ಯಾರೂ ಕಿಡ್ನಾಪ್ ಮಾಡಿಲ್ಲ, ಹಣನೂ ಕೊಟ್ಟಿಲ್ಲ: ದಾವಣಗೆರೆ ಕಾರ್ಪೊರೇಟರ್
ದಾವಣಗೆರೆ, ಫೆಬ್ರವರಿ 20: ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ, ನನಗೆ ಯಾವ ಬಿಜೆಪಿ ನಾಯಕರೂ ಸಂಪರ್ಕಿಸಿಲ್ಲ, ಹಣವನ್ನೂ ನೀಡಿಲ್ಲ. ನಾನು ಮೇಯರ್ ಆಂಕಾಕ್ಷಿಯಾಗಿದ್ದೆ, ಆದರೆ ಅದು ಆಗಲಿಲ್ಲ. ಹಾಗಾಗಿ ನನ್ನ ಮನಸ್ಸಿಗೆ ನೋವಾದ ಕಾರಣ ನಾನು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಹೋಗಿಲ್ಲ ಎಂದು ಪಾಲಿಕೆ ಚುನಾವಣೆಗೆ ಹಾಜರಾಗದ ಕಾಂಗ್ರೆಸ್ನ ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ್ ಸ್ಪಷ್ಟಪಡಿಸಿದರು.
ದಾವಣಗೆರೆಯ ಕೆಟಿಜೆ ನಗರದಲ್ಲಿ ಮಾತನಾಡಿದ ಸದಸ್ಯ ಶ್ರೀನಿವಾಸ್ ಅವರು, ""ನಾನು ಎರಡು ಬಾರಿ ಗೆದ್ದಿದ್ದೇನೆ. ಈ ಬಾರಿ ಮೇಯರ್ ಜನರಲ್ ಕೋಟಾಗೆ ಇತ್ತು. ನನ್ನ ಮೇಲೆ ಗುರುತರ ಆರೋಪಗಳಿದ್ದರೆ, ನನ್ನ ಪತ್ನಿಗೆ ಮೇಯರ್ ಪಟ್ಟ ನೀಡಬೇಕಿತ್ತು. ಆದರೆ ನನ್ನ ಮಾತನ್ನು ನಮ್ಮ ಕಾಂಗ್ರೆಸ್ ಮುಖಂಡರು ಕಿವಿಗೆ ಹಾಕಿಕೊಳ್ಳಲಿಲ್ಲ. ಯಾರು ಕೂಡ ನನ್ನನ್ನು ಸಂಪರ್ಕಿಸಲಿಲ್ಲ. ಈ ಕಾರಣದಿಂದ ನಾನು ಮತ್ತು ನನ್ನ ಪತ್ನಿ ಶ್ವೇತಾ, ಯಶೋಧಮ್ಮ ಪಾಲಿಕೆ ಚುನಾವಣೆಯಿಂದ ದೂರ ಉಳಿಯಬೇಕಾಯಿತು'' ಎಂದು ಸ್ವಪಕ್ಷದ ವಿರುದ್ಧ ಹರಿಹಾಯ್ದರು.
ಬಿಜೆಪಿ ತೆಕ್ಕೆಗೆ ದಾವಣಗೆರೆ ಪಾಲಿಕೆ, ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ಸಿಗರು
""ಇಲ್ಲಿನ ಜನರು ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಈ ನಂಬಿಕೆ ಉಳಿಸಿಕೊಳ್ಳುವುದು ನನ್ನ ಮೊದಲ ಆದ್ಯತೆ ಆಗಿತ್ತು. ನನ್ನ ಮನಸ್ಸಿಗೆ ನೋವಾದ ಕಾರಣ, ಎಲ್ಲಿಗೂ ಹೋಗಲಿಲ್ಲ. ನನಗೆ ಯಾರು ವಿಪ್ ನೀಡಿಲ್ಲ, ಒಂದು ವೇಳೆ ಕ್ರಮ ಕೈಗೊಳ್ಳುವುದಾದರೆ, ಕೈಗೊಳ್ಳಲಿ ನೋಡೋಣ ಎಂದರು.
