ದಾವಣಗೆರೆ: ವಾಲ್ಮೀಕಿ ಶ್ರೀಗಳು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿ ಮಾಡಲಿಲ್ಲ ಯಾಕೆ?
ದಾವಣಗೆರೆ, ಜನವರಿ, 06: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಶುಕ್ರವಾರ (ಜನವರಿ 06) ಮಠಗಳ ಭೇಟಿ ಮಾಡಿದರು. ಹರಿಹರ ತಾಲೂಕಿನ ಶಕ್ತಿ ಕೇಂದ್ರೀತ ಪೀಠಗಳಾದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಕನಕ ಗುರು ಪೀಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು. ಆದರೆ ರಾಜನಹಳ್ಳಿಯ ವಾಲ್ಮೀಕಿ ಶ್ರೀಗಳು ಮಾತ್ರ ಜೆ. ಪಿ. ನಡ್ಡಾ ಅವರು ಬಂದರೂ ಮಠದಲ್ಲಿ ಇರಲಿಲ್ಲ.
ಬೆಳಗ್ಗೆ 9:20ಕ್ಕೆ ವಾಲ್ಮೀಕಿ ಪೀಠಕ್ಕೆ ಬರುವಂತೆ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ಬಿಜೆಪಿ ಮುಖಂಡರಿಗೆ ತಿಳಿಸಿದ್ದರು. ಬೇರೆ ಕಾರ್ಯಕ್ರಮ ಪೂರ್ವನಿಗದಿಯಾಗಿರುವ ಕಾರಣ ತೆರಳಬೇಕು. ಆದಷ್ಟು ಬೇಗ ಬಂದರೆ ಮಠದಲ್ಲಿ ಇರುವುದಾಗಿ ಹೇಳಿದ್ದರು. ಆದರೆ ನಡ್ಡಾ ಅವರು ಮೊದಲು ಹನಗವಾಡಿಯ ಹರಿಹರ ಪಂಚಮಸಾಲಿ ಪೀಠಕ್ಕೆ ತೆರಳಿದರು. ಬಳಿಕ ಅಲ್ಲಿಂದ ಬೆಳ್ಳೂಡಿಯ ಕಾಗಿನೆಲೆ ಪೀಠಕ್ಕೆ ತೆರಳಿ ನಿರಂಜನಾನಂದ ಪುರಿ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ಕಾದು ಕುಳಿತಿದ್ದ ಶ್ರೀಗಳು ಅಲ್ಲಿಂದ ತೆರಳಿದರು. ಅಲ್ಲಿಗೆ ಹೋದ ನಡ್ಡಾ ಹಾಗೂ ಬಿಜೆಪಿ ಮುಖಂಡರು ಮಠದಲ್ಲಿದ್ದ ದೇವರಿಗೆ ಪೂಜೆ ಸಲ್ಲಿಸಿ ವಾಪಸ್ ಆದರು.
ರಾಜ್ಯದ ಜನರು ಭ್ರಷ್ಟ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸುವ ಸಂಕಲ್ಪ ಮಾಡಿದ್ದಾರೆ: ಸಲೀಂ ಅಹ್ಮದ್
ವಿಭೂತಿ ಹಚ್ಚಿದ ವಚನಾನಂದ ಶ್ರೀಗಳು
ಪಂಚಮಸಾಲಿ ಪೀಠಕ್ಕೆ ತೆರಳಿದ ನಡ್ಡಾ, ಅರುಣ್ ಸಿಂಗ್, ನಳಿನ್ ಕುಮಾರ್ ಕಟೀಲ್ ಅವರಿಗೆ ವಚನಾನಂದ ಶ್ರೀಗಳು ಹಣೆಗೆ ವಿಭೂತಿ ಇಟ್ಟರು. ಬಳಿಕ ಶ್ರೀಗಳ ಜೊತೆ ನಡ್ಡಾ ಸೇರಿದಂತೆ ಬಿಜೆಪಿ ಮುಖಂಡರು ಮಾತುಕತೆ ನಡೆಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಸಮುದಾಯದವರಿಗೆ ತಿಳಿಸುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ರಾಜಕಾರಣದ ಬಗ್ಗೆ ಮಾತುಕತೆ
ಅದೇ ರೀತಿಯಲ್ಲಿ ಕಾಗಿನೆಲೆ ಗುರುಪೀಠಕ್ಕೂ ತೆರಳಿದ ನಡ್ಡಾ ಅವರು ಶ್ರೀಗಳ ಜೊತೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಪ್ರಸ್ತುತ ರಾಜಕಾರಣ ಸೇರಿದಂತೆ ಕೆಲವು ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ಆಗ ಶ್ರೀಗಳು ಕುರುಬ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಮನವಿ ಮಾಡಿದರು ಎನ್ನಲಾಗಿದೆ.
3 ಪೀಠಗಳಿಗೂ ಭೇಟಿ ನೀಡಿದ BJP ರಾಷ್ಟ್ರಾಧ್ಯಕ್ಷ
2023ರ ವಿಧಾನಸಭೆ ಚುನಾವಣೆಗೆ ದಾವಣಗೆರೆಯಿಂದ ರಣಕಹಳೆ ಮೊಳಗಿಸಿರುವ ಜೆ.ಪಿ. ನಡ್ಡಾ ಪ್ರಮುಖ ಮೂರು ಪೀಠಗಳಿಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡದೇ 2ಡಿ ಮೀಸಲಾತಿ ಕೊಟ್ಟಿರುವುದು ಸಮುದಾಯದವರನ್ನು ಕೆರಳಿಸಿದೆ. ಹಾಗಾಗಿ, ಮನವೊಲಿಸಲು ಮಠಕ್ಕೆ ಭೇಟಿ ನೀಡಿರುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಗೆ ಮುಳುವಾಗುತ್ತಾ ಸಿದ್ದರಾಮೋತ್ಸವ?
ಕುರುಬ ಸಮುದಾಯವು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆದ ಬಳಿಕ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗುತ್ತಾರೆ ಎಂಬ ವಿಶ್ವಾಸದಲ್ಲಿದೆ. ಅಲ್ಲದೆ ಇಲ್ಲಿ ನಡೆದ ಸಮಾವೇಶ ಭಾರಿ ಯಶಸ್ವಿ ಆಗಿರುವ ಹಿನ್ನೆಲೆಯಲ್ಲಿ ಆ ಸಮಾಜದ ಮತಗಳನ್ನು ಬಿಜೆಪಿಯತ್ತ ಸೆಳೆಯುವ ಭಾಗವಾಗಿಯೇ ಹೋಗಿರಬಹುದು ಎಂದೂ ಹೇಳಲಾಗುತ್ತಿದೆ. ಇನ್ನು ವಾಲ್ಮೀಕಿ ಶ್ರೀಗಳು ಮಠದಲ್ಲಿ ಇಲ್ಲದಿರುವುದು ಜೆ.ಪಿ. ನಡ್ಡಾ, ಅರುಣ್ ಸಿಂಗ್ ಹಾಗೂ ನಳಿನ್ ಕುಮಾರ್ ಕಟೀಲ್ ಅವರಿಗೆ ಇರಿಸು ಮುರಿಸು ತಂದಿದ್ದಂತೂ ಸತ್ಯವಾಗಿದೆ.