ಪತಿ ಜೊತೆ ಕಿರಿಕ್: 4 ವರ್ಷದ ಮಗನೊಂದಿಗೆ ನೂರು ಕಿ.ಮೀ ನಡೆದ ತಾಯಿ
ದಾವಣಗೆರೆ, ಜೂನ್ 12: ಪತಿಯೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಸುಮಾರು ನೂರಕ್ಕೂ ಹೆಚ್ಚು ಕಿಲೋಮೀಟರ್ವರೆಗೆ ನಾಲ್ಕು ವರ್ಷದ ಮಗುವಿನೊಂದಿಗೆ ಮಹಿಳೆಯೊಬ್ಬರು ಕಾಲ್ನಡಿಗೆಯಲ್ಲಿ ಬಂದ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪದ ನಾಗರತ್ನ ಅವರೇ ತನ್ನ ಪುಟ್ಟ ಮಗುವಿನೊಂದಿಗೆ ನಡೆದುಕೊಂಡು ಬಂದ ಮಹಿಳೆಯಾಗಿದ್ದಾಳೆ. ನಂತರ ದಾವಣಗೆರೆಯ ಕೆಟಿಜೆ ನಗರ ಪೊಲೀಸರು ಮಹಿಳೆಗೆ ತನ್ನ ಮಗುವಿನೊಂದಿಗೆ ಕಾರಿನಲ್ಲಿ ಹೋಗಲು ಅನುವು ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಘಟನೆ ಹಿನ್ನೆಲೆ
ಶಿವಮೊಗ್ಗದ ನಾಗರತ್ನ ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಗಾಡಿಕೊಪ್ಪದ ವ್ಯಕ್ತಿ ಜೊತೆ ವಿವಾಹವಾಗಿತ್ತು. ಆದರೆ ಗಂಡನ ಜೊತೆ ಜಗಳವಾಡಿಕೊಂಡ ನಾಗರತ್ನ, ಶುಕ್ರವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಮನೆ ಬಿಟ್ಟಿದ್ದಾರೆ. ಲಾಕ್ಡೌನ್ ಇದ್ದ ಕಾರಣ ಬಸ್ ಸೌಲಭ್ಯ ಇರಲಿಲ್ಲ. ಹೀಗಾಗಿ ಶಿವಮೊಗ್ಗದಿಂದ ದಾವಣಗೆರೆಯ ಹೈಟೆಕ್ ಆಸ್ಪತ್ರೆಯವರೆಗೆ ನಡೆದುಕೊಂಡೇ ಬಂದಿದ್ದಾರೆ. ನಗರದ ಹೈಟೆಕ್ ಆಸ್ಪತ್ರೆಯ ಬಳಿ ಬಂದಾಗ ರಾತ್ರಿ 9ಗಂಟೆಯಾಗಿತ್ತು. ಆಗ ತಾನು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತುಂಬಿಗೆರೆಗೆ ಹೋಗಬೇಕು ಎಂದು ಪೊಲೀಸ್ ಸಿಬ್ಬಂದಿ ಬಳಿ ಕೇಳಿಕೊಂಡಿದ್ದಾರೆ.

ಈ ವೇಳೆ ವಿಚಾರಿಸಿದ ಕೆಟಿಜೆ ನಗರ ಪೊಲೀಸ್ ಕಾನ್ಸ್ಟೇಬಲ್ ಹನುಮಂತಪ್ಪರಿಗೆ ನಾಗರತ್ನ, ""ತುಂಬಿಗೆರೆಯಲ್ಲಿ ಅಕ್ಕನ ಮನೆ ಇದೆ. ಅಲ್ಲಿಗೆ ಹೋಗಬೇಕು'' ಎಂದು ಹೇಳಿದ್ದು, ಆಗ ಪೊಲೀಸರು ಕರೆ ಮಾಡಿ ನಾಗರತ್ನರ ಅಕ್ಕನ ಜೊತೆ ಮಾತನಾಡಿದರು. ಬಳಿಕ ಸಾಮಾಜಿಕ ಕಾರ್ಯಕರ್ತ ಎಂ.ಜಿ ಶ್ರೀಕಾಂತ್ ಕಾರಿನ ವ್ಯವಸ್ಥೆ ಮಾಡಿದ್ದಾರೆ. ಇತರೆ ಸಿಬ್ಬಂದಿಯಿಂದ ಹಣ ಪಡೆದು ವಾಹನಕ್ಕೆ ಡೀಸೆಲ್ ತುಂಬಿಸಿ ಕಳುಹಿಸಿಕೊಟ್ಟಿದ್ದಾರೆ.

ಎಎಸ್ಐ ರಾಮಚಂದ್ರಪ್ಪ ಅವರಿಗೆ ಪೊಲೀಸ್ ಸಿಬ್ಬಂದಿ ನಾಗರಾಜ್, ಶ್ರೀನಿವಾಸ್, ನಾಗನಗೌಡ್ರು, ಸಾಮಾಜಿಕ ಕಾರ್ಯಕರ್ತರಾದ ಧನಂಜಯ ಬದ್ರಿ ಹಾಗೂ ದಯಾನಂದ ಸಹಾಯ ನೆರವು ನೀಡಿದರು. ಪೊಲೀಸರು ಹಾಗೂ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ತನ್ನ ಅಕ್ಕನ ಮನೆ ಸೇರುವಲ್ಲಿ ನಾಗರತ್ನ ಹಾಗೂ ಆಕೆ ಮಗು ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications