ದಾವಣಗೆರೆ ಧಾರಾಕಾರ ಮಳೆ; ಹಲವು ವರ್ಷಗಳ ನಂತರ ಕೋಡಿ ಬಿದ್ದ ಕೆರೆಗಳು ಇವೆ ನೋಡಿ
ದಾವಣಗೆರೆ, ಅಕ್ಟೋಬರ್ 14 : ಈ ಬಾರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಪ್ರಮುಖ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಹಲವು ದಶಕಗಳ ಬಳಿಕ ಕೋಡಿ ಬಿದ್ದಿದ್ದು, ವರುಣನ ಆರ್ಭಟ ಹೆಚ್ಚಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಏಷ್ಯಾಖಂಡದ ಎರಡನೇ ಅತಿ ದೊಡ್ಡ ಕೆರೆ ಎಂಬ ಖ್ಯಾತಿಗೆ ಒಳಗಾಗಿರುವ ಸೂಳೆಕೆರೆ ಅಥವಾ ಶಾಂತಿಸಾಗರ ಎರಡರಿಂದ ಮೂರು ಬಾರಿ ಕೋಡಿ ಬಿದ್ದಿದ್ದರೆ, ನಾಲ್ಕು ದಶಕಗಳ ಬಳಿಕ ಅಣಜಿ ಕೆರೆ ಕೋಡಿ ಬಿದ್ದಿದೆ. ಇದೇ ರೀತಿಯಲ್ಲಿ ಜಿಲ್ಲೆಯ ಪ್ರಮುಖ ಕೆರೆಗಳು ಕೋಡಿ ಬಿದ್ದಿರುವ ಕುರಿತ ಸ್ಟೋರಿ.
40 ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ರುದ್ರನರ್ತನ ತೋರಿರುವ ವರುಣನ ಆರ್ಭಟಕ್ಕೆ ಜನರು ಬೆಚ್ಚಿಬೀಳುವ ಜೊತೆಗೆ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮಳೆ ಹೊಡೆತಕ್ಕೆ 60ಕ್ಕೂ ಹೆಚ್ಚು ಮನೆಗಳು ಒಂದೇ ದಿನದಲ್ಲಿ ಕುಸಿದು ಬಿದ್ದಿವೆ. ಕಳೆದ ನಾಲ್ಕು ದಶಕಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಈ ರೀತಿಯ ಆರ್ಭಟ ಕಂಡು ಬಂದಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅನೇಕ ಕೆರೆಗಳು ಮೈದುಂಬಿವೆ. ಆದರೆ ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ, ಅಡಿಕೆ, ಈರುಳ್ಳಿ ಜಮೀನುಗಳಲ್ಲಿ ನೀರು ನಿಂತಿದೆ.
ವರುಣನ ಆರ್ಭಟಕ್ಕೆ ತುಂಬಿದ ಕೆರೆಗಳು: ಕೋಡಿಬಿದ್ದ ನೀರಿನಲ್ಲಿ ಮುಳುಗಿದ ಬೆಳೆಗಳು, ರೈತರ ಗೋಳು
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸೂಳೆಕೆರೆಯು ಹೆಚ್ಚಿನ ವಿಸ್ತೀರ್ಣ, ಅತಿ ಹೆಚ್ಚು ನೀರು ಸಂಗ್ರಹವಾಗುವ ಕೆರೆ ಎಂದೇ ಖ್ಯಾತಿಗೊಂಡಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಜೀವಸೆಲೆಯೂ ಹೌದು. ಅದೇ ರೀತಿಯಲ್ಲಿ ಚಿತ್ರದುರ್ಗಕ್ಕೆ ಕುಡಿಯುವ ನೀರು ಇಲ್ಲಿಂದಲೇ ಹೋಗುವುದು. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ಈ ಕೆರೆಯಿಂದಲೇ ನೀರಾವರಿ ಆಶ್ರಯಿಸಲಾಗಿದೆ. ಈ ಕೆರೆ ತುಂಬಿದರೆ ಸೂಳೆಕೆರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡುಕ ಶುರುವಾದರೆ, ಚಿತ್ರದುರ್ಗ ಸೇರಿದಂತೆ ಈ ಕೆರೆ ಆಸರೆಯಾಗಿರುವವರಿಗೆ ಖುಷಿಯ ವಿಚಾರ.
ಈ ಬಾರಿ ಸುರಿದ ಭಾರಿ ಮಳೆ ಹಾಗೂ ಭದ್ರಾ ಡ್ಯಾಂನಿಂದ ನೀರು ಹೊರಬಿಟ್ಟ ಕಾರಣದಿಂದ ಅತಿ ಹೆಚ್ಚು ನೀರು ಬಂದಿದೆ. ಚನ್ನಗಿರಿ ಸುತ್ತಮುತ್ತಲೂ ಭಾರೀ ಮಳೆಯಾಗಿರುವುದರಿಂದ ಹಳ್ಳಕೊಳ್ಳಗಳ ನೀರು ಸಹ ಯಥೇಚ್ಛವಾಗಿ ಹರಿದು ಬಂದಿದೆ. ಇದರಿಂದಾಗಿ ಈ ಬಾರಿ ಮೂರು ಬಾರಿ ಕೋಡಿ ಬಿದ್ದಿದೆ. ಅಷ್ಟೊಂದು ಪ್ರಮಾಣದಲ್ಲಿ ಕೆರೆಗೆ ಜಲಧಾರೆ ಬಂದಿದ್ದು, ನೀರಿನ ಸಮಸ್ಯೆ ಮುಂದಿನ ವರ್ಷ ಇರೋದಿಲ್ಲ.
