ಕಾಕನೂರು: ವಸತಿ ಶಾಲೆಯ ಊಟ ಸೇವಿಸಿ 23ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ದಾವಣಗೆರೆ, ನವೆಂಬರ್, 27: ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ಕಾಕನೂರಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಿಬ್ಬಂದಿ ಬೇಜವಾಬ್ದಾರಿ, ಉದಾಸೀನದಿಂದಾಗಿ 23 ಮಕ್ಕಳು ಭಾನುವಾರ ರಾತ್ರಿಯ ಊಟ, ಸೋಮವಾರ ಬೆಳಗ್ಗೆ ತಿಂಡಿ ಸೇವಿಸಿ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಶಾಸಕ ಬಸವರಾಜು ವಿ.ಶಿವಗಂಗ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಸ್ವಸ್ಥಗೊಂಡ ಮಕ್ಕಳ ಮಾಹಿತಿ ಪಡೆದ ಶಾಸಕರು ತಕ್ಷಣವೇ ಎಲ್ಲಾ ಮಕ್ಕಳನ್ನು ಸಂತೆಬೆನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಕಳಪೆ ಆಹಾರ ನೀಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ಸರ್ಕಾರಿ ವೇತನವನ್ನು ಪಡೆದು ಮಕ್ಕಳ ಅನಾರೋಗ್ಯಕ್ಕೆ ಕಾರಣರಾದ ವಸತಿ ನಿಲಯದ ವಾರ್ಡನ್ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡುವಂತೆ ಶಾಸಕರು ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಆಹಾರ ತಯಾರಿಕೆಗೆ ಬಳಕೆಯಾಗಿರುವುದು, ಸ್ವಚ್ಛತೆ ಮಾಯವಾಗಿರುವುದು, ಮಕ್ಕಳ ದೈನಂದಿನ ಜೀವನಕ್ಕೆ ಅವಶ್ಯಕ ಮೂಲ ಸೌಲಭ್ಯಗಳನ್ನು ನೀಡದೇ ಇರುವುದು, ಕೊಳೆತ ತರಕಾರಿಗಳನ್ನು ಉಪಯೋಗಿಸಿರುವುದು, ವಿದ್ಯಾರ್ಥಿಗಳಿಗೆ ಹಾಸಿಗೆ, ಎಣ್ಣೆ, ಬಿಸಿ ನೀರು ನೀಡದಿರುವುದರ ಬಗ್ಗೆ ಪರಿಶೀಲಿಸಿ ಇಲಾಖೆಯ ಮುಖ್ಯಸ್ಥರಿಗೆ ಶಾಸಕರು ಕಠಿಣ ಕ್ರಮ ವಹಿಸಲು ಸೂಚಿಸಿದ್ದಾರೆ.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್ ಅವರ ನಿರ್ಲಕ್ಷ್ಯ ಧೋರಣೆಯೇ ಇಲಾಖೆಯ ಈ ವ್ಯವಸ್ಥೆಗೆ ನೇರ ಕಾರಣವಾಗಿದ್ದ ಹಿನ್ನೆಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆಯ ಕಾರ್ಯವೈಖರಿ ಬಗ್ಗೆ ರಾಜ್ಯ ಮಟ್ಟದ ಇಲಾಖೆಯ ಮುಖ್ಯಸ್ಥರೊಂದಿಗೆ ಈಗಾಗಲೇ ಚರ್ಚಿಸಿರುವ ಶಾಸಕರು, ಮಕ್ಕಳ ಈ ಪರಿಸ್ಥಿತಿಯನ್ನು ಕಂಡು ಸ್ವತಃ ಮರುಕಪಟ್ಟರು. ಮಾನವೀಯತೆ, ಪ್ರಾಮಾಣಿಕ ಸೇವೆಯು ಇಲ್ಲದಿರುವ ಬಗ್ಗೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದರು.
ಇಲಾಖೆಯ ಮುಖ್ಯಸ್ಥರಿಗೆ ತೀವ್ರ ತರಾಟೆ ತೆಗೆದುಕೊಂಡ ಶಾಸಕರು, ಉತ್ತಮ ಶಿಕ್ಷಣ ಕೊಡುವುದರ ಜೊತೆ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದರೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳ ಆರೋಗ್ಯದ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಶಾಸಕರು ಸ್ವತಃ ಫೋನ್ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಹಿನ್ನೆಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಅಸ್ವಸ್ಥಗೊಂಡ ಮಕ್ಕಳ ಆರೋಗ್ಯದ ಬಗ್ಗೆ ಕರೆ ಮಾಡಿ ಕಾಳಜಿವಹಿಸುವಂತೆ ಸೂಚಿಸಿದರು. ಪ್ರತಿ ಗಂಟೆಗೆ ಒಮ್ಮೆ ಮಾಹಿತಿ ನೀಡುವಂತೆಯೂ ಸೂಚಿಸಿದ್ದಾರೆ. ಒಟ್ಟಿನಲ್ಲಿ ಮಕ್ಕಳು ಈಗ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications