ತುಂಗಾಭದ್ರಾರತಿಗೆ ಮೋದಿ ಬರುವಂತಾಗಬೇಕು: ವಚನಾನಂದ ಶ್ರೀ
ದಾವಣಗೆರೆ, ಫೆಬ್ರವರಿ 20; "ಉತ್ತರ ಭಾರತದ ಕಾಶಿಯಲ್ಲಿ ಯಾವ ರೀತಿ ಗಂಗಾರತಿ ಆಗುತ್ತದೆಯೋ ಅದೇ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ತುಂಗಾಭದ್ರಾ ಆರತಿ ನಡೆಯಲಿದೆ. ಎರಡು ವರ್ಷಗಳ ಹಿಂದೆ ಆಗ ಮುಖ್ಯಮಂತ್ರಿ ಆಗಿದ್ದ ಬಿ. ಎಸ್. ಯಡಿಯೂರಪ್ಪ ಮತ್ತು ಅಂದಿನ ಗೃಹ ಸಚಿವರೂ ಆಗಿದ್ದ ಈಗ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರಲ್ಲಿ ಹೇಳಿದ್ದೆ. ಆಗಲೇ ಅದಕ್ಕೆ ಒಪ್ಪಿಗೆ ನೀಡಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರೇ ಶಂಕುಸ್ಥಾಪನೆ ಮಾಡಿದ್ದಾರೆ" ಎಂದು ಪಂಚಮಸಾಲಿ ವೀರಶೈವ ಹರಿಹರ ಕ್ಷೇತ್ರದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದರು.
ಭಾನುವಾರ ಹರಿಹರದಲ್ಲಿ ನಡೆದ ತುಂಗಾಭದ್ರಾ ಆರತಿ ಯೋಜನೆಯ 108 ಯೋಗ ಮಂಟಪಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಈ ಹಿಂದೆ ದಾವಣಗೆರೆ - ಹರಿಹರ ಮ್ಯಾಂಚಸ್ಟೆರ್ ಸಿಟಿ ಆಗಿತ್ತು. ಈಗ ಆ ವೈಭವ ಇಲ್ಲ, ಈಗ ತುಂಗಾರತಿ ಮೂಲಕ ಪ್ರವಾಸಿ ಕೇಂದ್ರವಾಗಬೇಕು. ನಮಾಮಿ ಗಂಗೆ ಮಾಡುವ ಮೊದಲು ಗಂಗೆಯ ಸ್ಥಿತಿ ಹೇಗಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ. ನರೇಂದ್ರಮೋದಿ ಅವರ ಈ ಕಾರ್ಯದಿಂದಾಗಿ ಕಾಶಿ ಸಹಿತ ಗಂಗಾತೀರಗಳು ಇಂದು ಪ್ರವಾಸಿ ತಾಣಗಳಾಗಿವೆ. ಹಿಂದೆ ತಾಜ್ಮಹಲ್, ಇನ್ನಿತರ ಮಹಲ್ಗಳಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರು ಇಂದು ಗಂಗಾ ನದಿಯ ತಟಕ್ಕೆ ಬರುತ್ತಿದ್ದಾರೆ. ಮೋದಿ ಬಂದ ಮೇಲೆ ಹೊಸ ವಾತಾವರಣ ಸೃಷ್ಟಿಯಾಗಿದೆ" ಎಂದರು.
Recommended Video
"ಈಗ ಗಂಗೆ ಸ್ವಚ್ಛವಾಗಿದ್ದಾಳೆ. ಹರಿಹರ ರಾಜ್ಯದ ಮಧ್ಯೆ ಇದೆ. ಮಧ್ಯ ಪ್ರದೇಶ ಸರಿ ಇದ್ದರೆ ಬೀದರ್ನಿಂದ ಚಾಮರಾಜನಗರವರೆಗೆ ಎಲ್ಲವೂ ಸರಿ ಇರುತ್ತದೆ. ತುಂಗೆ ಮಾತ್ರವಲ್ಲ, ಕಾವೇರಿ, ಘಟಪ್ರಭ, ಮಲಪ್ರಭ, ಕೃಷ್ಣೆ ಸಹಿತ ಎಲ್ಲ ನದಿಗಳು ಸ್ವಚ್ಛವಾಗಬೇಕು. ಬರುವ ಐದು ವರ್ಷಗಳಲ್ಲಿ ಸುಮಾರು 25 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಹೂವು ಮಾರುವವರು, ಟ್ರಾವೆಲ್, ಹೊಟೇಲ್ ಸಹಿತ ಅನೇಕ ಸಣ್ಣ ಉದ್ಯಮಗಳು ಬರಲಿವೆ" ಎಂದು ತಿಳಿಸಿದರು.