ಜಗಳೂರು: 15 ವರ್ಷಗಳ ಬಳಿಕ ಕೋಡಿಬಿದ್ದ ಇತಿಹಾಸ ಪ್ರಸಿದ್ಧ ಸಂಗೇನಹಳ್ಳಿ ಕೆರೆ, ತಲುಪುವ ಮಾರ್ಗ
ನಾಲ್ಕು ದಶಕಗಳ ನಂತರ ತುಂಬಿದ ಅಣಜಿ ಕೆರೆ
ಇನ್ನು ದಾವಣಗೆರೆ ತಾಲೂಕಿನ ಅಣಜಿ ಕೆರೆ ಕೂಡ ತುಂಬಾ ದೊಡ್ಡದು. ಈ ಕೆರೆಯು ನಾಲ್ಕು ದಶಕಗಳ ಬಳಿಕ ಕೋಡಿ ಬಿದ್ದಿದೆ. ಮಲ್ಪೆ - ಮೊಳಕಾಲ್ಮೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯು ಇಲ್ಲೇ ಇರುವುದರಿಂದ ಅಣಜಿ ಕೆರೆ ಉಕ್ಕಿ ಹರಿಯುತ್ತಿರುವುದರಿಂದ ರಸ್ತೆ ಮೇಲೆಲ್ಲಾ ನೀರು ಹರಿದಿದೆ. ಹತ್ತಾರು ಗ್ರಾಮಗಳಿಗೆ ಹಾಗೂ ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರುಣಿಸುವ ಈ ಕೆರೆಯು ನಲ್ವತ್ತು ವರ್ಷಗಳ ಬಳಿಕ ಕೋಡಿ ಬಿದ್ದಿದ್ದು ಸಾವಿರಾರು ಎಕರೆ ಬೆಳೆ ನಾಸವಾಗಿದೆ. ಮನೆಗಳಿಗೂ ನೀರು ನುಗ್ಗಿದೆ. ಇಷ್ಟೊಂದು ಪ್ರಮಾಣದಲ್ಲಿ ಕೆರೆಗೆ ನೀರು ಹರಿದು ಬಂದಿರುವುದು ನಾಲ್ಕು ದಶಕಗಳಲ್ಲಿ ಇದೇ ಮೊದಲು.
ಹಳ್ಳ ಕೊಳ್ಳಗಳ ನೀರಿನಿಂದ ಭರ್ತಿಯಾದ ತುಪ್ಪದಹಳ್ಳಿ ಕೆರೆ
ಈ ಕೆರೆಯು ದಾವಣಗೆರೆ ತಾಲೂಕಿನಲ್ಲಿ ಬರುತ್ತಿದೆ. ಜಗಳೂರು ತಾಲೂಕಿನ ಬಿಳಚೋಡು, ಚಿತ್ರದುರ್ಗದ ಭರಮಸಾಗರ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ನೀರು ತುಪ್ಪದಹಳ್ಳಿ ಕೆರೆಯು ತುಂಬಿದೆ. ಮಳೆ ಆರ್ಭಟಕ್ಕೆ ಹಳ್ಳಕೊಳ್ಳಗಳಿಂದ ಹರಿದು ಬಂದ ನೀರು ಸಹ ಈ ಕೆರೆಗೆ ಬರುತ್ತಿರುವುದರಿಂದ ಕೋಡಿ ಬಿದ್ದಿದೆ.
ಇನ್ನು ತುಪ್ಪದಹಳ್ಳಿ ಕೆರೆಯು ತುಂಬಲು ಕಾರಣ 670 ಕೋಟಿ ರೂಪಾಯಿ ವೆಚ್ಚದಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಬರುತ್ತದೆ. ತುಪ್ಪದಹಳ್ಳಿ ಕೆರೆಗೆ ಮಾತ್ರ ಪೈಪ್ ಲೈನ್ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 300 ಪೈಪ್ ಗಳು ಕಡಿಮೆ ಆದ ಕಾರಣ ಮೂರು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ. ಆದರೆ, ಮಳೆಗೆ 35 ರಿಂದ 40 ವರ್ಷಗಳ ಕಾಲ ಬರಿದಾಗಿದ್ದ ಕೆರೆಗಳು ಜೀವಸೆಲೆಯಿಂದ ನಳನಳಿಸುತ್ತಿವೆ.
ಭರ್ತಿಯಾದ ದೇವರಬೆಳಕೆರೆಯಿಂದ ನೀರು ಹೊರಕ್ಕೆ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಕೆರೆಯೂ ಸಂಪೂರ್ಣ ಭರ್ತಿಯಾಗಿ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ದೇವರಬೆಳಕೆರೆ ಕೆರೆ ಪಿಕಪ್ ಜಲಾಶಯ ಎಂದು ಹೇಳಲಾಗುತ್ತದೆ. ಗುಳದಹಳ್ಳಿ, ಸಂಕ್ಲೀಪುರ, ಬಲ್ಲೂರು, ದೇವರಬೆಳಕೆರೆ, ಮಿಟ್ಲಕಟ್ಟೆ ಹಾಗೂ ದಾವಣಗೆರೆ ತಾಲೂಕಿನ ಬಲ್ಲೂರು ಗ್ರಾಮಗಳಿಗೆ ಕೃಷಿ ಹಾಗೂ ಕುಡಿಯುವ ನೀರಿಗೆ ಇದು ಆಧಾರಸ್ಥಂಭ.
ಸುಮಾರು ಮೂರು ದಶಕಗಳ ಇತಿಹಾಸ ಹೊಂದಿರುವ ಪಿಕಪ್ ಡ್ಯಾಂ ಆಗುವುದಕ್ಕಿಂತ ಮುಂಚೆ ಇಲ್ಲಿ ದೊಡ್ಡ ಕೆರೆಯಿತ್ತು. ನೀರು ಸಂಗ್ರಹಿಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಸಲುವಾಗಿ ಸಣ್ಣದಾಗಿ ಜಲಾಶಯ ನಿರ್ಮಾಣ ಮಾಡಲಾಗಿತ್ತು.
ಒಂದೂವರೆ ದಶಕದ ಬಳಿಕ ತುಂಬಿದ ಸಂಗೇನ ಹಳ್ಳಿ ಕೆರೆ
ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಸಂಗೇನಹಳ್ಳಿ ಕೆರೆ. ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಸುಮಾರು ಒಂದೂವರೆ ದಶಕದ ಬಳಿಕ ಕೋಡಿ ಬಿದ್ದಿದೆ. ಜಗಳೂರು ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಸುರಿಯುವ ತಾಲೂಕು ಎಂದು ಕರೆಯಲಾಗುತ್ತದೆ. ಬರಪೀಡಿತ ಪ್ರದೇಶವೂ ಹೌದು. ಭಾರಿೀ ಮಳೆಯಿಂದಾಗಿ ಸಂಗೇನಹಳ್ಳಿ ಕೆರೆಯು ಸಹ ತುಂಬಿ ಹರಿಯುತ್ತಿದೆ.
ಮೂರನೇ ಬಾರಿ ತುಂಬಿದ ಹೆಬ್ಬಾಳು ಕೆರೆ
ಇನ್ನು ಅಸಗೋಡು ಕೆರೆಗೆ ಪ್ರಾಚೀನ ಇತಿಹಾಸ ಇದೆ. 11 ನೇ ಶತಮಾನದಲ್ಲಿ ಈ ಕೆರೆ ನಿರ್ಮಾಣ ಮಾಡಲಾಗಿದೆ. 21 ನೇ ಶತಮಾನದಲ್ಲಿಯೂ ಕೆರೆಯು ರೈತರ, ಜನರ ಪಾಲಿಗೆ ನೀರೊದಗಿಸುತ್ತಿದೆ. ಚಾಲುಕ್ಯರ ಆಳ್ವಿಕೆ ಕಾಲದಲ್ಲಿ ಈ ಕೆರೆ ನಿರ್ಮಾಣ ಮಾಡಲಾಗಿದೆ ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ. ಇಷ್ಟೊಂದು ಪುರಾತನ ಇತಿಹಾಸ ಹೊಂದಿರುವ ಈ ಕೆರೆಯು ಕೋಡಿ ಬಿದ್ದಿರುವುದು ಜನರಿಗೆ ಖುಷಿ ತಂದಿದೆ. ಇದನ್ನು ನೋಡಲು ತಂಡೋಪ ತಂಡವಾಗಿಯೂ ಜನರು ಬರುತ್ತಿದ್ದಾರೆ.
ದಾವಣಗೆರೆ ತಾಲೂಕಿನಲ್ಲಿ ಬರುವ ಹೆಬ್ಬಾಳು ಕೆರೆಯು ಸಂಪೂರ್ಣವಾಗಿ ಭರ್ತಿಯಾಗಿ ಕೋಡಿ ಬಿದ್ದಿದೆ. ಈ ಬಾರಿ ಮೂರು ಬಾರಿ ತುಂಬಿದೆ. ಈ ಕೆರೆಗೂ ನೂರಾರು ವರ್ಷಗಳ ಇತಿಹಾಸ ಇದೆ. ಸಾವಿರಾರು ಎಕರೆ ಪ್ರದೇಶಗಳಿಗೆ ಈ ಕೆರೆಯು ನೀರುಣಿಸುತ್ತದೆ.