ವಿಡಿಯೋ; ಉಕ್ರೇನ್ ಪರಿಸ್ಥಿತಿ ಬಿಚ್ಚಿಟ್ಟ ದಾವಣಗೆರೆಯ ಮಹ್ಮದ್ ಹಬೀಬ್
ದಾವಣಗೆರೆ, ಮಾರ್ಚ್ 01; "ಭಾರತ ಧ್ವಜ ಕಂಡರೆ ಉಕ್ರೇನ್ ಹಾಗೂ ರಷ್ಯಾದವರು ತುಂಬಾ ಗೌರವ ಕೊಡುತ್ತಿದ್ದರು. ಯಾವ ಸಮಸ್ಯೆಯನ್ನು ಮಾಡುತ್ತಿರಲಿಲ್ಲ. ಬದಲಾಗಿ ನಿಮಗೇನೂ ಮಾಡುವುದಿಲ್ಲ. ಆತಂಕಕ್ಕೆ ಒಳಗಾಗಬೇಡಿ ಎಂಬ ಮಾತನಾಡಿ ಧೈರ್ಯ ತುಂಬಿದರು" ಎಂದು ಉಕ್ರೇನ್ನಲ್ಲಿನ ಪರಿಸ್ಥಿತಿ ಬಿಚ್ಚಿಟ್ಟರು ದಾವಣಗೆರೆಯ ಮಹ್ಮದ್ ಹಬೀಬ್ ಅಲಿ.
ಉಕ್ರೇನ್ನಲ್ಲಿ ಸಿಲುಕಿದ್ದ ಮಹ್ಮದ್ ಹಬೀಬ್ ಅಲಿ ದಾವಣಗೆರೆಗೆ ಮರಳಿದ್ದಾರೆ. ಉಕ್ರೇನ್ನಲ್ಲಿನ ಪರಿಸ್ಥಿತಿ ಹೇಗಿತ್ತು ಎಂದು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ಭಾರತ ಧ್ವಜ ನೋಡಿದಾಕ್ಷಣ ರಷ್ಯಾ ಹಾಗೂ ಉಕ್ರೇನ್ನ ಸೈನಿಕರು ಏನು ಮಾಡುತ್ತಿರಲಿಲ್ಲ. ನಾವಿದ್ದ ಹಾಸ್ಟೆಲ್ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಕಲಾಗಿತ್ತು. ಹೀಗಾಗಿ, ಉಕ್ರೇನ್ ಹಾಗೂ ರಷ್ಯಾ ಸೈನಿಕರೇ ನಮಗೆ ಭದ್ರತೆ ನೀಡಿದ್ದರು" ಎಂದರು.
"ಭಾರತೀಯರನ್ನ ಬಿಟ್ಟು ಬೇರೆ ದೇಶದವರಿಗೆ ಧ್ವಜ ಹಾಕಲು ಅನುಮತಿ ಕೊಟ್ಟಿರಲಿಲ್ಲ. ಆದರೆ ನಮಗೆ ಮಾತ್ರ ಭಾರತದ ಧ್ವಜ ಹಾಕಲು ಅವಕಾಶ ನೀಡಿದ್ದರು. ಹಾಗಾಗಿ ಈಜಿಪ್ಟ್ ಸೇರಿದಂತೆ ಬೇರೆ ದೇಶದವರೂ ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತೀಯರು ಸುರಕ್ಷಿತರಾಗಿದ್ದಾರೆ. ಅವರೆಲ್ಲರೂ ಆದಷ್ಟು ಬೇಗ ವಾಪಸ್ ಭಾರತಕ್ಕೆ ಮರಳಬೇಕು ಎಂಬುದು ನನ್ನ ಆಸೆ" ಎಂದು ಹೇಳಿದರು.

"ಉಕ್ರೇನ್ನಲ್ಲಿನ ಪರಿಸ್ಥಿತಿ ತುಂಬ ಹದಗೆಟ್ಟಿದೆ. ಅನ್ನ, ಆಹಾರ, ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಎಲ್ಲ ಕಡೆ ಕರ್ಫ್ಯೂ ಹಾಕಲಾಗಿದೆ. ಯಾರು ಹೊರಗೆ ಹೋಗುವಂತಿಲ್ಲ. ಸರಿಯಾಗಿ ಊಟ ಕೂಡ ಸಿಗುವುದಿಲ್ಲ. ಚರ್ನಿವಟಿಸಿ, ಕಾರ್ಕಿವ್ ಹಾಗೂ ಕೀವ್ ನಲ್ಲಿ ಕರ್ನಾಟಕದ ಇನ್ನು ಬಹಳಷ್ಟು ಜನರಿದ್ದು, ಬಂಕರ್ ಹಾಗೂ ನೆಲಮಹಡಿಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಅವರೆಲ್ಲರೂ ವಾಪಸ್ ತಮ್ಮ ತವರಿಗೆ ಬರಬೇಕು" ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಮಹಮ್ಮದ್ ಹಬೀಬ್ ಅಲಿ ದಾವಣಗೆರೆಯ ಭಗತ್ ಸಿಂಗ್ ನಗರದ ಪ್ರೊ. ಶೌಕತ್ ಅಲಿ ಎಂಬುವರ ಪುತ್ರ. ಉಕ್ರೇನ್ನ ಚರ್ನಿವಿಟಸಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. "ರಷ್ಯಾ ದಾಳಿಗೆ ಒಳಗಾಗಿ ಸಂಕಷ್ಟದಲ್ಲಿರುವ ಭಾರತೀಯರನ್ನ ನಮ್ಮ ತ್ರಿವರ್ಣ ಧ್ವಜವೇ ಕಾಪಾಡುತ್ತಿದೆ" ಎಂದರು.
