ಎಸ್ಟಿಗೆ ಕುರುಬ ಸಮುದಾಯ ಸೇರಿಸಲು ಆಗ್ರಹಿಸಿ ಜ.15ರಿಂದ ಪಾದಯಾತ್ರೆ
ದಾವಣಗೆರೆ, ಡಿಸೆಂಬರ್ 6; ರಾಜ್ಯದಲ್ಲಿರುವ 70 ಲಕ್ಷ ಕುರುಬ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸಬೇಕು ಎಂಬ ಉದ್ದೇಶದಿಂದ ಜನವರಿ 15ರಿಂದ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ದಾವಣಗೆರೆಯಲ್ಲಿ ಎಸ್.ಟಿ ಹೋರಾಟ ಸಮಿತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಸ್ಟಿ ಹೋರಾಟದ ಬೇಡಿಕೆ ಇವತ್ತಿನದಲ್ಲ. ಬಹಳ ಹಿಂದಿನಿಂದಲೂ ಹೋರಾಟ ನಡೆದುಕೊಂಡು ಬಂದಿದೆ. ಕೆಲವೊಂದು ಮೇಲ್ವರ್ಗದ ಜಾತಿಯವರಿಗೆ ಏನು ಮಾಡದೇ ಇದ್ದರೂ ಸವಲತ್ತುಗಳು ಸಿಗುತ್ತವೆ. ಆದರೆ ಹಿಂದುಳಿದ ವರ್ಗದವರು ಅನಿವಾರ್ಯವಾಗಿ ಹೋರಾಟ ಮಾಡಿ ಸವಲತ್ತುಗಳನ್ನು ಪಡೆದುಕೊಳ್ಳಬೇಕಿದೆ' ಎಂದು ವಿಷಾದ ವ್ಯಕ್ತಪಡಿಸಿದರು.
ಕುರುಬ ಸಮುದಾಯದ ಎಸ್ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡ?
'ಬೀದರ್, ಕಲಬುರ್ಗಿ, ಯಾದಗಿರಿಗಳ ಜೊತೆಗೆ ಅಖಂಡ ಕರ್ನಾಟಕದ ಕುರುಬರನ್ನು ಎಸ್ಟಿಗೆ ಸೇರಿಸಬೇಕು ಎಂದು ಕಳೆದ ವಾರ ದೆಹಲಿಗೆ ಹೋಗಿ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವೆ ರೇಣುಕಾ ಸಿಂಗ್ ಮೀಸಲಾತಿ ಸಂಬಂಧ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದ್ದಾರೆ' ಎಂದರು.
ಒಂದು ದಿನಕ್ಕೆ ಎರಡು ತಾಲ್ಲೂಕು, ಒಂದು ಜಿಲ್ಲೆ: '23 ದಿನಗಳ ಕಾಲ ನಡೆಯುವ ಪಾದಯಾತ್ರೆ ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಒಂದು ದಿನಕ್ಕೆ ಎರಡು ತಾಲ್ಲೂಕು ಅದರ ಜೊತೆಗೆ ರಾಜ್ಯದ ಒಂದು ಜಿಲ್ಲೆ ಪಾಲ್ಗೊಳ್ಳಬೇಕು. ಆ ಪ್ರಕಾರ ದಿನಾಂಕ ನಿಗದಿಪಡಿಸುತ್ತೇವೆ' ಎಂದು ನಿರಂಜನಾನಂದಪುರಿ ಶ್ರೀ ಮಾಹಿತಿ ನೀಡಿದರು.
'ಎಸ್ಟಿ ಹೋರಾಟ ಸಮಿತಿ, ಕಾಗಿನೆಲೆ ಮಹಾ ಸಂಸ್ಥಾನ ಗುರುಪೀಠ ಹಾಗೂ ಎಲ್ಲಾ ಸಂಘಟನೆಗಳು ಪಾದಯಾತ್ರೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಎಲ್ಲ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಗುರಿ ಮುಟ್ಟುವ ತನಕ ಹೋರಾಡಬೇಕು' ಎಂದರು. ಸಮಾಜದ ಮುಖಂಡರಾದ ಬಿ.ಎಂ.ಸತೀಶ್, ಮಂಜುನಾಥ್, ಹದಡಿ ನಿಂಗಪ್ಪ, ಬಿ.ಎಚ್. ಪರಶುರಾಮಪ್ಪ, ಕುಣೆಬೆಳೆಕೇರಿ ದೇವೇಂದ್ರಪ್ಪ, ಪಿ.ಜೆ. ರಮೇಶ್, ಕುಂಬಳೂರು ವಿರೂಪಾಕ್ಷಪ್ಪ, ಜಿ.ಸಿ.ಲಿಂಗಪ್ಪ, ರಾಜು ಮೌರ್ಯ ಮಾತನಾಡಿದರು. ಸಭೆಯಲ್ಲಿ ಸಮಾಜದ ಮುಖಂಡರಾದ ಎಚ್.ಬಿ. ಗೋಣೆಪ್ಪ, ಎಚ್.ಎನ್.ಗುರುನಾಥ್, ಎಚ್.ಜಿ. ಸಂಗಪ್ಪ, ಸುನಂದಮ್ಮ ಪರಶುರಾಮಪ್ಪ, ಮುದಹದಡಿ ದಿಳ್ಯಪ್ಪ ಭಾಗವಹಿಸಿದ್ದರು.