'ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡ ಚಿತ್ರ ಮಾತ್ರ ಪ್ರದರ್ಶಿಸಿ'
ದಾವಣಗೆರೆ, ಅಕ್ಟೋಬರ್ 31: ನಗರದ ಚಿತ್ರಮಂದಿರಗಳಲ್ಲಿ ರ್ನವೆಂಬರ್ 1 ರಿಂದ 30 ರವರೆಗೆ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವಂತೆ ಕೋರಿ ಕನ್ನಡಪರ ಸಂಘಟನೆಗಳ ಒಕ್ಕೂಟ ಆಗ್ರಹಪೂರ್ವ ಮನವಿ ಮಾಡಿದೆ.
ಕರ್ನಾಟಕ ರಕ್ಷಣಾ ವೇದಿಕೆಗಳ ಅಧ್ಯಕ್ಷರುಗಳಾದ ಕೆ.ಜಿ. ಯಲ್ಲಪ್ಪ, ಎಂ.ಎಸ್. ರಾಮೇಗೌಡ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಂಚಾಲಕ ಕೆ.ಜಿ. ಶಿವಕುಮಾರ್, ಕನ್ನಡ ಚಳುವಳಿ ನಾಯಕ ನಾಗೇಂದ್ರ ಬಂಡೀಕರ್ ಮತ್ತಿತರರು ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿ ಗಳ ಸಮ್ಮುಖದಲ್ಲಿ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಕನ್ನಡ ಚಿತ್ರಗಳನ್ನೇ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸ ಬೇಕೆಂದು ಒತ್ತಾಯಿಸಿದಾಗ, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಚಿತ್ರಮಂದಿರಗಳ ಮಾಲೀಕರಿಗೆ ಜಿಲ್ಲಾಧಿಕಾರಿಗಳು ಇದುವರೆಗೂ ಸೂಚನೆ ನೀಡಿಲ್ಲವೆಂದು ಹೇಳಲಾಗುತ್ತಿದೆ. ಈ ಬಗ್ಗೆ ತಕ್ಷಣ ಜಿಲ್ಲಾಧಿಕಾರಿಗಳು ಚಿತ್ರಮಂದಿರಗಳ ಮಾಲೀಕರಿಗೆ ಸೂಚನೆ ನೀಡಿ, ನವೆಂಬರ್ ತಿಂಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕೆಂದು ಆದೇಶಿಸ ಬೇಕೆಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು.

ಚಿತ್ರಮಂದಿರಗಳ ಮಾಲೀಕರು ಕನ್ನಡ ಚಿತ್ರಗಳನ್ನ ಬಿಟ್ಟು ಬೇರೆ ಭಾಷೆಗಳ ಚಿತ್ರಗಳನ್ನು ಪ್ರದರ್ಶಿಸಿದರೆ, ಈ ಚಿತ್ರಮಂದಿರಗಳ
ಮುಂದೆ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಒಕ್ಕೂಟದ ಪದಾಧಿಕಾರಿಗಳು
ಎಚ್ಚರಿಸಿದರು.
ನಗರದ ಚಿತ್ರಮಂದಿರದಲ್ಲಿ ಹಿಂದಿ ಹಾಗೂ ವಸಂತ ಮತ್ತು ಅರುಣ ಚಿತ್ರಮಂದಿರಗಳಲ್ಲಿ ತೆಲುಗು ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ನವೆಂಬರ್ 1 ರಿಂದ ಈ ಚಿತ್ರಮಂದಿರಗಳ ಮಾಲೀಕರು ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕೆಂದು ಆಗ್ರಹ ಪಡಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ನವರು ನವೆಂಬರ್ 1 ರಂದು ಕರಾಳ ದಿನಾಚರಣೆಯನ್ನು ಆಚರಿಸಿದರೆ, ರಾಜ್ಯದಾದ್ಯಂತ ಕನ್ನಡ ಸಂಘಸಂಸ್ಥೆಗಳು ಎಂಇಎಸ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.












Click it and Unblock the Notifications