ಕಾಂಗ್ರೆಸ್ ಪಟ್ಟಿ; ದಾವಣಗೆರೆ ಉತ್ತರ, ದಕ್ಷಿಣಕ್ಕೆ ಅಪ್ಪ-ಮಗ ಅಭ್ಯರ್ಥಿ
ದಾವಣಗೆರೆ, ಮಾರ್ಚ್ 25; ಕರ್ನಾಟಕ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಉಳಿದಂತೆ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಟ್ಟಿಯಲ್ಲಿ ಹಲವಾರು ಅಚ್ಚರಿಗಳು ಸಹ ಇವೆ.
ಶನಿವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೇಂದ್ರ ಚುನಾವಣಾ ಸಮಿತಿ ಉಸ್ತುವಾರಿ ಮುಕುಲ್ ವಾಸ್ನಿಕ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. 91 ವರ್ಷದ ಶಾಮನೂರು ಶಿವಶಂಕರಪ್ಪಗೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಅವರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ ಸಹ ದಾವಣಗೆರೆ ದಕ್ಷಿಣದಲ್ಲಿ ಟಿಕೆಟ್ ಪಡೆದಿದ್ದಾರೆ.

ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಸಿಕ್ಕಿದೆ. 2018ರ ಚುನಾವಣೆಯಲ್ಲಿ ಅವರು 71,369 ಮತಗಳನ್ನು ಪಡೆದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಹಾಲಿ ಶಾಸಕರೂ ಆಗಿರುವ ಅವರು ಈ ಬಾರಿಯ ಚುನಾವಣೆಯಲ್ಲಿಯೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2008ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ರಚನೆಗೊಂಡ ಬಳಿಕ ನಡೆದ ಮೂರು ಚುನಾವಣೆಯಲ್ಲಿಯೂ ಶಾಮನೂರು ಶಿವಶಂಕರಪ್ಪ ಗೆದ್ದು ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ.
ಶಾಮನೂರು ಶಿವಶಂಕರಪ್ಪಗೆ ಟಿಕೆಟ್ ನಿರಾಕರಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೂ ತಿಳಿಸಿದೆ. ಅವರಿಗೆ ಟಿಕೆಟ್ ನೀಡುವುದರಿಂದ ದಾವಣಗೆರೆ ಮಾತ್ರವಲ್ಲ ರಾಜ್ಯದ ಇತರ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಹ ಪಕ್ಷಕ್ಕೆ ಅನುಕೂಲವಾಗಲಿದೆ. ಪ್ರಬಲ ನಾಯಕನಿಗೆ ಟಿಕೆಟ್ ನೀಡದಿದ್ದರೆ ಇತರ ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿ ಪಕ್ಷದ ನಾಯಕರಲ್ಲಿದೆ. ಆದ್ದರಿಂದ ವಯಸ್ಸಿನ ಕಾರಣವನ್ನೂ ನೀಡದೆ ಈ ಬಾರಿಯ ಚುನಾವಣೆ ಟಿಕೆಟ್ ನೀಡಲಾಗಿದೆ.

2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದ ಬಳಿಕ ದಾವಣಗೆರೆ ಕ್ಷೇತ್ರ ದಾವಣಗೆರೆ ದಕ್ಷಿಣ ಮತ್ತು ದಾವಣಗರೆ ಉತ್ತರ ಎಂದು ಎರಡು ಕ್ಷೇತ್ರವಾಗಿ ಬದಲಾಯಿತು. 1952 ರಿಂದ 2004ರ ತನಕ ದಾವಣಗೆರೆ ಕ್ಷೇತ್ರಕ್ಕೆ 13 ಚುನಾವಣೆಗಳು ನಡೆದಿವೆ. 9 ಬಾರಿ ಕಾಂಗ್ರೆಸ್, ಸಿಪಿಐ 3, ಪಿಎಸ್ಪಿ 1 ಬಾರಿ ಗೆಲುವು ಸಾಧಿಸಿತ್ತು. ದಾವಣಗೆರೆ ದಕ್ಷಿಣ ಕ್ಷೇತ್ರ ರಚನೆಗೊಂಡ ಬಳಿಕ 2008, 2013, 2018ರಲ್ಲಿ ಕಾಂಗ್ರೆಸ್ನ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದಾರೆ. 2013ರ ಚುನಾವಣೆ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಶಾಮನೂರು ಶಿವಶಂಕರಪ್ಪ ಸಚಿವರು ಸಹ ಆಗಿದ್ದರು.
ದಾವಣಗೆರೆ ಉತ್ತರ; ಇನ್ನು ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಪುತ್ರ, ಕ್ಷೇತ್ರದ ಮಾಜಿ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ ಟಿಕೆಟ್ ಪಡೆದಿದ್ದಾರೆ. 2013ರ ಚುನಾವಣೆಯಲ್ಲಿ 88,101 ಮತಗಳನ್ನು ಪಡೆದು ಅವರು ಜಯಗಳಿಸಿದ್ದರು. ಆದರೆ 2018ರ ಚುನಾವಣೆಯಲ್ಲಿ 72,469 ಮತಗಳನ್ನು ಪಡೆದು 76,540 ಮತಗಳನ್ನು ಪಡೆದ ಬಿಜೆಪಿಯ ಎಸ್. ಎ. ರವೀಂದ್ರ ನಾಥ್ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಮತ್ತೆ ಅವರಿಗೆ ಟಿಕೆಟ್ ನೀಡಲಾಗಿದೆ.
2008ರಲ್ಲಿ ದಾವಣಗೆರೆ ಉತ್ತರ ಕ್ಷೇತ್ರ ರಚನೆಗೊಂಡ ಬಳಿಕ ಮೂರು ಚುನಾವಣೆ ನಡೆದಿದೆ. ಎರಡು ಬಾರಿ ಬಿಜೆಪಿ ಗೆದ್ದಿದೆ, ಒಂದು ಬಾರಿ ಕಾಂಗ್ರೆಸ್ ಜಯಗಳಿಸಿದೆ. 2008ರಲ್ಲಿ ನಡೆದ ನಾಟಕೀಯ ವಿದ್ಯಮಾನಗಳ ಕಾರಣ ದಾವಣಗೆರೆ ಉತ್ತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇರಲಿಲ್ಲ. ಪ್ರಬಲ ಸ್ಪರ್ಧೆ ಒಡ್ಡಲು ಯಾರೂ ಇಲ್ಲದ ಕಾರಣ ಬಿಜೆಪಿಯ ಎಸ್. ಎ. ರವೀಂದ್ರನಾಥ 53,910 ಮತಗಳನ್ನು ಪಡೆದು ಗೆಲುವು ಕಂಡಿದ್ದರು. 2013ರಲ್ಲಿ ಎಸ್. ಎಸ್. ಮಲ್ಲಿಕಾರ್ಜುನ ಗೆಲುವು ಸಾಧಿಸುವ ಮೂಲಕ ಹಿಂದಿನ ಚುನಾವಣೆ ಸೇಡು ತೀರಿಸಿಕೊಂಡಿದ್ದರು. 2018ರಲ್ಲಿ ಎಸ್. ಎ. ರವೀಂದ್ರನಾಥ ಮತ್ತೆ ಗೆಲ್ಲುವು ಮೂಲಕ ಎಸ್. ಎಸ್. ಮಲ್ಲಿಕಾರ್ಜುನ ಸೋಲಿಸಿದರು.












Click it and Unblock the Notifications