ನಳಿನ್ ಕುಮಾರ್ ಆಡಿಯೋ ನಕಲಿ, ಕಾಂಗ್ರೆಸ್ನ ಷಡ್ಯಂತ್ರ: ರೇಣುಕಾಚಾರ್ಯ ಆರೋಪ
ದಾವಣಗೆರೆ, ಜುಲೈ 19: ಸಿಎಂ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಎಂ. ಪಿ. ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.
"ಆಡಿಯೋ ನಕಲಿಯಾಗಿದ್ದು, ಬೆಳಿಗ್ಗೆ ನಾನೇ ಕಟೀಲ್ರಿಗೆ ಕರೆ ಮಾಡಿ ಕೆಲ ವಿಚಾರಗಳನ್ನು ಮಾತನಾಡಿದ್ದೇನೆ. ನಳಿನ್ ಕುಮಾರ್ ಕಟೀಲ್ ಹೆಸರಿಗೆ ಕಳಂಕ ತರುವ ಕೆಲಸ ಮಾಡಲಾಗಿದೆ'' ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ರೇಣುಕಾಚಾರ್ಯ, "ನಳಿನ್ ಕುಮಾರ್ ಕಟೀಲ್ ಧ್ವನಿ ಅಲ್ಲ. ಇದು ಕಾಂಗ್ರೆಸ್ನವರ ಕುತಂತ್ರ. ತನಿಖೆಗೆ ಕಟೀಲ್ ಅವರೇ ಒತ್ತಾಯಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತಾರೆ ಎಂಬ ಕಾರಣಕ್ಕೆ ಷಡ್ಯಂತ್ರ ರೂಪಿಸಲಾಗಿದೆ. ನಾವೆಲ್ಲರೂ ರಾಜ್ಯಾಧ್ಯಕ್ಷರ ಪರವಾಗಿ ಇರುತ್ತೇವೆ,'' ಎಂದು ಹೇಳಿದರು.

"ಯಡಿಯೂರಪ್ಪ ನಾಯಕತ್ವ ಬದಲಾವಣೆ, ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್ ಅಂಡ್ ಟೀಂ ಅನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿಲ್ಲ. ಈ ಬೆಳವಣಿಗೆ ಅವರ ಮನಸ್ಸಿಗೂ ನೋವು ತಂದಿದೆ. ಯಡಿಯೂರಪ್ಪ ಸಿಎಂ ಆದಾಗ ನಳಿನ್ ರಾಜ್ಯಾಧ್ಯಕ್ಷರಾದರು.''
"ಕಟೀಲ್ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ನಡೆದಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರು ಹಾಗೂ ನಾಯಕತ್ವದ ವಿರುದ್ಧ ಮಾತನಾಡುವವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಇದರ ಹಿಂದೆ ಕುತಂತ್ರ ಅಡಗಿದೆ,'' ಎಂದು ರೇಣುಕಾಚಾರ್ಯ ಅನುಮಾನ ವ್ಯಕ್ತಪಡಿಸಿದರು.
"ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಬಂದಿದ್ದಾರೆ. ಯಡಿಯೂರಪ್ಪನವರೇ ಸ್ಪಷ್ಟವಾಗಿ ಹೇಳಿದ್ದಾರೆ. ಹೈಕಮಾಂಡ್ ರಾಜೀನಾಮೆಗೆ ಸೂಚಿಸಿಲ್ಲ ಎಂದು. ಪದೇಪದೇ ನಾಯಕತ್ವ ಬದಲಾವಣೆ ಆಗುತ್ತದೆ ಎಂಬುದು ಸರಿಯಲ್ಲ,'' ಎಂದು ಅಭಿಪ್ರಾಯಪಟ್ಟರು.

ಧನ್ವಂತರಿ ಹಾಗೂ ಮೃತ್ಯುಂಜಯ ಹೋಮ
ರೇಣುಕಾಚಾರ್ಯ ಆಯುರಾರೋಗ್ಯ ವೃದ್ಧಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ, ಕೊರೊನಾ ಸೋಂಕು ಸಂಪೂರ್ಣ ನಿವಾರಣೆಗಾಗಿ ಎಂ.ಪಿ ರೇಣುಕಾಚಾರ್ಯ ಜನಸೇವಾ ಟ್ರಸ್ಟ್ ವತಿಯಿಂದ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಹಾಮೃತ್ಯುಂಜಯ ಹೋಮ ಹಾಗೂ ಧನ್ವಂತರಿ ಹೋಮ ನಡೆಸಲಾಗಿದೆ.
ಪತ್ನಿಯೊಂದಿಗೆ ರೇಣುಕಾಚಾರ್ಯ ಪಾಲ್ಗೊಂಡು ಪೂಜೆ
ಹೊನ್ನಾಳಿ ತಾಲ್ಲೂಕಿನಲ್ಲಿ ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದ ಸಮಯದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸಿದ್ದರು. ಅಲ್ಲದೇ, ರೇಣುಕಾಚಾರ್ಯ ಒಂದು ತಿಂಗಳಿಗೂ ಅಧಿಕ ಕಾಲ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿಯೇ ವಾಸ್ತವ್ಯ ಹೂಡಿದ್ದು, ಸೋಂಕಿತರಿಗೆ ಯೋಗ, ಧ್ಯಾನ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳು ಕೊರತೆಯಾಗದಂತೆ ನೋಡಿಕೊಂಡಿದ್ದರು.

ಬಳಿಕ ಇದೀಗ ಕ್ಷೇತ್ರದ ಜನರಿಗೆ ಕೊರೊನಾ ವಾಕ್ಸಿನ್ ನೀಡುತ್ತಿದ್ದು, ವಾಕ್ಸಿನ್ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ರೇಣುಕಾಚಾರ್ಯ ಅಪಾರ ಮೆಚ್ಚುಗೆ ಗಳಿಸಿದ್ದು, ಇದೀಗ ಅವರ ಆಯುರಾರೋಗ್ಯ ವೃದ್ಧಿಯಾಗಲಿ ಎಂದು ಅವರ ಅಭಿಮಾನಿಗಳು ಮಹಾಮೃತ್ಯುಂಜಯ ಹೋಮ ಹಾಗೂ ಧನ್ವಂತರಿ ಹೋಮ ನಡೆಸಿದರು.
ಇನ್ನು ಇದೇ ಕೊರೊನಾ ಸೋಂಕು ಹೆಚ್ಚಾಗಿದ್ದ ಸಂದರ್ಭದಲ್ಲಿ ರೇಣುಕಾಚಾರ್ಯ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲೇ ಹೋಮ ಮಾಡಿ ನಿಯಮ ಉಲ್ಲಂಘಿಸಿದ ಆರೋಪಕ್ಕೂ ಗುರಿಯಾಗಿದ್ದರು.












Click it and Unblock the Notifications