ಚಂದ್ರಶೇಖರ್ ಸಾವು: ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡರಾ ರೇಣುಕಾಚಾರ್ಯ?
ದಾವಣಗೆರೆ, ನವೆಂಬರ್6: ಶಾಸಕ ಎಂ. ಪಿ. ರೇಣುಕಾಚಾರ್ಯರ ಸಹೋದರ ಎಂ.ಪಿ ರಮೇಶ್ ಅವರ ಪುತ್ರ ಚಂದ್ರಶೇಖರ್ ಸಾವಿನ ಸುತ್ತ ಅನುಮಾನದ ಹುತ್ತ ದಿನ ಕಳೆದಂತೆ ಬೆಳೆಯುತ್ತಲೇ ಹೋಗುತ್ತಿದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್ ಎಸ್ ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಕಾರು ವೇಗವಾಗಿ ಚಲಾಯಿಸಿದ ಕಾರಣ ಅಪಘಾತವಾಗಿರಬಹುದು ಎಂಬ ಶಂಕೆ ಪೊಲೀಸರದ್ದು. ಆದರೆ ರೇಣುಕಾಚಾರ್ಯ ಕುಟುಂಬ ಇಂದಿಗೂ ಸಹ ಇದೊಂದು ಪೂರ್ವನಿಯೋಜಿತ ಕೊಲೆ ಎಂದೇ ಆರೋಪಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿಸಿದ್ದಾರೆ.
ಚಂದ್ರು ಕಾರು ಪತ್ತೆ ಹಚ್ಚಿದ್ದು ನಾವು, ಪೊಲೀಸರು ಮಾಡಿದ್ದೇನು: ಬಿಜೆಪಿ ಕಾರ್ಯಕರ್ತರ ಪ್ರಶ್ನೆ
ಈ ಮಧ್ಯೆ ಚಂದ್ರಶೇಖರ್ ಚಲಾಯಿಸಿಕೊಂಡು ಬಂದಿದ್ದ ಕಾರು ನೋಡಲು ಹೊನ್ನಾಳಿ ಪೊಲೀಸ್ ಠಾಣೆ ಬಳಿ ಬಂದಿದ್ದ ರೇಣುಕಾಚಾರ್ಯರಿಗೆ ಅವಕಾಶ ನೀಡದಿದ್ದಕ್ಕೆ ಸಿಪಿಐ ಸಿದ್ದನಗೌಡರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸಹ ನಡೆದಿದೆ.
ನನ್ನ ಮಗನ ಸಾವಿಗೆ ನ್ಯಾಯ ಕೊಡಿಸುತ್ತಾನಾ..? ಶಾಸಕರ ಪ್ರಶ್ನೆ
ಕಾರು ವೇಗವಾಗಿ ಬಂದಿತ್ತು. ನೂರು ಕಿಲೋಮೀಟರ್ ವೇಗವಿತ್ತು ಎಂದಿದ್ದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ ರೇಣುಕಾಚಾರ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ನನ್ನ ಉತ್ತರಾಧಿಕಾರಿಯಾಗಿ ಚಂದ್ರಶೇಖರ್ ಬೆಳೆಯುತ್ತಿದ್ದ. ಕೈನಲ್ಲಿ ಹಗ್ಗ ಕಂಡು ಬಂದಿದೆ. ಸೀಟ್ ಬೆಲ್ಟ್ ಹಾಕಿದ್ದರೂ ಹಿಂಬದಿ ಸೀಟ್ಗೆ ಹೋಗಿದ್ದು ಹೇಗೆ..? ಹತ್ತು ಬಾರಿ ಒಂದೇ ನಂಬರ್ನಿಂದ ಕಾಲ್ ಬಂದಿದೆ. ಹಎಚ್. ಕಡದಕಟ್ಟೆಗೆ ಬಂದಿದ್ದ ಅಲೋಕ್ ಕುಮಾರ್ ಹೊನ್ನಾಳಿಗೆ ಬಂದಿಲ್ಲ. ಸರ್ಕಾರಕ್ಕೆ ವರದಿ ನೀಡಬೇಕು. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಬೇಕು. ಏಕಾಏಕಿ ಈ ರೀತಿ ಹೇಳಿಕೆ ನೀಡಿದರೆ ಹೇಗೆ..? ನನ್ನ ಮಗನ ಸಾವಿಗೆ ನ್ಯಾಯ ಕೊಡಿಸುತ್ತಾನಾ ಅವನು ಎಂದು ರೇಣುಕಾಚಾರ್ಯ ಆಕ್ರೋಶಗೊಂಡಿದ್ದರು.
ಸ್ನೇಹಿತ ಕಿರಣ್ ಚಲನವಲನದ ಬಗ್ಗೆ ಶಂಕೆ
ಸೋಮವಾರ ಮಧ್ಯಾಹ್ನದ ಹೊತ್ತಿಗೆ ಚಂದ್ರಶೇಖರ್ ಎಫ್ಎಸ್ಎಲ್ ವರದಿ ಬರುವ ಸಾಧ್ಯತೆ ಇದೆ. ಪೊಲೀಸರು ಸಹ ಇದನ್ನು ಆಧರಿಸಿ ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಅಪಘಾತವಾಗಿದೆಯೋ, ಬೇರೆ ಏನಾದರೂ ಆಗಿರಬಹುದೋ..? ಕೊಲೆ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ದೊರಕಲಿದೆ. ಈಗಾಗಲೇ ದಾವಣಗೆರೆ ಹಾಗೂ ಹುಬ್ಬಳ್ಳಿಯ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಿದ್ದರು. ಈ ವರದಿಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಇನ್ನು ಶಿವಮೊಗ್ಗದಲ್ಲಿ ಪೊಲೀಸರ ವಶದಲ್ಲಿರುವ ಕಿರಣ್ನ ಚಲನವಲನದ ಬಗ್ಗೆ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಕಿರಣ್ ಪೊಲೀಸರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನುವ ಆರೋಪ ಸಹ ಕೇಳಿಬರುತ್ತಿದೆ. ಈತನ ಜೊತೆಗೆ ಯಾಕೆ ಚಂದ್ರಶೇಖರ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಗೆ ಹೋಗಿದ್ದು ಎಂಬ ಕುರಿತು ಕೂಡ ತನಿಖೆ ಚುರುಕುಗೊಂಡಿದೆ.
