ಸಿದ್ದರಾಮಯ್ಯ ಸಿಎಂ ಆಗಲೆಂದು ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ
ದಾವಣಗೆರೆ, ಮೇ, 15: ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಪಟ್ಟಕ್ಕಾಗಿ ಸಿದ್ದಮರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಅದೇ ರೀತಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು ಎಂದು ಪ್ರಾರ್ಥಿಸಿ ದಾವಣಗೆರೆಯಲ್ಲಿ ಕುರುಬ ಸಮಾಜದ ಪ್ರಮುಖರು ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
13 ಬಾರಿ ಬಜೆಟ್ ಮಂಡನೆ
ಈ ವೇಳೆ ಮಾತನಾಡಿದ ಕುರುಬ ಸಮಾಜದ ಅಧ್ಯಕ್ಷ ವೀರಣ್ಣ, ಎಲ್ಲಾ ಸಮಾಜಕ್ಕೆ ಬೇಕಾಗುವ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದಲ್ಲಿ ಎಲ್ಲಾ ಸಮಾಜದವರನ್ನು ತನ್ನ ಜೊತೆಗೆ ಕೊಂಡೊಯ್ದು ಸಮ ಸಮಾಜವನ್ನು ನಿರ್ಮಾಣ ಮಾಡಿದ ವ್ಯಕ್ತಿತ್ವ ಅವರದು. ಅಲ್ಲದೆ 13 ಬಾರಿ ಬಜೆಟ್ ಮಂಡನೆ ಮಾಡಿರುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಎಂದರು.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್ನ ವರಿಷ್ಠರು ಬೇರೆ ಯಾವುದೇ ಒಂದು ಜಾತಿಗೆ ಸೀಮಿತ ಆಗುವ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಬಾರದು. ಬದಲಾಗಿ ಎಲ್ಲಾ ಸಮಾಜದ ವ್ಯಕ್ತಿ ಆಗಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗಿದೆ. ಆ ಮೂಲಕ ಎಲ್ಲಾ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.
ಸಿದ್ದರಾಮಯ್ಯಗೆ ಆಡಳಿತ ನೀಡಿ
ನಂತರ ಪಾಲಿಕೆಯ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಬಿ.ಗೋಣೆಪ್ಪ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಶಕ್ತಿ ಇರುವುದು ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ. ಅಲ್ಲದೆ 13 ಬಾರಿ ರಾಜ್ಯದ ಅಯವ್ಯಯವನ್ನು ಮಂಡಿಸಿರುವ ಹೆಗ್ಗಳಿಕೆ ಅವರಿಗಿದೆ. ಆದ್ದರಿಂದ ಅವರಿಗೆ ಆಡಳಿತ ಕೊಟ್ಟರೆ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆಗಬೇಕು
ಕುರುಬ ಸಮಾಜದ ಮುಖಂಡ ಹಾಗೂ ನಗರ ದೇವತೆ ದುರ್ಗಾಂಬಿಕ ದೇವಸ್ಥಾನದ ಟ್ರಸ್ಟಿ ಗೌಡ್ರ ಚೆನ್ನಬಸಪ್ಪ ಮಾತನಾಡಿ, ದೇವರಾಜ ಅರಸು ನಂತರ ಎಲ್ಲಾ ಸಮಾಜಕ್ಕೆ ಸಮಾನತೆ ನೀಡಿದ ಹಾಗೂ ಸಮಾನ ಅಭಿವೃದ್ಧಿ ಕಲ್ಪಿಸಿದ ವ್ಯಕ್ತಿ ಅಂದರೆ ಅದು ಸಿದ್ದರಾಮಯ್ಯ ಮಾತ್ರ. ಅಹಿಂದ ವರ್ಗದ ಪ್ರತಿಯೊಂದು ಸಮಾಜಗಳನ್ನು ತನ್ನ ಜೊತೆಗೆ ಕೊಂಡೊಯ್ಯುವ ಮೂಲಕ ಎಲ್ಲಾ ವರ್ಗಗಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ಇದೀಗ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಯಾವುದೇ ಕಾರಣಕ್ಕೂ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯನ್ನು ಆಯ್ಕೆ ಮಾಡಬಾರದು. ಎಲ್ಕಾ ಸಮಾಜಕ್ಕೆ ಸಲ್ಲುವ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಫೋಟೋ ಇಟ್ಟು ಪೂಜೆ
ಹಾಗೆಯೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ನಗರದ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸುವ ಜೊತೆಗೆ, ದೇವಿಯ ಪಕ್ಕದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಇಟ್ಟು ಪ್ರಾರ್ಥನೆ ಸಮರ್ಪಿಸಲಾಯಿತು. ಜೊತೆಗೆ 101 ತೆಂಗಿನಕಾಯಿಗಳನ್ನು ಒಡೆದು ಅಭಿಮಾನಿಗಳು, ಕುರುಬ ಸಮಾಜದ ಯುವಕರು ಸಿದ್ದರಾಮಯ್ಯ ಸಿಎಂ ಗದ್ದುಗೆ ಏರಬೇಕು ಎಂದು ಹೇಳಿದರು.
ಎಲ್ಲಾ ಸಮುದಾಯದ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ಉತ್ತಮ ಆಡಳಿತ ನಡೆಸಿದ್ದಾರೆ. ಆದ್ದರಿಂದ ಮೊದಲ ಅವಧಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಲಿ. ಇಲ್ಲದಿದ್ದರೆ ಮುಂದಿನ ಬಾರಿ ಕುರುಬ ಸಮುದಾಯ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications