ಜನ್ ಧನ್ ಖಾತೆಗೆ ಹಣ: ಬ್ಯಾಂಕ್ ಮುಂದೆ ಜನವೋ ಜನ
ದಾವಣಗೆರೆ, ಏಪ್ರಿಲ್ 09: ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಜನ್ ಧನ್ ಖಾತೆಗೆ ಹಣ ಹಾಕಿದ್ದೆ ತಡ ಜನ ಬ್ಯಾಂಕುಗಳು ಮುಂದೆ ಹಣ ಬಿಡಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ.
Recommended Video
ದಾವಣಗೆರೆ ನಗರದ ಬಹುತೇಕ ಬ್ಯಾಂಕುಗಳು ಮುಂದೆ ಕೊರೊನಾ ರೋಗದ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ ನಾ ಮುಂದು ತಾ ಮುಂದು ಎಂದು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಯಾವುದೇ ಸಾಮಾಜಿಕ ಅಂತರ ಇಲ್ಲದಿರುವುದು ಎದ್ದು ಕಾಣುತ್ತಿದೆ.
ಪ್ರತಿ ಜನಧನ್ ಖಾತೆಗೆ ಮುಂದಿನ ಮೂರು ತಿಂಗಳವರೆಗೆ ಮಾಸಿಕ 500 ರೂ. ಹಾಕುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಅದರ ಮೊದಲ ಕಂತನ್ನು ದಾವಣಗೆರೆ ಜಿಲ್ಲೆಯ ಜನರ ಖಾತೆಗೆ ಹಣ ಜಮೆ ಮಾಡಿದೆ.

ನಗರದ ಯುಕೋ ಬ್ಯಾಂಕ್ ಮುಂಭಾಗ ಗುರುವಾರ ಜನರು ಸುರಿಯುವ ಬಿಸಿಲು, ಕೊರೊನಾ ವೈರಾಣು ತಾಗುವ ಯಾವುದೇ ಅಳುಕಿಲ್ಲದೆ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಸರದಿ ಸಾಲಿನಲ್ಲಿ ಜನರು ಒಬ್ಬರಿಗೊಬ್ಬರು ತಾಗಿಕೊಂಡೆ ಗಂಟೆಗಟ್ಟಲೇ ನಿಂತಿದ್ದರು. ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತುಕೊಳ್ಳುವಂತೆ ಹೇಳುವ ಕೆಲಸವನ್ನು ಬ್ಯಾಂಕಿನ ಯಾವ ಸಿಬ್ಬಂದಿಯೂ ಮಾಡಲಿಲ್ಲ.
ಪೊಲೀಸರಾಗಲಿ, ಇತರೆ ಯಾವುದೇ ಸಂಘ ಸಂಸ್ಥೆಗಳ ಸ್ವಯಂಸೇವಕರಾಗಲಿ ಜನರಿಗೆ ತಿಳಿ ಹೇಳುವ ಯಾವುದೇ ಕಾರ್ಯಕ್ಕೆ ಮುಂದಾಗಲಿಲ್ಲ.
ಇದು ಕೇವಲ ಯುಕೋ ಬ್ಯಾಂಕ್ ಒಂದರ ಮುಂದಿನ ಪರಿಸ್ಥಿತಿಯಲ್ಲ ಬದಲಿಗೆ ಜನ್ ಧನ್ ಖಾತೆ ಹೊಂದಿರುವ ಎಲ್ಲ ಬ್ಯಾಂಕುಗಳ ಮುಂದೆ ಕಳೆದ ಒಂದೆರಡು ದಿನಗಳಿಂದ ಕಂಡುಬರುತ್ತಿರುವ ಸಾಮಾನ್ಯ ದೃಶ್ಯ ವಾಗಿದೆ.
ಜಿಲ್ಲೆಯಲ್ಲಿ 6 ಲಕ್ಷಕ್ಕೂ ಅಧಿಕ ಜನ್ ಧನ್ ಖಾತೆದಾರರಿದ್ದು. ಈ ಎಲ್ಲ ಗೃಹಿಣಿಯರು ಕುಟುಂಬದ ನಿರ್ವಹಣೆಗಾಗಿ ಹಣ ಬಿಡಿಸಿಕೊಳ್ಳಲು ಒಮ್ಮೆಲೆ ಬ್ಯಾಂಕುಗಳ ಮುಂದೆ ಜಮಾಯಿಸಿದರೆ ಅದರಿಂದಾಗುವ ಸಾಮಾಜಿಕ ದುಷ್ಪರಿಣಾಮದ ಬಗ್ಗೆ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೊರೊನಾ ಹರಡದಂತೆ ಸರ್ಕಾರದ ಮಾರ್ಗ ಸೂಚಿಗಳನ್ನು ಅನುಸರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇದಕ್ಕೊಂದು ನೀತಿ ನಿಯಮ ರೂಪಿಸದಿದ್ದರೆ ದಾವಣಗೆರೆ ಜಿಲ್ಲೆ ಕೊರೊನಾ ಮುಕ್ತವಾಗಲು ಸಾಧ್ಯವಾಗದು ಎನ್ನುವುದು ಅನೇಕರ ಅಭಿಪ್ರಾಯ.












Click it and Unblock the Notifications