ದಾವಣಗೆರೆ: ರಿಯಲ್ ಎಸ್ಟೇಟ್ ಉದ್ಯಮಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ!
ದಾವಣಗೆರೆ, ಆಗಸ್ಟ್ 12: ತನ್ನ ಪರಿಚಯಸ್ಥರ ಮನೆಗೆ ಹೋಗಿ ವಾಪಸ್ ಮರಳುವಾಗ ಆಟೋರಿಕ್ಷಾದಲ್ಲಿ ಬಂದ ಮೂವರು, ಕಾಂಗ್ರೆಸ್ ಯುವ ಮುಖಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ದಾವಣಗೆರೆ ನಗರದ ಬಸವರಾಜಪೇಟೆಯಲ್ಲಿ ಈ ಕೃತ್ಯ ನಡೆದಿದ್ದು, 42 ವರ್ಷ ವಯಸ್ಸಿನ ಸೀಮೆಎಣ್ಣೆ ಪರಮೇಶ್ ಕೊಲೆಗೀಡಾದ ಕಾಂಗ್ರೆಸ್ ಯುವ ಮುಖಂಡ. ಇವರು ಕಾಂಗ್ರೆಸ್ ಹಿರಿಯ ನಾಯಕ ಸೀಮೆಎಣ್ಣೆ ಮಲ್ಲೇಶ್ ಎಂಬುವವರ ಸಂಬಂಧಿಕರಾಗಿದ್ದಾರೆ. ಈ ಕೊಲೆ ನಡೆದಿರುವುದು ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಬುಧವಾರ ರಾತ್ರಿ ಬಸವರಾಜಪೇಟೆಯ ತನ್ನ ಸ್ನೇಹಿತರ ಮನೆಗೆ ಪರಮೇಶ್ ಹೋಗಿದ್ದರು. ಸ್ನೇಹಿತರನ್ನು ಮಾತನಾಡಿಸಿಕೊಂಡು ಮನೆಯಿಂದ ಹೊರಬಂದು ತಮ್ಮ ಮನೆಗೆ ಹೊರಟಿದ್ದರು. ಈ ವೇಳೆ ಆಟೋರಿಕ್ಷಾದಲ್ಲಿ ಬಂದ ಮೂವರು ಹೊಂಚು ಹಾಕಿ ಕುಳಿತಿದ್ದರು. ಆಗ ಪರಮೇಶ್ ಮೇಲೆ ಮೂವರು ಹಲ್ಲೆ ನಡೆಸಿದ್ದು, ಕೆಳಗಡೆ ಬೀಳುತ್ತಿದ್ದಂತೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹಂತಕರು ಪರಾರಿಯಾಗಿದ್ದಾರೆ.

ರಕ್ತಸಿಕ್ತವಾಗಿದ್ದ ಪರಮೇಶ್ರನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸೇರಿಸಲು ಮುಂದಾದರು. ಆದರೆ ಅಷ್ಟರಲ್ಲೇ ಪರಮೇಶ್ ಇಹಲೋಕ ತ್ಯಜಿಸಿದ್ದರು.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಪರಮೇಶ್, ಕಾಂಗ್ರೆಸ್ ಯುವ ಘಟಕದಲ್ಲಿಯೂ ಗುರುತಿಸಿಕೊಂಡಿದ್ದರು. ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ಪರಮೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಕೊಲೆ ನಡೆದಿದೆಯೋ ಅಥವಾ ರಿಯಲ್ ಎಸ್ಟೇಟ್ ವ್ಯವಹಾರವೇ ಪರಮೇಶ್ ಜೀವಕ್ಕೆ ಮುಳುವಾಯಿತೋ ಎನ್ನುವುದು ಗೊತ್ತಾಗಿಲ್ಲ. ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
Recommended Video
ಈ ಸಂಬಂಧ ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಹಂತಕರ ಬಂಧನದ ಬಳಿಕ ಕೊಲೆಗೆ ನಿಖರ ಕಾರಣವೇನು ಎಂಬುದು ಹೊರಬರಲಿದೆ.
ಕೆಲವೇ ಕೆಲ ಗಂಟೆಗಳಲ್ಲೇ ನಾಲ್ವರು ಹಂತಕರ ಸೆರೆ ಹಿಡಿದ ಪೊಲೀಸರು
ದಾವಣಗೆರೆಯ ಬಸವರಾಜಪೇಟೆಯಲ್ಲಿ ನಡೆದಿದ್ದ ಕಾಂಗ್ರೆಸ್ ಯುವ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಸೀಮೆಎಣ್ಣೆ ಪರಮೇಶ್ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ದಾವಣಗೆರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹನುಮಂತಪ್ಪ, ಬಸವರಾಜ್, ಕುಮಾರ್, ನಿಯಾಜ್ ಬಂಧಿತ ಆರೋಪಿಗಳಾಗಿದ್ದು, ನಾಲ್ವರು ಆರೋಪಿಗಳು ದಾವಣಗೆರೆಯ ನಿವಾಸಿಗಳಾಗಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಈ ಹಿಂದೆ ದೇವಸ್ಥಾನದ ಪಟ್ಟಿ ಕೇಳುವ ವಿಚಾರವಾಗಿ ಗಲಾಟೆ ನಡೆದಿತ್ತು. ಆಗ ಪರಮೇಶ್ ಗಲಾಟೆ ಬಗ್ಗೆ ಪಂಚಾಯತಿ ಮಾಡಿ ಬಗೆಹರಿಸಿದ್ದ. ಆದರೆ, ರಾಜೀ ಪಂಚಾಯತಿ ವೇಳೆ ತಮ್ಮ ವಿರುದ್ದ ಪಂಚಾಯತಿ ಮಾಡಲಾಗಿದೆ ಎಂದು ಕೊಲೆ ಆರೋಪಿಗಳು ಈತನ ಮೇಲೆ ದ್ವೇಷ ಸಾಧಿಸಿದ್ದರು. ಇದೇ ಸೇಡಿನ ಹಿನ್ನಲೆಯಲ್ಲಿ ನಾಲ್ವರು ಪರಮೇಶ್ನನ್ನು ಬುಧವಾರ ರಾತ್ರಿ ಬಸವರಾಜ ಪೇಟೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು.
ಬಳಿಕ ಆರೋಪಿಗಳಿಗೆ ದಾವಣಗೆರೆ ಪೊಲೀಸರು ಶೋಧ ನಡೆಸಿದ್ದರು. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕೊಲೆ ನಡೆದ ಕೆಲವೇ ಕೆಲ ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಜನರ ಮೆಚ್ಚುಗೆಗೂ ಪಾತ್ರವಾಗಿದೆ.












Click it and Unblock the Notifications