ಉಜ್ಜಯಿನಿ ಪೀಠ ಓಡಿ ಬಂದ ಮಹಿಳೆ ಇದ್ದಂತೆ ಎಂದ ಕೇದಾರ ಶ್ರೀಗಳ ವಿರುದ್ಧ ಪಂಚಪೀಠದ ಸ್ವಾಮೀಜಿಗಳ ಕಿಡಿ
ಉಜ್ಜಯಿನಿ ಪೀಠ ಓಡಿ ಬಂದ ಮಹಿಳೆ ಇದ್ದಂತೆ ಎನ್ನುವ ಕೇದಾರ ಶ್ರೀಗಳ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪಂಚಪೀಠದ ಮೂರು ಪೀಠಗಳ ಶ್ರೀಗಳು ಭೀಮಶಂಕರ ಲಿಂಗ ಸ್ವಾಮೀಜಿ ಕ್ಷಮೆಯಾಚಿಸಲೇಬೇಕು ಎಂದು ಆಗ್ರಹಿಸಿದ್ದಾರೆ.
ದಾವಣಗೆರೆ, ಜನವರಿ 31: 'ಉಜ್ಜಯಿನಿ ಪೀಠ ಓಡಿ ಬಂದ ಮಹಿಳೆ ಇದ್ದಂತೆ' ಎಂಬ ಹೇಳಿಕೆ ನೀಡಿದ್ದ ಕೇದಾರ ಪೀಠದ ಜಗದ್ಗುರು ಭೀಮಶಂಕರ ಲಿಂಗ ಸ್ವಾಮೀಜಿ, ಈ ಹೇಳಿಕೆಯನ್ನು ಹಿಂಪಡೆಯಬೇಕು. ಕೂಡಲೇ ಕ್ಷಮೆಯಾಚಿಸಬೇಕು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಚಾನುಕೋಠಿಯ ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯರು ಹಾಗೂ ಮಲಯ ಶಾಂತಮುನಿ ಶಿವಾಚಾರ್ಯರು, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರು ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಮ್ಮ ಮಾತು ತಪ್ಪಿದೆ, ತಿದ್ದುಕೊಳ್ಳಿ ಎಂಬುದು ನಮ್ಮ ಮೊದಲ ಹೆಜ್ಜೆ. ಉಜ್ಜಯಿನಿ ಪೀಠದ ಬಗ್ಗೆ ಯಾಕೆ ಕೀಳಾಗಿ ಮಾತನಾಡಬೇಕು. ಸಮಾಜದವರಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಧರ್ಮಪೀಠದಲ್ಲಿ ಕುಳಿತವರು ಸಂವಿಧಾನದ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ಶ್ರೀ ಕೇದಾರ ಜಗದ್ಗುರುಗಳು ಇತ್ತೀಚೆಗೆ ಹರಿಹರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಶ್ರೀ ರಂಭಾಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ದೇಶದ ಸಂವಿಧಾನದ ಬಗ್ಗೆ ತೀರಾ ಅವಹೇಳನಕಾರಿಯಾಗಿ ಮಾತನಾಡಿರುವುದು ಎಲ್ಲರ ಮನಸ್ಸಿಗೆ ಘಾಸಿಯುಂಟು ಮಾಡಿದೆ ಎಂದರು.
ಶ್ರೀ ಕೇದಾರ ಜಗದ್ಗುರುಗಳವರಿಗೆ ತನ್ನ ತಪ್ಪಿನ ಅರಿವು ಮಾಡಿಕೊಳ್ಳಬೇಕು. ಶ್ರೀ ಕೇದಾರ ಜಗದ್ಗುರು ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಪೀಠದ ವಿಚಾರದಲ್ಲಿ ತೀರ ಅವಹೇಳನಕಾರಿ ಪದಗಳನ್ನು ಬಳಸಿ ಮಾತನಾಡಿದ್ದು ಸಮಸ್ತ ಪಂಚಪೀಠಗಳ ಅಪಾರವಾದ ಭಕ್ತ ಸಮೂಹಕ್ಕೆ ಆಘಾತ ಉಂಟು ಮಾಡಿದೆ ಎಂದು ಹೇಳಿದರು.
