ದಾವಣಗೆರೆ ಮಹಿಳೆಯನ್ನು ಮಹಾರಾಷ್ಟ್ರದ ವ್ಯಕ್ತಿಗೆ ಮಾರಾಟ ಮಾರಿದ ಕಿಡಿಗೇಡಿಗಳು!
ದಾವಣಗೆರೆ, ಮೇ. 22: ದಾವಣಗೆರೆ ಜಿಲ್ಲೆಯ ಹೊನ್ನಾಳಿಯ 30 ವರ್ಷದ ಮಹಿಳೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವ್ಯಕ್ತಿಯೊಬ್ಬನಿಗೆ ಒಂದು ಲಕ್ಷಕ್ಕೆ ಮಾರಾಟ ಮಾಡಿರುವ ಘಟನೆ ವರದಿಯಾಗಿದೆ. ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದಲ್ಲಿ ಮೂವರು ಆರೋಪಿಗಳ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, "ಮಹಿಳೆಯ ಸಹೋದರನ ದೂರಿನ ಆಧಾರದ ಮೇಲೆ ಪೊಲೀಸರು ಮೇ 12 ರಂದು ಶಿವಮೊಗ್ಗದ ಬದಲು ಸೊಲ್ಲಾಪುರಕ್ಕೆ ಮಹಿಳೆಯನ್ನು ಕೆಲಸಕ್ಕೆ ಕರೆದುಕೊಂಡು ಹೋದ ದಾವಣಗೆರೆ ಜಿಲ್ಲೆಯ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ" ಎಂದು ಹೇಳಿದ್ದಾರೆ.

"ದಾವಣಗೆರೆ ಪೊಲೀಸರು ಸೋಲಾಪುರ ಪೊಲೀಸ ಜೊತೆಗೆ ಸಂಪರ್ಕದಲ್ಲಿದ್ದಾರೆ. ಮಹಿಳೆಯನ್ನು ಕರೆತರಲು ನಾವು ತಂಡವನ್ನು ಸೋಲಾಪುರಕ್ಕೆ ಕಳುಹಿಸಿದ್ದೇವೆ" ಎಂದು ಎಸ್ಪಿ ಉಮಾ ಪ್ರಶಾಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಚಿಕ್ಕ ಮಗುವಿನ ತಾಯಿಯಾಗಿರುವ ಮಹಿಳೆ ಕೆಲವು ತಿಂಗಳ ಹಿಂದೆ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ. ತನ್ನ ಕುಟುಂಬದ ಹೊಣೆ ಹೊತ್ತ ಆಕೆ ಕಲ್ಯಾಣ ಮಂಟಪಗಳಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಬೇರೆ ಜಿಲ್ಲೆಗಳಲ್ಲೂ ಮಹಿಳೆಯರ ತಂಡದೊಂದಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ, ಮೇ 12 ರಂದು ಇತರ ಮಹಿಳೆಯರು ಮತ್ತು ಮೂವರು ಪುರುಷರೊಂದಿಗೆ ಶಿವಮೊಗ್ಗದಲ್ಲಿ ಮದುವೆ ಸಮಾರಂಭದ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟು ಹೋಗಿದ್ದವರು ವಾಪಸ್ ಬಂದಿರಲಿಲ್ಲ.

ಮನೆಯಿಂದ ಹೊರಬಂದ ನಂತರ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಮೇ 20, ಸೋಮವಾರ, ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತು. ನನ್ನನ್ನು ಶಿವಮೊಗ್ಗದ ಬದಲು ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಒಂಟಿಯಾಗಿ ಕರೆದುಕೊಂಡು ಹೋಗಲಾಗಿದೆ. ಮಾರ್ಗಮಧ್ಯೆ ಗುಂಪಿನ ಇತರ ಸದಸ್ಯರು ತಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎಂದು ಹೇಳಿದ್ದರು. ಮೂವರು ವ್ಯಕ್ತಿಗಳು ನನ್ನನ್ನು ಒಂದು ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ನನ್ನ ಸಹೋದರಿ ನನಗೆ ಮಾಹಿತಿ ನೀಡಿದ್ದರು. ಅವರು ನೀಡಿದ ಮಾಹಿತಿಯ ಆಧಾರದ ಮೇಲೆ, ನಾನು ದೂರಿನಲ್ಲಿ ಆರೋಪಿಗಳ ಹೆಸರನ್ನು ಉಲ್ಲೇಖಿಸಿದೆ ಎಂದು ಆಕೆಯ ಸಹೋದರ (ದೂರುದಾರ) ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಳಿಕ ಅವರು ಹೊನ್ನಾಳಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದಲ್ಲಿ ಭದ್ರಾವತಿ ಮೂಲದ ರೋಜಿ ಲೀನಾ (43), ಮಲ್ಲಿಕಾರ್ಜುನ್ (47), ಮತ್ತು ಲೋಕೇಶ್ (35) ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೊನ್ನಾಳಿ ಪೊಲೀಸ್ ನಿರೀಕ್ಷಕ ಮುತ್ತುರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯನ್ನು ಕರೆದೊಯ್ದು ಮಾರಾಟ ಮಾಡಿದ ಮೂವರನ್ನು ಪೊಲೀಸರು ಗುರುತಿಸಿದ್ದು, ಶೀಘ್ರ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಲಾಪುರ ಪೊಲೀಸ್ ವರಿಷ್ಠಾಧಿಕಾರಿಗಳ ಜತೆಗಿನ ಚರ್ಚೆಯ ಆಧಾರದ ಮೇಲೆ ದಾವಣಗೆರೆ ಎಸ್ಪಿ ಉಮಾ ಮಾತನಾಡಿ, ಮಹಿಳೆಯನ್ನು ಮಾರಾಟ ಮಾಡಿದವರ ವಿರುದ್ಧ ಮಾತ್ರವಲ್ಲದೆ ಖರೀದಿಸಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮನುಷ್ಯನನ್ನು ಅದರಲ್ಲೂ ಹೆಣ್ಣನ್ನು ಮಾರುವುದು ಸುಸಂಸ್ಕೃತ ಸಮಾಜಕ್ಕೆ ಅವಮಾನ. ರಾಷ್ಟ್ರದ ಯಾವುದೇ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಉಮಾ ತಿಳಿಸಿದ್ದಾರೆ. ಮಹಿಳೆಯನ್ನು ಸುರಕ್ಷಿತವಾಗಿ ಕರೆತರುವುದು ಮತ್ತು ದುಷ್ಕರ್ಮಿಗಳ ಕೈಗೆ ಬೀಳದಂತೆ ತಡೆಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications