ದಾವಣಗೆರೆ; ಕೂಲಂಬಿ ಗ್ರಾಮದಲ್ಲಿ 38 ಮಂದಿಗೆ ಕೋವಿಡ್ ಸೋಂಕು
ದಾವಣಗೆರೆ, ಮೇ 16; ನ್ಯಾಮತಿ ತಾಲೂಕಿನ ರಾಮೇಶ್ವರದಲ್ಲಿ ಕೊರೊನಾ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದರು. ಈಗ ಹೊನ್ನಾಳಿ ತಾಲೂಕಿನ ಕೂಲಂಬಿ ಗ್ರಾಮದಲ್ಲಿ 38 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಾದರಿ ಗ್ರಾಮ ಕೂಲಂಬಿ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ದಿಢೀರ್ ಭೇಟಿ ನೀಡಿದರು. ಗ್ರಾಮದ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.
ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಲು ನಿರ್ಧರಿಸಿ ಗ್ರಾಮದ ಶ್ರೀ ಗದ್ದಿಗೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾಮದಲ್ಲಿ ಕೊರೊನಾ ಸೋಂಕಿತರಿಗೆ ಐಸೋಲೇಷನ್ ಕೇಂದ್ರವನ್ನಾಗಿ ಮಾಡಲು ನಿರ್ಧರಿಸಲಾಯಿತು.

"ಕೇವಲ ಸರ್ಕಾರಗಳ ಕಡೆ ಕೈ ತೋರಿಸುವುದು ಮಾಡುವ ಬದಲು ನಮ್ಮ ನಮ್ಮ ಜವಾಬ್ದಾರಿ ಅರಿತು ಕೂಲಂಬಿ ಗ್ರಾಮದ ರೀತಿ ಎಲ್ಲಾ ಗ್ರಾಮಗಳಲ್ಲಿ ಗ್ರಾಮಸ್ಥರು ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುವ ಸಂಕಲ್ಪ ಮಾಡಿದ್ದಾರೆ" ಎಂದು ರೇಣುಕಾಚಾರ್ಯ ಹೇಳಿದರು.
"ಕೆಲವೇ ದಿನಗಳಲ್ಲಿ ಮಹಾಮಾರಿಯಿಂದ ಮನುಕುಲವನ್ನು ರಕ್ಷಿಸಬಹುದು. ಸೋಂಕಿತರಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಸೋಂಕಿತರ ಸಂಪರ್ಕದಲ್ಲಿದ್ದವರ ಗಂಟಲು ದ್ರವ ಪರೀಕ್ಷೆ ನಡೆಸುವಂತೆ" ರೇಣುಕಾಚಾರ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.












Click it and Unblock the Notifications