ಉಕ್ಕಿ ಹರಿಯುತ್ತಿರುವ ತುಂಗಭದ್ರಾ: ಉಕ್ಕಡಗಾತ್ರಿಯಲ್ಲಿ ಜಲದಿಗ್ಬಂಧನ
ದಾವಣಗೆರೆ, ಜುಲೈ 9: ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ಜಲದಿಗ್ಬಂಧನ ಸ್ಥಿತಿ ನಿರ್ಮಾಣವಾಗಿದೆ.
ತುಂಗಭದ್ರ ನದಿ ನೀರು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಉಕ್ಕಡಗಾತ್ರಿಯ ಪವಿತ್ರ ಕ್ಷೇತ್ರ ಕರಿಬಸವೇಶ್ಬರ ದೇವಸ್ಥಾನದ ಸ್ನಾನಗಟ್ಟ, ಪೂಜಾ ಸಾಮಗ್ರಿ ಮಾರಾಟ ಮಾಡುವ ಅಂಗಡಿಗಳು ಮುಳುಗಡೆ ಆಗಿವೆ. 30 ಕ್ಕೂ ಅಧಿಕ ಪೂಜಾ ಸಾಮಾಗ್ರಿ ಅಂಗಡಿಗಳಲ್ಲಿ ನೀರು ತುಂಬಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಸೇತುವೆಗಾಗಿ ಸಿಎಂಗೆ ಪದ್ಮಶ್ರೀ ತುಳಸಜ್ಜಿ ಮನವಿ; ಶಾಸಕಿ ರೂಪಾಲಿ ಭರವಸೆ
ಶಿವಮೊಗ್ಗ ಜಿಲ್ಲೆಯ ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಗಾಜನೂರಿನ ತುಂಗಾ ಡ್ಯಾಂನಿಂದ 55 ಸಾವುರ ಕ್ಯೂಸೇಕ್ ನೀರು ಹೊರಬಿಡಲಾಗಿದ್ದು, ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ನದಿಗೆ ಇಳಿಯದಂತೆ ಆಡಳಿತ ಮಂಡಳಿ, ಗ್ರಾಮ ಪಂಚಾಯತ್ ಎಚ್ಚರಿಕೆ ನೀಡಿದೆ. ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್, ಮೆದಾರ ಓಣಿ ಮುಳುಗುವ ಆತಂಕ ಎದುರಾಗಿದ್ದು, ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಹಲವು ಮನೆಗಳಿಗೆ ಹಾನಿ
ಕಳೆದ ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿದ್ದ ಮಳೆ ಸ್ವಲ್ಪ ಬಿಡುವು ನೀಡಿದೆ. ಆದ್ರೆ ವರುಣನ ಆರ್ಭಟಕ್ಕೆ ಜಿಲ್ಲೆಯ ಕೆಲವೆಡೆ ಮನೆಗಳು ಧರೆಗುರುಳಿದ್ದರೆ, ಮತ್ತೆ ಕೆಲವೆಡೆ ಪ್ರವಾಹ ಭೀತಿ ಕಡಿಮೆ ಆಗಿಲ್ಲ. ಕಳೆದ ನಾಲ್ಕು ದಿನಗಳಲ್ಲಿ ಹನ್ನೆರಡಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಹೊನ್ನಾಳಿ, ಚನ್ನಗಿರಿ ಹಾಗೂ ದಾವಣಗೆರೆಯಲ್ಲಿ ಮಣ್ಣಿನ ಗೋಡೆ ಕುಸಿದು ಬಿದ್ದಿದ್ದು, ಜನರು ಅಪಾಯದಿಂದ ಪಾರಾಗಿದ್ದಾರೆ. ಚನ್ನಗಿರಿ ತಾಲೂಕಿನ ಗಾಣದಕಟ್ಟೆ, ಹಿರೇಕೊಗಲುರು, ಹೊನ್ನಾಳಿ ತಾಲೂಕಿನಲ್ಲಿ ಕೆಲವೆಡೆ ಹಾನಿ ಸಂಭವಿಸಿದ್ದರೆ, ಸತತ ಮಳೆಯಿಂದ ಮಣ್ಣಿನ ಗೋಡೆಗಳು ಬೀಳುವ ಹಂತದಲ್ಲಿ ಕೆಲವು ಮನೆಗಳಿವೆ. ಮನೆ ಕಳೆದುಕೊಂಡವರು ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ಯಲ್ಲೋ ಅಲರ್ಟ್ ಘೋಷಣೆ
ಬಿಡುವಿಲ್ಲದೇ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ಹರಿಹರ ತಾಲೂಕಿನ ಜನರು ಕಂಗೆಟ್ಡಿದ್ದಾರೆ. ತಗ್ಗು ಪ್ರದೇಶದ ವಾಸಿಗಳಲ್ಲಿ ಭಯ ದೂರ ಆಗಿಲ್ಲ.ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಉಪ ವಿಭಾಗ ಅಧಿಕಾರಿ, ತಾಲ್ಲೂಕು ಆಡಳಿತ ಜಲಾವೃತವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆ ನೀಡಲಾಗಿದ್ದು, ಜಿಲ್ಲಾಡಳಿತವು ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಸಾರ್ವಜನಿಕರಿಗೆ ಎಚ್ಚರಿಕೆ
ಮುಂಗಾರು ಮಳೆ ಜಲಾಯನ ಪ್ರದೇಶಗಳಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಪರಿಣಾಮದಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಆಗಿದೆ. ಹೊಲ ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ. ಹಾಗಾಗಿ ಹರಿಹರ ತಾಲ್ಲೂಕಿನ ನದಿ ಪಾತ್ರದಲ್ಲಿರುವ ಜನರನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರಿಸಲಯ ಕ್ರಮ ಕೈಗೊಳ್ಳಲಾಗುತ್ತಿದೆ. ನದಿ ಬಳಿಗೆ ಜನರು ಹೋಗಬಾರದು ಹಾಗೂ ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸುವುದಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ.
ಮಳೆ ಪ್ರಮಾಣ ಹೆಚ್ಚಾದರೆ ಕಾಳಜಿ ಕೇಂದ್ರ
ತುಂಗಭದ್ರಾ ನದಿಯ ನೀರಿನ ಪ್ರಮಾಣ ಏರಿಕೆ ಆಗುವ ಮುನ್ನವೇ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಗಂಗಾನಗರ ಕೈಲಾಸನಗರ, ಬೆಂಕಿ ನಗರ, ಹಲಸಬಾಳು ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೀಗೆ ಮುಂದುವರಿದರೆ ಆಶ್ರಯ ಕಳೆದುಕೊಂಡರೆ ಅಂತಹವರಿಗೆ ನೆರವಾಗಲು ಕಾಳಜಿ ಕೇಂದ್ರವನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.