ನಾವು ನಮ್ಮ ಹಕ್ಕು ಕೇಳುತ್ತಿದ್ದೇವಷ್ಟೆ; ಜಯಮೃತ್ಯುಂಜಯ ಸ್ವಾಮೀಜಿ ತಿರುಗೇಟು
ದಾವಣಗೆರೆ, ಆಗಸ್ಟ್ 1: ಪ್ರತ್ಯೇಕ ಲಿಂಗಾಯತ ಧರ್ಮದ ಚರ್ಚೆಗೆ ಪೇಜಾವರ ಶ್ರೀಗಳ ಪಂಥಾಹ್ವಾನಕ್ಕೆ ದಾವಣಗೆರೆಯಲ್ಲಿ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
"ಪೇಜಾವರ ಶ್ರೀಗಳ ಪಂಥಾಹ್ವಾನ ಸರಿಯಲ್ಲ. ಅವರು ಹಿರಿಯರು, ಜ್ಞಾನಿಗಳು. ಲಿಂಗಾಯತ ಧರ್ಮ ಎಲ್ಲರನ್ನು ಒಂದೇ ಎನ್ನುವುದನ್ನು ಪ್ರತಿಪಾದಿಸುತ್ತದೆ. ಆದರೆ ವೈಷ್ಣವರಲ್ಲಿ ಸಹಪಂತಿ ಇಲ್ಲ. ಸಂವಾದ, ಚರ್ಚೆಗೆ ನಾವೂ ಸಿದ್ಧರಿದ್ದೇವೆ. ಸಾಣೀಹಳ್ಳಿ ಶ್ರೀಗಳು ಪಂಥಾಹ್ವಾನದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ಧ. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಯಾರೂ ತಪ್ಪು ತಿಳಿಯುವುದು ಬೇಡ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವಷ್ಟೆ" ಎಂದರು.
"ಸ್ವತಂತ್ರ ಭಾರತದಲ್ಲಿ ಜೈನ, ಬೌದ್ಧ, ಸಿಖ್, ಪಾರ್ಸಿಗಳು ಕೂಡ ತಮ್ಮ ಹಕ್ಕನ್ನು ಪಡೆಯಲು ಹೋರಾಟ ನಡೆಸಿದರು. ಅದೇ ರೀತಿ ನಾವೂ ಸಂವಿಧಾನದ ಹಕ್ಕು ಪಡೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದ್ದೆವು. ಮುಂದಿನ ಹೋರಾಟದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗಿದೆ" ಎಂದು ಹೇಳಿದರು.

ಲಿಂಗಾಯತ ಹಾಗೂ ವೀರಶೈವ ಎರಡೂ ಒಂದೇ ಎಂದು ಪ್ರತಿಪಾದನೆ ಮಾಡುತ್ತಿರುವ ಶಾಮನೂರು ಶಿವಶಂಕರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, "ಶಾಮನೂರು ಶಿವಶಂಕರಪ್ಪನವರು ಕೂಡ ಮೂಲತಃ ಲಿಂಗಾಯತರು. ಅವರು ವೀರಶೈವ ಮಹಾಸಭದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರಿಂದ ಈ ರೀತಿ ಹೇಳುತ್ತಿದ್ದಾರಷ್ಟೇ. ನಾವು ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸ್ಸು ಕಳಿಸುತ್ತೇವೆ, ನಮ್ಮ ಹೋರಾಟ ನಿರಂತರವಾಗಿರುತ್ತದೆ" ಎಂದರು.












Click it and Unblock the Notifications