Channagiri constituency; ಈಗ ದೇಶಾದ್ಯಂತ ಪರಿಚಿತವಾಗಿದೆ ಚನ್ನಗಿರಿ
ಅಡಿಕೆಯಿಂದಾಗಿ ಚನ್ನಗಿರಿ ಕ್ಷೇತ್ರದಲ್ಲಿ ರೈತರ ಆದಾಯವೂ ಡಬಲ್ ಆಗಿದೆ. ಈಗ ಅದು ಜಗತ್ತಿಗೆ ಗೊತ್ತಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯ ರಾಜಕೀಯ ಪರಿಚಯ ಇಲ್ಲಿದೆ.
ಅಡಿಕೆ ನಾಡು ಎಂದೇ ಪ್ರಸಿದ್ಧಿ ಪಡೆದಿದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರ. ಏಷ್ಯಾದ 2ನೇ ಅತ್ಯಂತ ದೊಡ್ಡ ಕೆರೆ ಶಾಂತಿ ಸಾಗರ (ಸೂಳೆಕೆರೆ) ಯನ್ನು ಕ್ಷೇತ್ರ ಒಡಲಲ್ಲಿ ಹೊಂದಿದೆ. ಮೊದಲು ಚನ್ನಗಿರಿ ಶಿವಮೊಗ್ಗ ಜಿಲ್ಲೆಯ ಭಾಗವಾಗಿತ್ತು. ಬಳಿಕ ದಾವಣಗೆರೆಗೆ ಸೇರಿತು. ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ. ಮೀ. ದೂರದಲ್ಲಿರುವ ಚನ್ನಗಿರಿ ಅತ್ತ ಚಿತ್ರದುರ್ಗ, ಇತ್ತ ಶಿವಮೊಗ್ಗ ಜಿಲ್ಲೆಗೆ ಹತ್ತಿರವಿರುವ ಕ್ಷೇತ್ರ.
ಭದ್ರಾ ನದಿಯ ನೀರು ಈ ಕ್ಷೇತ್ರಕ್ಕೆ ಮೂಲಧಾರ. ಕಾಲುವೆ ಮೂಲಕ ಹರಿದುಬರು ನೀರನ್ನು ಬಳಸಿಕೊಂಡು ರೈತರು ಭತ್ತ, ಅಡಿಕೆ, ಜೋಳ, ಕಬ್ಬು ಮುಂತಾದ ಬೆಳೆ ಬೆಳೆಯುತ್ತಾರೆ. ಅಡಿಕೆ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಅಡಿಕೆಯಿಂದಾಗಿ ರೈತರ ಆದಾಯವೂ ಡಬಲ್ ಆಗಿದ್ದು, ಕ್ಷೇತ್ರದ ಆರ್ಥಿಕ ಪ್ರಗತಿಗೆ ಅಡಿಕೆಯ ಕೊಡುಗೆ ದೊಡ್ಡದಿದೆ. ಬಸ್ ಮೂಲಕ ಕ್ಷೇತ್ರಕ್ಕೆ ಸಾರಿಗೆ ಸಂಪರ್ಕ ಚೆನ್ನಾಗಿದೆ. ಸರ್ಕಾರಿ ಬಸ್ಗಳಿಗಿಂತ ಖಾಸಗಿ ಬಸ್ಗಳ ಭರಾಟೆ ಒಂದು ಕೈ ಮೇಲಿದೆ.

ರಾಜಕೀಯವಾಗಿ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರವಿದು. ಜೆ. ಎಚ್. ಪಟೇಲ್ ತವರೂರು ಚನ್ನಗಿರಿ. ಇತ್ತೀಚಿಗೆ ಲೋಕಾಯುಕ್ತರ ದಾಳಿ ಬಳಿಕ ಚನ್ನಗಿರಿ ಕ್ಷೇತ್ರದ ಹೆಸರು, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೆಸರು ದೇಶಾದ್ಯಂತ ಎಲ್ಲರಿಗೂ ಪರಿಚಿತವಾಗಿದೆ. ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪ, ಕಾಂಗ್ರೆಸ್ನ ವಡ್ನಾಳ್ ರಾಜಣ್ಣ ಚನ್ನಗಿರಿ ಕ್ಷೇತ್ರದಲ್ಲಿ ರಾಜಕೀಯ ಎದುರಾಳಿಗಳು. ಮಾಜಿ ಸಿಎಂ ಜೆ. ಎಚ್. ಪಟೇಲ್ ಪುತ್ರರು ರಾಜಕೀಯದಲ್ಲಿದ್ದರೂ ಅಂಥ ಪ್ರಭಾವ ಹೊಂದಿಲ್ಲ. ರಾಜಕೀಯ ಸಂಧ್ಯಾಕಾಲದಲ್ಲಿ ಇರುವ ಮಾಡಾಳ್ ವಿರೂಪಾಕ್ಷಪ್ಪ, ವಡ್ನಾಳ್ ರಾಜಣ್ಣ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಪಡೆಯಬಹುದು, ಪಡೆಯದೆಯೂ ಇರಬಹುದು.
2004ರಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಬಾರಿ ಬಿಜೆಪಿಯಿಂದ ಕಣಕ್ಕಿಳಿದರು, ಸೋಲು ಕಂಡರು. 2008ರಲ್ಲಿ ಗೆಲುವು ಕಂಡರು. ಆದರೆ 2013ರಲ್ಲಿ ಯಡಿಯೂರಪ್ಪ ಕಟ್ಟಿದ್ದ ಕೆಜೆಪಿ ಅಭ್ಯರ್ಥಿಯಾದರು ತೀವ್ರ ಪೈಪೋಟಿ ಕೊಟ್ಟರು ವಡ್ನಾಳ್ ರಾಜಣ್ಣ ಗೆದ್ದರು. ಆದರೆ 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಮಾಡಾಳ್ ವಿರೂಪಾಕ್ಷಪ್ಪ ಮತ್ತೆ ಕ್ಷೇತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 75 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ನಿಯಮ ಜಾರಿಗೆ ಬಂದರೆ ಮಾಡಾಳ್ ವಿರೂಪಾಕ್ಷಪ್ಪಗೆ ಈ ಬಾರಿ ಟಿಕೆಟ್ ಕೈ ತಪ್ಪಲಿದೆ. ಜೊತೆಗೆ ಈಗ ಬೆಳಕಿಗೆ ಬಂದಿರುವ ಲೋಕಾಯಕ್ತ ಪ್ರಕರಣ ಸಹ ಹಿನ್ನಡೆ ಉಂಟು ಮಾಡಬಹುದಾಗಿದೆ.

ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ಕೈ ತಪ್ಪಿದರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹಲವರಿದ್ದಾರೆ. ಸ್ವತಃ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಮಾಡಾಳ್ಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತಿದೆ. ಯಡಿಯೂರಪ್ಪ ಆಪ್ತರಾದ ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ಟಿ. ವಿ. ಮತ್ತು ಶಿವಮೊಗ್ಗದ ಖ್ಯಾತ ವೈದ್ಯ ಚನ್ನಗಿರಿ ಮೂಲದ ಧನಂಜಯ್ ಸರ್ಜಿ ಅವರ ಹೆಸರು ಕೇಳಿ ಬರುತ್ತಿದೆ.
ಬಿಜೆಪಿಯಿಂದ ಬಂದವರು; ಕಾಂಗ್ರೆಸ್ನ ವಡ್ನಾಳ್ ರಾಜಣ್ಣ ಬಿಜೆಪಿಯಿಂದ ಬಂದವರು. 1994ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು ಜೆ. ಎಚ್. ಪಟೇಲ್ ವಿರುದ್ಧ ಸೋತರು. ಆದರೆ 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಜೆ. ಎಚ್. ಪಟೇಲರನ್ನು ಸೋಲಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಕಾಂಗ್ರೆಸ್ ಸೇರಿ 2004ರಲ್ಲಿ ಪಕ್ಷದ ಅಭ್ಯರ್ಥಿಯಾದರು. ಜೆ. ಎಚ್. ಪಟೇಲ್ ಪುತ್ರ, ಜೆಡಿಎಸ್ನ ಮಹಿಮಾ ಪಟೇಲ್ ವಿರುದ್ಧ ಸೋತರು. 2008ರಲ್ಲಿ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಸೋತರು. ಆದರೆ 2013ರಲ್ಲಿ 2ನೇ ಬಾರಿಗೆ ಶಾಸಕರಾದರು. 2018ರಲ್ಲಿ ಮತ್ತೆ ಸೋಲು ಕಂಡರು. ಈ ಬಾರಿ ಕಣಕ್ಕಿಳಿಯುವುದು ಅನುಮಾನ. ವಡ್ನಾಳ್ ಅಶೋಕ, ವಡ್ನಾಳ್ ಜಗದೀಶ್, ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದಿರುವ ಹೊದಿಗೆರೆ ರಮೇಶ್, ತೇಜಸ್ವಿ ವಿ. ಪಟೇಲ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು.
ಚನ್ನಗಿರಿ ಕ್ಷೇತ್ರಕ್ಕೆ ಜೆಡಿಎಸ್ ಎಂ. ಯೋಗೇಶ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಕ್ಷೇತ್ರದಲ್ಲಿ ಸಾಕಷ್ಟು ಮತಗಳನ್ನು ಪಕ್ಷ ಹೊಂದಿದೆ. ಕರ್ನಾಟಕ ರಾಷ್ಟ್ರ ಸಮಿತಿಯಿಂದ ದೋಣಿಹಳ್ಳಿ ಮಂಜುನಾಥ ಗೌಡ, ಎಎಪಿಯಿಂದ ರವಿಕುಮಾರ್ ಪಾಟೀಲ್, ಪ್ರಜಾಕೀಯದಿಂದ ಚಂದ್ರಶೇಖರ್ ಸಹ ಕಣಕ್ಕಿಳಿಯಬಹುದು.
ಚುನಾವಣಾ ಆಯೋಗದ ಮಾಹಿತಿಯಂತೆ ಕ್ಷೇತ್ರದ ಒಟ್ಟು ಮತದಾರರು 1,95,797. ಪುರುಷರು 98,604. ಮಹಿಳೆಯರು 97,186. ಇತರೆ 7.












Click it and Unblock the Notifications