ಬಂದ 2 ದಿನಗಳಲ್ಲೇ ದಾಳಿ ಮಾಡಿದರೆ ಎಸ್ಪಿ ಹೀರೋ ಆಗ್ತಾರೇನ್ರೀ: ರೇಣುಕಾಚಾರ್ಯ
ದಾವಣಗೆರೆ, ಜೂನ್ 14: ""ನಾನು ಯಾವಾಗಲೂ ಬಡವರ ಪರ, ಶ್ರೀಮಂತರ ಪರ ಅಲ್ಲ. ಬೈಕ್ ಹಾಗೂ ಎತ್ತಿನ ಗಾಡಿಗಳಲ್ಲಿ ಮರಳು ಸಾಗಾಟ ಮಾಡಿ. ಯಾರು ಬರುತ್ತರೋ ಬರಲಿ, ನಿಮ್ಮ ಜೊತೆ ನಾನಿರುತ್ತೇನೆ. ಬಂದ ಎರಡು ದಿನಗಳಲ್ಲೇ ದಾಳಿ ಮಾಡಿಬಿಟ್ಟರೆ ಎಸ್ಪಿ ಹೀರೋ ಆಗಿಬಿಡ್ತಾರೇನ್ರೀ,'' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿ ತಂಗಿರುವ ರೇಣುಕಾಚಾರ್ಯರನ್ನು ಭೇಟಿ ಮಾಡಿದ ಗ್ರಾಮಸ್ಥರು, ""ಮರಳು ತೆಗೆದುಕೊಂಡು ಹೋದರೆ ಕೇಸ್ ಹಾಕುತ್ತಿದ್ದಾರೆ'' ಎಂಬ ಮನವಿ ಸಲ್ಲಿಸಿದರು. ಈ ವೇಳೆ ಶಾಸಕ ರೇಣುಕಾಚಾರ್ಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
"ಜೂಜಾಟ, ಓಸಿ, ಕಳ್ಳತನ ಸೇರಿದಂತೆ ಅಕ್ರಮ ಹಾಗೂ ಕಾನೂನು ವಿರೋಧಿ ಚಟುವಟಿಕೆಗಳಿಗೆ ಮಟ್ಟ ಹಾಕಲಿ. ಬೈಕ್ ಹಾಗೂ ಎತ್ತಿನ ಗಾಡಿಗಳಲ್ಲಿ ಮರಳು ಸಾಗಾಟ ಮಾಡಲು ನಾವೇ ಅನುಮತಿ ನೀಡಿದ್ದೇವೆ. ಅವರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ. ಅಧಿಕಾರಿಗಳು ಕಚೇರಿ ಹಾಗೂ ಮನೆಯಲ್ಲಿ ಎಸಿಯಲ್ಲೇ ಇರುತ್ತಾರೆ. ಗ್ರಾಮೀಣ ಭಾಗದ ಜನರು ತಮ್ಮ ಮನೆ ಕಟ್ಟಿಕೊಳ್ಳಲು ಹಾಗೂ ದೇವಸ್ಥಾನಕ್ಕೆ ಮರಳು ಕೊಂಡೊಯ್ದರೆ ತಪ್ಪೇನು. ಯಾವುದಕ್ಕೂ ಹೆದರಬೇಡಿ, ಮರಳು ತೆಗೆದುಕೊಂಡು ಹೋಗಿ, ಏನಾಗುತ್ತೋ ನೋಡೋಣ,'' ಎಂದು ಹೇಳಿದರು.

"ಕಳ್ಳರು, ಅತ್ಯಾಚಾರಿಗಳು, ಇಸ್ಪೀಟ್ ಆಡುವವರ ಪರವಾಗಿ ನಾನೆಂದೂ ನಿಲ್ಲಲ್ಲ. ಕಾನೂನು ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿ. ಅದನ್ನು ಬಿಟ್ಟು ಮನೆ ಕಟ್ಟಿಕೊಳ್ಳಲು ಹಾಗೂ ದೇವಸ್ಥಾನದ ಕೆಲಸಗಳಿಗೆ ಮರಳು ತೆಗೆದುಕೊಂಡು ಹೋದರೆ ತಪ್ಪೇನಿದೆ. ಎಸ್ಪಿನೇ ಬರಲಿ, ನಾನು ನೋಡಿಕೊಳ್ಳುತ್ತೇನೆ,'' ಎಂದು ಸಿಡಿಮಿಡಿಗೊಂಡರು.

"ಬಡವರು ಹತ್ತು ಸಾವಿರ ರೂಪಾಯಿ ಎಲ್ಲಿಂದ ತರಬೇಕು. ಮಳೆ, ಬೆಳೆ ಇಲ್ಲದೇ ಕಂಗೆಟ್ಟಿರುವ ಜನರಿಗೆ ಕೊರೊನಾದಿಂದ ಲಾಕ್ಡೌನ್ ಮಾಡಿದ್ದು ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಬೈಕ್ ಹಾಗೂ ಎತ್ತಿನಗಾಡಿಗಳಲ್ಲಿ ಮರಳು ತೆಗೆದುಕೊಂಡು ಹೋಗಿ. ಯಾರಾದರೂ ಬಂದು ಅಡ್ಡಿಪಡಿಸಿದರೆ ನಾನು ಬಂದು ಮರಳು ತುಂಬುತ್ತೇನೆ. ಬಡವರ ಹೊಟ್ಟೆ ಮೇಲೆ ಹೊಡೆದರೆ ಸುಮ್ಮನಿರಲ್ಲ,'' ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆಕ್ರೋಶಭರಿತರಾದರು.












Click it and Unblock the Notifications