"ತುಂಗಾರತಿ ಕೂಡ ಹರಿಹರದ ಅಭಿವೃದ್ಧಿಯ ಭಾಗವೇ ಆಗಿದೆ. ಹರಿಹರ-ಕೈಲಾಸ ಕಾರಿಡಾರ್ ಅನ್ನು ರೂ. 300 ಕೋಟಿಯಲ್ಲಿ ನಿರ್ಮಿಸಿಕೊಡುವ ವಾತಾವರಣ ನಿರ್ಮಾಣವಾಗಬೇಕು. ಬೈರನಪಾದ ಏತ ನೀರಾವರಿ ನನೆಗುದಿಗೆ ಬಿದ್ದಿದೆ. ಅದು ಮತ್ತೆ ಚಾಲನೆಗೊಳ್ಳಬೇಕು. ಹಾಗೆಯೇ ಎಲ್ಲ ಕೈಗಾರಿಕೆಗಳು ಇಲ್ಲಿಗೆ ಬರಬೇಕು. ಮುಖ್ಯಮಂತ್ರಿ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ಕೆಲಸ ಮಾಡಬೇಕು. ತುಂಗಾರತಿ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರುವಂತಾಗಬೇಕು" ಎಂದು ವಚನಾನಂದ ಸ್ವಾಮೀಜಿ ಆಶಿಸಿದರು.

ಜಲಮೂಲಗಳ ರಕ್ಷಣೆ ಆಗಬೇಕು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, "ಇದೊಂದು ಅಪರೂಪವಾದ ಕಾರ್ಯಕ್ರಮ. ಕಟ್ಟಡ ಉದ್ಘಾಟನೆ, ರಸ್ತೆ, ಸೇತುವೆ ಉದ್ಘಾಟನೆ ಮಾಡುತ್ತೇವೆ. ನಮ್ಮ ಬದುಕಿನ ಮೂಲವಾದ ಜಲಮೂಲದ ರಕ್ಷಣೆ, ಸ್ವಚ್ಛತೆ ಇವತ್ತು ಆಗಿದೆ. ನಮ್ಮ ಎಲ್ಲ ನಾಗರಿಕತೆಗಳು ನದಿತಟದಲ್ಲಿಯೇ ಬೆಳೆದಿದೆ. ನಾಗರಿಕತೆ ಮತ್ತು ಸಂಸ್ಕೃತಿ ಎರಡು ಒಟ್ಟಿಗೆ ಬೆಳೆಯಬೇಕು. ನಾಗರಿಕತೆಯನ್ನೇ ಸಂಸ್ಕೃತಿ ಅಂದುಕೊಂಡಿದ್ದಾರೆ" ಎಂದು ತಿಳಿಸಿದರು.

ನದಿತಟದಲ್ಲಿ ಸಂಸ್ಕೃತಿ ಬೆಳೆಯಬೇಕು
"ನಮ್ಮಲ್ಲಿ ಏನಿದೆಯೋ ಅದು ನಾಗರಿಕತೆ. ಚಕ್ಕಡಿ, ಮೋಟಾರ್ ಸೈಕಲ್, ಕಾರು, ಬೀಸೋಕಲ್ಲು ಹೋಗಿ ಮಿಕ್ಸಿ ಬಂದಿದೆ. ಅದು ನಾಗರಿಕತೆ. ಅದು ಸಂಸ್ಕೃತಿ ಅಲ್ಲ. ನಾಗರಿಕತೆ ಬೆಳೆಯಬೇಕು. ಸವಲತ್ತು ಹೆಚ್ಚಾಗಬೇಕು. ನಾವೇನು ಆಗಿದ್ದೇವೆಯೋ ಅದು ಸಂಸ್ಕೃತಿ. ಮಾನವೀಯ ಗುಣಗಳು, ಉದಾರತೆಯ ಗುಣಗಳು ಸಹಿತ ಎಲ್ಲ ಗುಣಗಳು ಸಂಸ್ಕೃತಿ ಆಗಿವೆ. ನದಿ ತಟದಲ್ಲಿ ಸಂಸ್ಕೃತಿ ಮತ್ತು ನಾಗರಿಕತೆ ಬೆಳೆಸಬೇಕು ಎಂದು ತುಂಗಾರತಿ ಕಾರ್ಯಕ್ರಮವನ್ನು ವಚನಾನಂದ ಸ್ವಾಮೀಜಿ ಹಮ್ಮಿಕೊಂಡಿದ್ದಾರೆ. ಕಾಶಿಯ ತರಹ ಇಲ್ಲಿಯೂ ಅಭಿವೃದ್ಧಿಗಳು ನಡೆಯಲಿವೆ. ನನ್ನ ಪ್ರಕಾರ ವಿಜ್ಞಾನ ಮತ್ತು ತತ್ವಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೊಂದು ಪೂರಕವಾದುದು. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಮುನ್ನಡೆಯಬೇಕು" ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಶಂಕುಸ್ಥಾಪನೆ ನೆರವೇರಿಸಿದ ಸಿಎಂ
