ಬೊಮ್ಮಾಯಿಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ: ಬಿಜೆಪಿ ಸಂಸದ ಸಿದ್ದೇಶ್ವರ ಸ್ಫೋಟಕ ಹೇಳಿಕೆ- ವರದಿ ವಿವರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಂಸದ ಜಿ. ಎಂ. ಸಿದ್ದೇಶ್ವರ ಅಚ್ಚರಿ ಮೂಡಿಸಿದ್ದಾರೆ.
ದಾವಣಗೆರೆ, ಮಾರ್ಚ್, 15: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಂಸದ ಜಿ. ಎಂ. ಸಿದ್ದೇಶ್ವರ ಅಚ್ಚರಿ ಮೂಡಿಸಿದ್ದಾರೆ.
ಜಿಎಂಐಟಿಯ ಪಕ್ಕದ ಜಮೀನಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಮಹಾಸಂಗಮ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಶಿಗ್ಗಾಂವ್ನಿಂದ ಗೆದ್ದು ಮುಖ್ಯಮಂತ್ರಿಯಾಗಿರುವೆ. ಹಾಗಾಗಿ ಇಲ್ಲಿಂದಲೇ ಕಣಕ್ಕಿಳಿಯುವೆ ಎನ್ನಬಹುದು. ಆದರೆ ನಿರ್ಧಾರ ನಮ್ಮ ಕೈಯಲ್ಲಿಲ್ಲ ಎಂದು ಹೇಳಿದರು.

ಬಿಜೆಪಿ ಹೈಕಮಾಂಡ್ನಿಂದ ಅಂತಿಮ ನಿರ್ಧಾರ
ಬೊಮ್ಮಾಯಿ ಅವರು ಶಿಗ್ಗಾಂವಿಯಿಂದ ಸ್ಪರ್ಧಿಸುವುದಾಗಿ ಹೇಳಬಹುದು. ಅಂತಿಮವಾಗಿ ನಿರ್ಧಾರ ಮಾಡುವುದು ಬಿಜೆಪಿ ಹೈಕಮಾಂಡ್ ಆಗಿದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ನಿರ್ಧಾರ ಆಗಲಿದೆ. ಆಗ ಚುನಾವಣೆ ಘೋಷಣೆ ಬಳಿಕ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮಾನದಂಡವೂ ಮುಖ್ಯವಾಗಿದೆ. ಹಾಗಾಗಿ ಯಾರಿಗೆ ಅರ್ಹತೆಯಿದೆಯೋ ಅವರಿಗೆ ಟಿಕೆಟ್ ಸಿಗುತ್ತದೆ ಎಂದರು.
ವಸತಿ ಸಚಿವ ಸೋಮಣ್ಣ ಬಿಜೆಪಿಯಲ್ಲೇ ಇರುವುದಾಗಿ ಹೇಳಿದ್ದಾರೆ. ಬಿಜೆಪಿಯ ಯಾವ ನಾಯಕರು ಕಾಂಗ್ರೆಸ್ಗೆ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದರು.

ಮಹಾಸಂಗಮಕ್ಕೆ ಭರ್ಜರಿ ಸಿದ್ಧತೆ
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ಕ್ಕೆ ದಾವಣಗೆರೆ ಆಗಮಿಸಲಿದ್ದು, ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿದೆ. ಜಿಎಂಐಟಿ ಪಕ್ಕದಲ್ಲಿನ ನೂರಾರು ಹೆಕ್ಟೇರ್ ಜಮೀನು ಸಮತಟ್ಟು ಮಾಡುವ ಕೆಲಸ ವೇಗವಾಗಿ ನಡೆಯುತ್ತಿದೆ. ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಬಿಜೆಪಿ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಜೊತೆ ಸಂಸದರು ಚರ್ಚೆ ನಡೆಸಿದರು.
ರಾಜ್ಯದ ನಾಲ್ಕು ಭಾಗಗಳಿಂದಲೂ ವಿಜಯ ಸಂಕಲ್ಪ ಯಾತ್ರೆಯು ಮಾರ್ಚ್24ಕ್ಕೆ ದಾವಣಗೆರೆಗೆ ಆಗಮಿಸಿ ಮಹಾ ಸಂಗಮದ ಆಗಲಿದೆ. ಇದರ ಸಮಾರೋಪ ಸಮಾರಂಭ ಇಲ್ಲಿ ನಡೆಯಲಿದ್ದು, ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ. ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ದಾವಣಗೆರೆಗೆ ಕರೆಯಿಸಿ, ಕಾಂಗ್ರೆಸ್ಗೆ ಠಕ್ಕರ್ ಕೊಡುವ ಆಲೋಚನೆ ಹೊಂದಿರುವ ಬಿಜೆಪಿಯ ನಾಯಕರು ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸತೊಡಗಿದ್ದಾರೆ.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಭಾರೀ ಯಶಸ್ವಿಯಾಗಿದ್ದು, ಇದಕ್ಕೆ ಪ್ರತಿಯಾಗಿ ಹತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲೇಬೇಕೆಂಬ ಹಠ ತೊಟ್ಟಿರುವ ಕಮಲ ಪಡೆ ಇದಕ್ಕಾಗಿ ಈಗಿನಿಂದಲೂ ಕಸರತ್ತು ಆರಂಭಿಸಿದೆ. ಜಿ.ಎಂ.ಐ.ಟಿ. ಕಾಲೇಜ್ ಪಕ್ಕದಲ್ಲಿ ಸುಮಾರು 400 ಹೆಕ್ಟೇರ್ ಜಾಗದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ.
ಆದ್ದರಿಂದ ಪೆಂಡಾಲ್ ಹಾಕುವ ಜಾಗವನ್ನು ರಾಜ್ಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ. ರಾಜ್ಯದ ಮೂಲೆ-ಮೂಲೆಗಳಿಂದ ಬರುವವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರ ವಹಿಸುವಂತೆಯೂ ಸಮಾಲೋಚನೆ ನಡೆಸಲಾಗಿದೆ. ವಾಹನಗಳ ಪಾರ್ಕಿಂಗ್, ಭದ್ರತೆ ಸೇರಿದಂತೆ ಇತರೆ ವಿಷಯಗಳ ಕುರಿತಂತೆಯೂ ಚರ್ಚಿಸಲಾಯಿತು.












Click it and Unblock the Notifications