ಪರಶಿವನ ಸಾಕ್ಷಾತ್ ಪಂಚಮುಖಗಳೆಂದು ಭಾವಿಸಿ ಈ ಐದು ಪೀಠಗಳನ್ನು ಜನತೆ ಶ್ರದ್ಧಾ, ಭಕ್ತಿಪೂರ್ವಕ ಸಮಾನವಾಗಿ ಗೌರವಿಸುತ್ತಾ ಬಂದಿದ್ದಾರೆ. ಪಂಚಪೀಠದ ಜಗದ್ಗುರು ಒಬ್ಬರು ಸಮಾನ ಪೀಠದ ಬಗ್ಗೆ ಅಸಂಬದ್ಧ ಪದಗಳನ್ನು ಬಳಸಿ ಮಾತನಾಡಿರುವುದು ಪೀಠಗಳ ಗುರು ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಧರ್ಮ ಸಭೆಗೆ ಬರುವ ಭಕ್ತರು ಗುರು ಸ್ಥಾನದಿಂದ ಧರ್ಮ ಬೋಧನೆಯನ್ನು ತಿಳಿಯಲು ಬರುತ್ತಾರೆ. ಆದರೆ ಧರ್ಮದ ದಾರಿ ತಪ್ಪಿಸುವ ಇಂತಹ ಹೇಳಿಕೆಗಳು ಗುರುಸ್ಥಾನಕ್ಕೆ ಮಾಡಿದ ಅಪಚಾರವಾಗಿವೆ. ಇದರಿಂದ ಪೀಠಾಧಿಮಾನಿಗಳು ಗುರುಸ್ಥಾನದ ಬಗ್ಗೆ ಭ್ರಮನಿರಸನ ಆಗುವಂತೆ ಮಾಡಿದೆ. ಇದೇ ವೇದಿಕೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಅನೇಕ ಶಿವಾಚಾರ್ಯರು ಉಪಸ್ಥಿತರಿದ್ದರೂ ಅವರ ಮಾತಿಗೆ ಮೌನಸಮ್ಮತಿ ಸೂಚಿಸಿದ್ದು ಕೂಡ ತುಂಬಾ ಆಶ್ಚರ್ಯಕರ. ಕೇದಾರ ಜಗದ್ಗುರುಗಳು ದೇಶದ ಸಂವಿಧಾನದ ಬಗ್ಗೆಯೂ ತೀರಾ ಅಗೌರವದಿಂದ ಮಾತನಾಡುವ ಮೂಲಕ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು.
ಒಂದೆಡೆ ಧರ್ಮ, ಇನ್ನೊಂದೆಡೆ ದೇಶ ಎರಡಕ್ಕೂ ಅಪಚಾರ ಮಾಡಿದ ಇಂತಹ ಪೀಠಾಧಿಪತಿಗಳ ನಡೆನುಡಿಗಳು ಪೀಠಗಳ ಪರಂಪರೆಗೆ ಕಪ್ಪು ಚುಕ್ಕಿಯಾಗಿ ಪರಿಣಮಿಸಿವೆ. ಸಾಮಾಜಿಕ ಹಾಗೂ ಧಾರ್ಮಿಕ ವ್ಯವಸ್ಥೆಯಲ್ಲಿ ಯಾರು ಯಾವುದೇ ಸ್ಥಾನಮಾನ ಹೊಂದಿದ್ದರೂ ದೇಶ ಹಾಗೂ ಸಂವಿಧಾನದ ದೃಷ್ಠಿಯಲ್ಲಿ ಒಬ್ಬ ಪ್ರಜೆಯೆಂಬುದನ್ನು ಯಾರು ಮರೆಯುವಂತಿಲ್ಲ. ಅಂತೆಯೇ ದೇಶ ಹಾಗೂ ದೇಶದ ಸಂವಿಧಾನಕ್ಕೆ ಅಗೌರವ ತರುವುದು ಅಕ್ಷಮ್ಯ ಅಪರಾಧ. ಜನರಲ್ಲಿ ದೇಶ ಹಾಗೂ ಈಶ ಭಕ್ತಿಯನ್ನು ಬೆಳೆಸಬೇಕಾದ ಪೂಜ್ಯರು ಈ ರೀತಿ ದಾರಿತಪ್ಪಿ ಮಾತನಾಡುವುದು ಒಟ್ಟು ಸಮುದಾಯಕ್ಕೆ ದ್ರೋಹವೆಸಗಿದಂತಾಗಿದೆ ಎಂದರು.
ಕೇದಾರ ಶ್ರೀಗಳು ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಸಮಾಜಕ್ಕೆ ಸನ್ಮಾರ್ಗ ತೋರಿಸುವ ಹಾಗೂ ಪಂಚಪೀಠಗಳ ಭಕ್ತರಲ್ಲಿ ಐಕ್ಯತೆ ಮೂಡಿಸಲು, ಮಾರ್ಗದರ್ಶನ ಮಾಡುವಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.