ದಕ್ಷಿಣ ಕಾಶಿ ಎಂದೇ ಹೆಸರಾಗಿರುವಹರಿಹರ ನಗರದ ತುಂಗಭದ್ರಾ ನದಿ ದಡದಲ್ಲಿ ಸುಮಾರು 3೦ ಕೋಟಿ ರೂಪಾಯಿ ವೆಚ್ಚದಲ್ಲಿ ತುಂಗಭದ್ರಾ ಆರತಿ ಯೋಜನೆಯ 108 ಯೋಗ ಮಂಟಪಗಳ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಚಾಲನೆ ನೀಡಿದರು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿತು. ಉತ್ತರ ಭಾರತದ ಕಾಶಿಯ ಗಂಗಾರತಿ ಮಾದರಿಯಲ್ಲಿ ಹರಿಹರದಲ್ಲಿಯೂ ಕೂಡ ತುಂಗಭದ್ರಾ ಆರತಿ ನೆರವೇರಲಿದೆ. ನದಿ ತೀರದಲ್ಲಿ ಮಂಟಪಗಳನ್ನು ನಿರ್ಮಾಣ ಮಾಡುವ ಮೂಲಕ ಯಾತ್ರಾ ಸ್ಥಳವಾಗಿ ಹರಿಹರ ಕ್ಷೇತ್ರ ರೂಪುಗೊಳ್ಳಲಿದೆ. ಇದಲ್ಲದೇ ಪ್ರವಾಸೋದ್ಯಮ ಕೂಡ ಬೆಳೆದು ಉದ್ಯೋಗವಕಾಶಗಳೂ ಸೃಷ್ಟಿಯಾಗಲಿದೆ. ಹರಿಹರ ಕ್ಷೇತ್ರ ಪುರಾಣ ಪ್ರಸಿದ್ಧ ಹರಿಹರೇಶ್ವರ ದೇವಾಲಯದಿಂದ ನಾಡಿನಾದ್ಯಂತ ಹೆಸರಾಗಿದೆ. ಇದೀಗ ಕಾಶಿಯ ಗಂಗಾರತಿ ಮಾದರಿಯ ತುಂಗಾರತಿ ಮೂಲಕ ಮತ್ತಷ್ಟು ಆಕರ್ಷಕ ಕೇಂದ್ರವಾಗಲಿದೆ.

ತುಂಗಾರತಿಯ ಮಂಟಪ
ತುಂಗಭದ್ರಾ ನದಿಯ ದಡದಲ್ಲಿ ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ವರಾಹಾಚಾರ್ ನೇತೃತ್ವದಲ್ಲಿ ತುಂಗಾರತಿಯ ಮಂಟಪ ಸ್ಥಾಪನೆ ಶಂಕುಸ್ಥಾಪನೆ ನಡೆಯಿತು.
ಮಾಧ್ಯಮದ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, "ವಚನಾನಂದ ಸ್ವಾಮೀಜಿ ತುಂಗಾಭದ್ರಾ ಆರತಿ ನಿರ್ಮಾಣ ಆಗಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 30 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಿದೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ಉತ್ತರ ಭಾರತದ ಮಾದರಿಯಲ್ಲಿ ತುಂಗಾಭದ್ರಾ ಆರತಿಯಾಗುತ್ತದೆ. ಈ ಮೂಲಕ ಹರಿಹರ ಒಂದು ಪ್ರವಾಸಿ ತಾಣ ಆಗಲಿದೆ. ಹರಿಹರ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ನೀಡಲಾಗುವುದು" ಎಂದರು.












Click it and Unblock the Notifications