ಹಣೆಯಲ್ಲಿ ವಿಭೂತಿ, ಕೇಸರಿ ವಸ್ತ್ರ ಧರಿಸಿ ಗಮನ ಸೆಳೆದರು.

ತುಂಗಾಭದ್ರಾ ನದಿಯ ತಟದಲ್ಲಿ 108 ಆರತಿ ಮಂಟಪಗಳಿಗೆ ಶಂಕು ಸ್ಥಾಪನೆಯನ್ನು ಗಂಗಾ ಪೂಜೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು. ಉತ್ತರ ಭಾರತದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಗಂಗಾರತಿ ಕಾರ್ಯಕ್ರಮದಂತೆ ದಕ್ಷಿಣ ಕಾಶಿ ಹರಿಹರದಲ್ಲೂ ತುಂಗಾರತಿ ಕಾರ್ಯಕ್ರಮ ನಡೆಸಲಾಗುತ್ತದೆ.
ಸುಮಾರು 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭವ್ಯ ಮಂಟಪ ಹಾಗೂ ಉದ್ಯಾನವನ ಇಲ್ಲಿನ ತುಂಗಾಭದ್ರ ನದಿಯ ತಟದಲ್ಲಿರುವ ರಾಘವೇಂದ್ರ ಮಠದ ಬಳಿ ನೆರವೇರಿತು. ಪಂಚಮಸಾಲಿ ಪೀಠದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಭೈರತಿ ಬಸವರಾಜ್, ಸಂಸದ ಸಿದ್ದೇಶ್ವರ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಕೆಲ ಕಾಲ ಧ್ಯಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಂತರ ಕೇಸರಿ ವಸ್ತ್ರದೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಇನ್ನು ಸಚಿವರಾದ ಮುರುಗೇಶ್ ನಿರಾಣಿ, ಭೈರತಿ ಬಸವರಾಜ್, ಸಂಸದ ಸಿದ್ದೇಶ್ವರ್, ವಚನಾನಂದ ಸ್ವಾಮೀಜಿ ಅವರು ಹಣೆಗೆ ವಿಭೂತಿ, ಕೇಸರಿ ಶಾಲು ಹೊದಿಸಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಹರಿಹರದ ಅಭಿವೃದ್ಧಿ; ಹರಿಹರದ ತುಂಗಭದ್ರಾ ನದಿಯ ತಟದಲ್ಲಿ ಸುಮಾರು 30 ಕೋಟಿ ರೂ ವೆಚ್ವದಲ್ಲಿ ತುಂಗಾರತಿ ಯೋಗಮಂಟಪದ ಶಂಕುಸ್ಥಾಪನೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, "ನಮ್ಮ ಬದುಕಿನ ಮೂಲವಾದ ಜಲಮೂಲದ ರಕ್ಷಣೆ, ಸ್ವಚ್ಛತೆ ಇಂದು ನಡೆದಿದೆ. ನಮ್ಮ ಎಲ್ಲಾ ನಾಗರಿಕತೆಗಳು ನದಿತಟದಲ್ಲಿಯೇ ಬೆಳೆದಿವೆ" ಎಂದರು.
"ಬಾಂಬೆ-ಚನ್ನೈ ಕಾರಿಡಾರ್ ಯೋಜನೆಗೆ ಹರಿಹರ ನಗರವೂ ಒಳಪಡಲಿದ್ದು, ಹರಿಹರದಲ್ಲಿ ಕೈಗಾರಿಕೆಗಳ ಅಭಿವೃದ್ದಿ ಹಾಗೂ ಹರಿಹರ ದಾವಣಗೆರೆ ನಗರಗಳಲ್ಲಿ ಉದ್ಯೋಗವಕಾಶಗಳ ಹೆಚ್ಚಳಕ್ಕೆ ನಮ್ಮ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ" ಎಂದು ಭರವಸೆ ನೀಡಿದರು.
"ಈಗಾಗಲೇ ರಸ್ತೆ ಅಭಿವೃದ್ಧಿಗೆ 22 ಕೋಟಿ ಬಿಡುಗಡೆ ಮಾಡಿದ್ದೇನೆ. 59 ಕಿಲೋಮೀಟರ್ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಮಂಜೂರು ನೀಡಿದ್ದೇವೆ. ನಗರೋತ್ಥಾನದಲ್ಲಿ 40 ಕೋಟಿ ರೂಪಾಯಿ ಮಂಜೂರಾಗಲಿದೆ. ಭೈರನಪಾದ ನೀರಾವರಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು, ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ" ಎಂದರು.
"ಬೈರನಪಾದ ಏತ ನೀರಾವರಿ ನನೆಗುದಿಗೆ ಬಿದ್ದಿದೆ. ಅದು ಮತ್ತೆ ಚಾಲನೆಗೊಳ್ಳಬೇಕು. ಹಾಗೆಯೇ ಎಲ್ಲ ಕೈಗಾರಿಕೆಗಳು ಇಲ್ಲಿಗೆ ಬರಬೇಕು ಎಂಬುದು ನಮ್ಮ ಸರ್ಕಾರದ ಧ್ಯೇಯ, ಹರಿಹರದೊಂದಿಗೆ ಪಕ್ಕದ ರಾಣೆಬೆನ್ನೂರು ಅಭಿವೃದ್ದಿಗೂ ಆದ್ಯತೆ ನೀಡಲಾಗುವುದು" ಎಂದು ಹೇಳಿದರು.












Click it and Unblock the Notifications