ಪ್ರಕರಣದ ಬಗ್ಗೆ ತನಿಖಾಧಿಕಾರಿ ಹೇಳಿದ್ದೇನು..?
ಇನ್ನು ಎಚ್. ಕಡದಕಟ್ಟೆಯ ತುಂಗಾ ಮೇಲ್ದಂಡೆ ನಾಲೆಯಲ್ಲಿ ಸಿಕ್ಕ ಚಂದ್ರಶೇಖರ್ ಮೃತದೇಹದ ಶ್ವಾಸಕೋಶದಲ್ಲಿ ನೀರು ಇರುವುದು ಪತ್ತೆಯಾಗಿದೆ. ಚಂದ್ರಶೇಖರ್ ಸಾವು ಕುರಿತಾದ ಅನುಮಾನಗಳು ದಿನಕ್ಕೊಂದರಂತೆ ತಿರುವು ಪಡೆಯುತ್ತಿದ್ದು, ಪೊಲೀಸರಿಗೂ ಸಾಕಷ್ಟು ಸವಾಲಾಗಿ ಪರಿಣಮಿಸಿದೆ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಪ್ರಕರಣದ ತನಿಖೆ ಬಗ್ಗೆ ಮಾತನಾಡಿದ್ದು, ಪ್ರಕರಣದ ಸಂಬಂಧ ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್ಎಸ್ಎಲ್ ವರದಿ ಬಂದ ಬಳಿಕ ಸಾವಿನ ಕುರಿತು ಸ್ಪಷ್ಟತೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಪೊಲೀಸರು ನಮ್ಮನ್ನು ತನಿಖೆ ಮಾಡಲೇ ಇಲ್ಲ
ಇನ್ನು ಶಾಸಕ ರೇಣುಕಾಚಾರ್ಯ ಮಾತ್ರ ಚಂದ್ರಶೇಖರ್ನದ್ದು ಸಹಜವಾಗಿ ಸಂಭವಿಸಿರುವ ಸಾವಲ್ಲ. ಇದೊಂದು ಕೊಲೆ. ಸರಿಯಾದ ರೀತಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿಲ್ಲ. ನಮ್ಮನ್ನು ಪ್ರಾಥಮಿಕವಾಗಿ ವಿಚಾರಿಸಬೇಕಿತ್ತು. ಮನೆಯಲ್ಲಿ ಗಲಾಟೆ ಆಗಿತ್ತೋ ಇಲ್ಲವೋ ಎಂಬುದನ್ನು ಕೇಳಿಲ್ಲ. ಹೊನ್ನಾಳಿಯ ನಮ್ಮ ಮನೆಯಿಂದ ಚಂದ್ರಶೇಖರ್ ಭಾನುವಾರ ಹೋಗಿದ್ದ. ಇಲ್ಲಿಂದ ತನಿಖೆ ಆರಂಭಿಸಬೇಕಿತ್ತು. ಆದರೆ ಈ ರೀತಿ ಆಗಿಲ್ಲ. ಇನ್ನು ಚಂದ್ರಶೇಖರ್ ಕಾರು ಪತ್ತೆ ಹಚ್ಚಿದ್ದು ಬಿಜೆಪಿ ಮುಖಂಡರು, ಕಾರ್ಯಕರ್ತರಲ್ಲ. ಹಾಗಿದ್ದರೆ ನಾಲ್ಕೈದು ದಿನ ಪೊಲೀಸರು ಏನು ಮಾಡುತ್ತಿದ್ದರು. ಯಾವ ತನಿಖೆ ನಡೆಸಿದರು ಎಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ.
ಚಂದ್ರಶೇಖರ್ ಸಾವಿಗೆ ಬೇರೆಯದ್ದೇ ಕಾರಣ ಇರಬಹುದಾ ಎಂಬ ಅನುಮಾನವೂ ಕಾಡಲಾರಂಭಿಸಿದೆ. ವಿಡಿಯೋ ಏನಾದರೂ ಇರಬಹುದು. ಅದಕ್ಕಾಗಿ ಒಂದೇ ನಂಬರ್ನಿಂದ ಹತ್ತಕ್ಕೂ ಹೆಚ್ಚು ಬಾರಿ ಫೋನ್ಕರೆಗಳು ಬಂದಿವೆ. ಈ ಕರೆ ಮಾಡಿದವರು ಯಾರು..? ಇದುವರೆಗೆ ಯಾಕೆ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.
ಒಟ್ಟಿನಲ್ಲಿ ಚಂದ್ರಶೇಖರ್ ಸಾವಿನ ನಿಗೂಢತೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಸ್ಥಳೀಯ ಪೊಲೀಸರ ತನಿಖೆ ಬಗ್ಗೆ ವಿಶ್ವಾಸ ಕಳೆದುಕೊಂಡಿರುವ ರೇಣುಕಾಚಾರ್ಯ ಅವರು ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವ ಸಾಧ್ಯತೆಯೂ ಹೆಚ್ಚಿದೆ.