ಕಾನೂನು ಕ್ರಮ ಕೈಗೊಂಡರೆ ಕಾನೂನು ಮೊರೆ ಹೋಗುತ್ತೇನೆ. ನನಗೆ ಜನ ಮುಖ್ಯ, ಜನರೇ ಅದನ್ನು ತೀರ್ಮಾನ ಮಾಡುತ್ತಾರೆ. ಇನ್ನು ಶಾಮನೂರು ಶಿವಶಂಕರಪ್ಪ ತಂದೆ ನನ್ನ ಇದ್ದ ಹಾಗೆ, ಮಕ್ಕಳಿಗೆ ಜೋರು ಮಾಡದೇ ಇನ್ಯಾರಿಗೆ ಮಾಡುತ್ತಾರೆ'' ಎಂದು ವಿವರಣೆ ನೀಡಿದರು.
ಮೇಯರ್-ಉಪಮೇಯರ್ ಚುನಾವಣೆ: MLC ಮತದಾನಕ್ಕೆ ಅವಕಾಶ, ಡಿಸಿಗೆ ಧಿಕ್ಕಾರ
ನನ್ನ ವಾರ್ಡ್ ಈಗಲೂ ಅಭಿವೃದ್ಧಿಯಾಗಿಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ರಾಜಕಾಲುವೆ ಗಬ್ಬು ನಾರುತ್ತಿದ್ದು, ಜನ ವಾಸ ಮಾಡಲಾಗುತ್ತಿಲ್ಲ. ಈ ಕಾರಣದಿಂದ ನಾನು ಮೇಯರ್ ಆಕಾಂಕ್ಷಿ ಎಂದು ತಿಳಿಸಿದ್ದು, ಮೇಯರ್ ಆಗಿದ್ದರೆ ಅನುದಾನ ತಂದು ಇಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೆ ಎಂದು ತಿಳಿಸಿದರು.
ದಾವಣಗೆರೆ ನಗರದಲ್ಲಿ ಸಾಕಷ್ಟು ಪಾರ್ಕ್ಗಳಿದ್ದು, ಅವುಗಳೆಲ್ಲ ಅಭಿವೃದ್ಧಿಯಾಗಿದೆ. ಆದರೆ ನಾನು ಪ್ರತಿನಿಧಿಸುವ ಕ್ಷೇತ್ರದ ಡಾಂಗೆ ಪಾರ್ಕ್ ಮಾತ್ರ ಇನ್ನೂ ಅಭಿವೃದ್ದಿಯಾಗಿಲ್ಲ. ಪಾಲಿಕೆಯಿಂದ ಅನುದಾನ ತರುವುದು ಸಾಕಷ್ಟು ಕಷ್ಟವಾಗಿದೆ. ಮೇಯರ್ ಪಟ್ಟ ಸಿಕ್ಕಿದ್ದರೆ ಇಲ್ಲಿನ ಡಾಂಗೆ ಪಾರ್ಕ್ನ್ನು ಹೈಟೆಕ್ ಮಾಡುತ್ತಿದ್ದೆ ಎಂದು ಜೆ.ಎನ್.ಶ್ರೀನಿವಾಸ ಹೇಳಿದರು.
ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ನಾನು ಅಪ್ಪಟ ಕಾಂಗ್ರೆಸ್ಸಿಗ, ಕಾಂಗ್ರೆಸ್ನಿಂದಲೇ ಗೆದ್ದಿರುವುದು. ಬಿಜೆಪಿ ಹೋಗುವುದು ಸುಳ್ಳು. ನಾನು ಕಾಂಗ್ರೆಸ್ನಲ್ಲಿಯೇ ಇರುತ್ತೇನೆ. ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.