ಹಬೀಬ್ ಅಲಿ ಕಳೆದ ಡಿಸೆಂಬರ್ನಲ್ಲಿ ಉಕ್ರೇನ್ಗೆ ತೆರಳಿದ್ದರು. ಯುದ್ಧ ಪ್ರಾರಂಭವಾದ ಬಳಿಕ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಹಬೀಬ್ ಅಲಿ ಸೇರಿದಂತೆ ವಿದ್ಯಾರ್ಥಿಗಳನ್ನು ಯುನಿವರ್ಸಿಟಿಯ ಹಾಸ್ಟೆಲ್ನಲ್ಲಿಯೇ ಇರಲಿಸಲಾಗಿತ್ತು.
ಮಹಮ್ಮದ್ ಹಬೀಬ್ ಅಲಿ ಮತ್ತು ಇತರರು ಉಕ್ರೇನ್ ಚರ್ನಿವಿಟಿಸಿಯಿಂದ ಬಸ್ ಮೂಲಕ 35 ಕಿ. ಮೀ. ದೂರದ ರುಮೇನಿಯಾಕ್ಕೆ ಭಾರತದ ರಾಯಭಾರಿ ಜೊತೆ ಬಂದರು. ಬಳಿಕ ಅಲ್ಲಿಂದ ವಿಮಾನದ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ.
"ಅಲ್ಲಿಯ ಪರಿಸ್ಥಿತಿಯ ಬಗ್ಗೆ ಈಗಲೇ ಏನೂ ಹೇಳಲಾಗದು. ಮುಂದೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದರೆ ವಾಪಸ್ ಹೋಗುತ್ತೇನೆ. ರಷ್ಯಾ ಹಾಗೂ ಉಕ್ರೇನ್ ಅವರಿಗೆ ಭಾರತ ಅಂದರೆ ತುಂಬಾ ಇಷ್ಟ. ಇಲ್ಲಿನ ಜನರಿಗೆ ಅವರೇ ಸಹಾಯ ಮಾಡುತ್ತಿದ್ದಾರೆ. ಬೇರೆ ರಾಷ್ಟ್ರದವರಿಗೆ ಹೋಲಿಸಿದರೆ ಮೊದಲು ನಮ್ಮ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದಾರೆ. ಕನ್ನಡಿಗರೂ ಸೇರಿದಂತೆ ಸಾವಿರಾರು ಭಾರತೀಯರು ಅಲ್ಲಿ ಇದ್ದು, ಇಂಟರ್ ನೆಟ್, ಮೊಬೈಲ್ ಸಂಪರ್ಕ ಸಾಧ್ಯವಾಗದ ಕಾರಣ ಕೆಲವರು ಮಾತನಾಡಲು ಸಿಗುತ್ತಿಲ್ಲ. ಎಲ್ಲರೂ ಸುರಕ್ಷಿತವಾಗಿ ಬರಬೇಕೆಂದು" ಮಹಮ್ಮದ್ ಹಬೀಬ್ ಅಲಿ ಪ್ರಾರ್ಥಿಸಿದ್ದಾರೆ.
ಪುತ್ರ ಸುರಕ್ಷಿತವಾಗಿ ಮರಳಿದ್ದಕ್ಕೆ ಶೌಖತ್ ಅಲಿ ಸೇರಿದಂತೆ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ. ತನ್ನ ಮಗ ಉಕ್ರೇನ್ ನಲ್ಲಿ ಸಿಲುಕಿಕೊಂಡಾಗ ಭಯ ಆಗಿತ್ತು. ಈಗ ಖುಷಿಯಾಗಿದೆ ಎಂದು ಶೌಖತ್ ಅಲಿ ಹೇಳಿದರು.












Click it and Unblock the Notifications