SSLC Result: ಆಟೋ ಚಾಲಕನ ಮಗ ದಾವಣಗೆರೆ ಜಿಲ್ಲೆಗೆ ಪ್ರಥಮ
ದಾವಣಗೆರೆ, ಆಗಸ್ಟ್ 10: ಸೋಮವಾರ ಮಧ್ಯಾಹ್ನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶಗಳು ಹೊರ ಬಿದ್ದಿದ್ದು, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಆಟೋ ಚಾಲಕನ ಮಗ ಅಭಿಷೇಕ್.ಎಂ 625ಕ್ಕೆ 623 ಅಂಕ ಪಡೆದು ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಹರಿಹರ ತಾಲ್ಲೂಕಿನ ಗುತ್ತೂರು ಗ್ರಾಮದ ಆಟೋ ಚಾಲಕ ಮಂಜುನಾಥ್ ಹಾಗೂ ನೇತ್ರಾವತಿ ಎನ್ನುವವರ ಮಗ ಅಭಿಷೇಕ್, ಬಡತನಲ್ಲಿ ಬೆಳೆದು ಛಲದಿಂದ ಓದುತ್ತಿದ್ದ. ತನ್ನ ತಂದೆ ಅಟೋ ಚಾಲಕನಾಗಿ, ತಾಯಿ ಕೂಲಿ ಕೆಲಸ ಮಾಡಿಕೊಂಡು ಸಂಸಾರವನ್ನು ಸಾಗಿಸುತ್ತಿದ್ದರು.
ಇವರ ಕಷ್ಟ ನೋಡಿ ಬೆಳೆದ ಅಭಿಷೇಕ್ ಅತ್ಯಂತ ಶ್ರಮವಹಿಸಿ ಓದುತ್ತಿದ್ದ, ಅಲ್ಲದೆ ಮನೆಯಿಂದ ಶಾಲೆಗೆ ಆರು ಕಿ.ಮೀ ಇದ್ದು, ಅಷ್ಟು ದೂರ ಸೈಕಲ್ ನಲ್ಲಿ ಓಡಾಡುತ್ತಿದ್ದನು. ಯಾವುದೇ ಕೆಟ್ಟ ಚಾಳಿಗೆ ಬೀಳದೆ ಓದಿನ ಬಗ್ಗೆ ಮಾತ್ರ ಆಲೋಚನೆ ಮಾಡುತ್ತಿದ್ದು, ಇಡೀ ಶಾಲೆಗೆ ಲೀಡರ್ ಆಗಬೇಕು ಎಂದು ಹೇಳಿದರೆ ಇಲ್ಲ ಸರ್ ನಾನು ಓದಬೇಕು ನನ್ನ ಓದಿಗೆ ಅಡ್ಡವಾಗುತ್ತೆ ಎಂದು ಹೇಳಿದ್ದ ಎಂದು ಶಿಕ್ಷಕರು ಹೇಳುತ್ತಾರೆ.

ಅಲ್ಲದೆ ಬಡತನದಲ್ಲಿ ಇದ್ದಿದ್ದರಿಂದ ಗುತ್ತೂರು ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ಗೀತಾ ಎನ್ನುವವರು ನಾನು ಚೆನ್ನಾಗಿ ಓದುತ್ತಿರುವುದನ್ನು ನೋಡಿ, ಓದಿನ ಖರ್ಚು ವಹಿಸಿಕೊಂಡು ಎಂ.ಕೆ.ಇ.ಟಿ ಪ್ರೌಢಶಾಲೆಗೆ ಸೇರಿಸಿದ್ದಾರೆ ಎಂದು ವಿದ್ಯಾರ್ಥಿ ಅಭಿಷೇಕ್ ಹೇಳುತ್ತಾನೆ.

ಇನ್ನು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ 100 , ಇಂಗ್ಲಿಷ್ 100, ಹಿಂದಿ-100, ಗಣಿತ-100, ವಿಜ್ಞಾನ-100 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಪಡೆದುಕೊಂಡಿದ್ದಾನೆ. ಮುಂದೆ ವಿಜ್ಞಾನ ವಿಷಯ ತೆಗೆದುಕೊಂಡು ಎಂಜಿನಿಯರ್ ಆಗುವ ಆಸೆ ಹೊರ ಹಾಕಿದ್ದಾನೆ.












Click it and Unblock the Notifications