ಕಾಂಗ್ರೆಸ್ನ ಒಳಬೇಗುದಿ ಬೀದಿಗೆ: ಶಾಮನೂರು ಕುಟುಂಬದ ವಿರುದ್ಧ ಕಾಂಗ್ರೆಸಿಗರ ತೀವ್ರ ಅಸಮಾಧಾನ
ದಾವಣಗೆರೆ, ಸೆಪ್ಟೆಂಬರ್ 12: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ಕೆಲವು ತಿಂಗಳು ಮಾತ್ರ ಇದೆ. ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆ ರಣತಂತ್ರ ಹೆಣೆಯತೊಡಗಿದೆ. ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ 75 ನೇ ಅಮೃತ ಮಹೋತ್ಸವ ಯಶಸ್ವಿಯಾಗಿ ನಡೆದ ಬಳಿಕ ರಾಜ್ಯದಲ್ಲಿ ಅಷ್ಟೇ ಅಲ್ಲ, ಜಿಲ್ಲೆಯಲ್ಲಿಯೂ ಹೊಸ ಹುರುಪು ತಂದಿತ್ತು.
ಆದರೆ ಈಗ ಕಾಂಗ್ರೆಸ್ ನ ಕೆಲ ಮುಖಂಡರ ಒಳಬೇಗುದಿ ಬೀದಿಗೆ ಬಿದ್ದಿದ್ದು, ಅಸಮಾಧಾನಿತರು ಅಭಿನಂದನೆ ಸಮಾರಂಭದ ಹೆಸರಿನಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ರ ವಿರುದ್ಧ ಬಂಡಾಯದ ಬಾವುಟ ಸಾರಿದ್ದಾರೆ. ಕೊಂಡಜ್ಜಿ ಸಮೀಪದ ಶಿವಪುರದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರಿಗೆ ಸನ್ಮಾನ ಸಮಾರಂಭದ ಹೆಸರಿನಲ್ಲಿ ಆಯೋಜಿಸಿದ್ದ ಈ ಸಭೆಯಲ್ಲಿ ಮಾತನಾಡಿದ ಬಹುತೇಕರು ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯನವರೇ ನೀವು ಮನುಷ್ಯರೋ? ಕಾಡು ಪ್ರಾಣಿಯೋ?: ಶ್ರೀರಾಮುಲು
ದಾವಣಗೆರೆ ಜಿಲ್ಲಾ ಹೈಕಮಾಂಡ್ ಶಿವಶಂಕರಪ್ಪ ಹಾಗೂ ಎಸ್ ಎಸ್ ಎಂ, ಜಿಲ್ಲಾಧ್ಯಕ್ಷ ಎಚ್ ಬಿ ಮಂಜಪ್ಪ ನಡೆಗೆ ಬೇಸತ್ತು ಈ ಸಭೆ ನಡೆಸಿದ್ದಾರೆ. ಇದು ಶಾಮನೂರು ಕುಟುಂಬದ ವಿರುದ್ದ ಒಗ್ಗಟ್ಟು ಪ್ರದರ್ಶನದ ವೇದಿಕೆಯಾಗಿಯೂ ಮಾರ್ಪಟ್ಟಿತ್ತು. ಹರಿಹರ ಶಾಸಕ ಎಸ್. ರಾಮಪ್ಪ, ಮಾಜಿ ಸಚಿವ ಶಿವಮೂರ್ತಿ ನಾಯ್ಕ್, ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ಸಭೆ ನಡೆದ ಕಾರಣ ಮಹತ್ವ ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದು ಮನೆಯ ಸ್ವತ್ತಾಗಿದೆ
ಈ ಸಭೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ್ ವಿರುದ್ಧ ವಿವಿಧ ರೀತಿಯ ಆರೋಪಗಳನ್ನು ಮಾಡಿದರು. ಜಿಲ್ಲೆಯ ಕಾಂಗ್ರೆಸ್ ನಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ. ಮುಖಂಡರನ್ನ ಕೀಳಾಗಿ ನೋಡಲಾಗುತ್ತಿದೆ. ಕಾರ್ಯಕರ್ತರನ್ನ ಗುಲಾಮರಂತೆ ನೋಡಲಾಗುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದು ಮನೆಯ ಸ್ವತ್ತಾಗಿದೆ. ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಹಿಂಬಾಲಕರ ಹೇಳಿದಂತೆ ಕೇಳುತ್ತಾರೆ. ತಮಗೆ ಬೇಡವಾದವರನ್ನು ಪಕ್ಷದಿಂದ ವಜಾ ಮಾಡಲಾಗುತ್ತಿದೆ. ಮೊದಲು ಜಿಲ್ಲಾಧ್ಯಕ್ಷ ಎಚ್ ಬಿ ಮಂಜಪ್ಪನನ್ನ ವಜಾ ಮಾಡುವಂತೆ ಸಭೆಯಲ್ಲಿ ಮಾತನಾಡಿದ ವೈ. ರಾಮಪ್ಪ, ಹದಡಿ ಹಾಲೇಶಪ್ಪ, ಸುಭಾಷ್ ಸೇರಿದಂತೆ ಹಲವರು ಆಗ್ರಹಿಸಿದರು.
ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರ ಬಳಕೆ
ಎಪಿಎಸಿ ಮಾಜಿ ಸದಸ್ಯ ಹದಡಿ ಹಾಲಪ್ಪ ಮಾತನಾಡಿ, "ಮಲ್ಲಿಕಾರ್ಜುನ್ ತನ್ನನ್ನ ಎಪಿಎಂಸಿ ಅಧ್ಯಕ್ಷನನ್ನಾಗಿ ಮಾಡಲಿಲ್ಲ. ತನಗೆ ಬೇಕಾದವರನ್ನ ಮಾಡಿದ್ದಾನೆ. ಮತ್ತೆ ತನಗೆ ಮತ ಹಾಕಲಿಲ್ಲ ಎಂದು ಕೇಳುತ್ತಾನೆ. ಆದರೆ ಆತನ ಮನೆಯ ಅಕ್ಕಪಕ್ಕದವರೇ ಮಲ್ಲಿಕಾರ್ಜುನ್ಗೆ ಓಟ್ ಹಾಕಿಲ್ಲ. ಶಾಮನೂರು ಶಿವಶಂಕರಪ್ಪ ನನ್ನ ಮಗನನ್ನ ಸೋಲಿಸಿದ್ದೀರಿ ಎಂದು ಹೇಳುತ್ತಾರೆ. ಆದರೆ, ನಮ್ಮ ಸಮುದಾಯದವರಿಗೆ ಜಿಲ್ಲೆಯಲ್ಲಿ ಯಾವುದೇ ಸ್ಥಾನವನ್ನು ನೀಡಿಲ್ಲ. ಎಲ್ಲವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮಂತವರಿಗೆ ಪಕ್ಷದಲ್ಲಿ ಅನ್ಯಾಯವಾಗುತ್ತಿದೆ," ಎಂದರು.
ದಾವಣಗೆರೆಯಿಂದ ಸ್ಪರ್ಧಿಸಲು ಸಿದ್ದುಗೆ ಕರೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡಲು ಆಹ್ವಾನಿಸಲು ಕಾಂಗ್ರೆಸ್ ನ ಒಂದು ಬಣದ ಕಾರ್ಯಕರ್ತರು ನಿರ್ಧರಿಸಿದ್ದಾರೆ. ನಮ್ಮೆಲ್ಲರ ಪ್ರಯತ್ನದ ಫಲವಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತಿದೆ. ಸಿದ್ದರಾಮಯ್ಯರು ಇಲ್ಲಿ ಸ್ಪರ್ಧಿಸಿದರೆ ಅಕ್ಕಪಕ್ಕದ ಕ್ಷೇತ್ರಗಳಿಗೂ ಅನುಕೂಲವಾಗುತ್ತದೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಹೇಳಿದರು.
ಸಿದ್ದರಾಮಯ್ಯಗೆ ಟಿಕೆಟ್ ನೀಡದಿದ್ದರೆ ಹಿಂದುಳಿದವರಿಗೆ ಟಿಕೆಟ್ ನೀಡಲಿ
ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರ ಪಕ್ಷದ ಹೈಕಮಾಂಡ್ ಗೆ ಬಿಟ್ಟದ್ದು. ಇದನ್ನು ಬಿಟ್ಟರೆ ಯಾರೂ ಸಹ ಆಯ್ಕೆ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯರಿಗೆ ಟಿಕೆಟ್ ನೀಡದಿದ್ದರೆ ಅಲ್ಪಸಂಖ್ಯಾತರು ಇಲ್ಲವೇ ಹಿಂದುಳಿದ ವರ್ಗದ ನಾಯಕರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕ ಎಸ್. ರಾಮಪ್ಪ ಮಾತನಾಡಿ., ಕೆಲ ಗೊಂದಲಗಳು ಕಾರ್ಯಕರ್ತರಿಗೆ ನೋವು ತಂದಿದೆ. ಇದಕ್ಕೆ ತೆರೆ ಎಳೆಯಬೇಕಿದೆ. ಸಿದ್ದರಾಮಯ್ಯರು ಹರಿಹರದಲ್ಲಿ ಸ್ಪರ್ಧಿಸಿದರೆ ಅನುಕೂಲವಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಹೊನ್ನಾಳಿ ಸಿದ್ದಪ್ಪ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ, ಮಾಜಿ ಸಚಿವ ಶಿವಮೂರ್ತಿ ನಾಯ್ಕ್, ಕಾಂಗ್ರೆಸ್ ಮುಖಂಡ ರಾಜಕುಮಾರ್, ಹದಡಿ ಹಾಲಪ್ಪ ಸೇರಿದಂತೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.