ನಾನು ಟಿಕೆಟ್ ಆಕಾಂಕ್ಷಿ, ಬಿಜೆಪಿಯಲ್ಲಿದ್ದೇನೆಂದು ಎದೆಬಗೆದು ತೋರಿಸಬೇಕಾ?-ರೇಣುಕಾಚಾರ್ಯ
ದಾವಣಗೆರೆ, ಸೆಪ್ಟೆಂಬರ್ 28: ನಾನು ಈಗಲೂ ಬಿಜೆಪಿ ಕಟ್ಟಾಳು. ನಾನಿನ್ನೂ ಬಿಜೆಪಿಯಲ್ಲಿದ್ದೇನೆ ಎಂಬುದಕ್ಕೆ ಎದೆಬಗೆದು ತೋರಿಸಬೇಕಾ? ನನಗೆ ಬೆದರಿಕೆ ಕರೆ ಬಂದಾಗ ಯಾರೂ ಬೆಂಬಲ ನೀಡಲಿಲ್ಲ. ನನ್ನ ಸ್ವಂತ ಶಕ್ತಿ ಹಾಗೂ ಕ್ಷೇತ್ರದ ಜನರಿಂದ ಜಯಿಸಿದ್ದೇನೆ. ಹಿಂದುತ್ವಕ್ಕಾಗಿ ಹೋರಾಡಿದ್ದೇನೆ. ಆರೋಪ - ಪ್ರತ್ಯಾರೋಪಕ್ಕೆ ಉತ್ತರ ಕೊಡಲ್ಲ. ಕಾಲ ಬಂದಾಗ ಅದೇ ಉತ್ತರ ಕೊಡುತ್ತದೆ. ಕಾಲ ನಿರ್ಣಯ ಮಾಡುತ್ತದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇಶಕ್ಕೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು, ಪ್ರಧಾನಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳುವವನು. ರಾಜ್ಯಕ್ಕೆ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪರು ಅಷ್ಟೇ ಮುಖ್ಯ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ನಾನು ಸಿದ್ದೇಶ್ವರ ವಿರುದ್ಧ ಮಾತನಾಡಿಲ್ಲ. ನಾನೂ ಆಕಾಂಕ್ಷಿಯಿದ್ದೇನೆ ಎಂದಷ್ಟೇ ಹೇಳುತ್ತಿದ್ದೇನೆ ಎಂದರು.

ಹೊನ್ನಾಳಿ - ನ್ಯಾಮತಿ ಮಾತ್ರವಲ್ಲ, ಜಿಲ್ಲೆಯ ಜನರ ಬಯಕೆ ಇದು. ನಾನೇನೂ ನಾನೇ ಅಭ್ಯರ್ಥಿ ಎಂದು ಟಾಂಟಾಂ ಹೊಡೆಯುತ್ತಿಲ್ಲ. ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗಷ್ಟೇ ಉತ್ತರಿಸುತ್ತಿದ್ದೇನೆ. ಕಾಲಾಯ ತಸ್ಮೈ ನಮಃ. ಟಿಕೆಟ್ ಸಿಗದಿದ್ದರೆ ಮುಂದೆ ಯಾವ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂಬುದನ್ನು ಈಗಲೇ ಹೇಳಲು ಆಗದು. ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ ಎಂದು ಹೇಳಿದರು.
ನಾನೆಲ್ಲಿ ಒಂದು ಕಾಲು ಕಾಂಗ್ರೆಸ್ ಗೆ ಕಾಲಿಟ್ಟಿದ್ದೇನೆ. 2010-2011ರಲ್ಲಿ ಶಾಮನೂರು ಶಿವಶಂಕರಪ್ಪರ ಜೊತೆ ಹೆಲಿಕಾಪ್ಟರ್ನಲ್ಲಿ ಬಂದಿದ್ದೇನೆ. ಆಗ ನಮ್ಮೊಟ್ಟಿಗೆ ಬನ್ನಿ ಎಂದರು. ನಾನು ಯಡಿಯೂರಪ್ಪ ಅವರನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಹೇಳಿದ್ದೆ.
ಭದ್ರಾ ನಾಲೆ ನೀರು ಹರಿಸಬೇಕು. ಅಡಿಕೆಗೆ ಕೊಳೆ ರೋಗ ಬಂದಿದೆ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ್ದೇನೆ. ತಾಲೂಕಿನ ಹಾಗೂ ಜಿಲ್ಲೆಯ ಜನರ ಪರ ಆಡಳಿತದಲ್ಲಿರುವವರ ಭೇಟಿ ಮಾಡಿ ಮನವಿ ಮಾಡಬಾರದಾ ಎಂದು ಪ್ರಶ್ನಿಸಿದರು.

ನಾನು ಹೋದಾಗ ಪ್ರೀತಿಯಿಂದ ಮಾತನಾಡಿಸಿದ್ದಾರೆ ಅಷ್ಟೇ . ಟೀಕೆಗಳಿಗೆ ಉತ್ತರ ಕೊಡಲ್ಲ. ಭದ್ರಾ ನಾಲೆಯಲ್ಲಿ ನೀರು ಹರಿಸಬೇಕು. ಅಡಿಕೆ ಬೆಳೆ ನಾಶವಾಗಿದೆ. ಕೊಳೆ ರೋಗ ಬಂದಿದೆ. ಪ್ರೀತಿಯಿಂದ ಮಾತನಾಡಿಸಿದ್ದಾರೆ, ಮಾತನಾಡಿದ್ದೇನೆ. ನಾನು ಯಾರ ಬಗ್ಗೆ ಮಾತನಾಡಲ್ಲ. ಯಾರ ಹಿಡಿತಲ್ಲಿಲ್ಲ. ಹೊನ್ನಾಳಿ - ನ್ಯಾಮತಿ ತಾಲೂಕಿನ ಬಿಜೆಪಿ ಮುಖಂಡರು, ಜನರ ಹಿಡಿತದಲ್ಲಿದ್ದೇನೆ. ಯಡಿಯೂರಪ್ಪರು ನನ್ನನ್ನು ಬೆಳೆಸಿದವರು. ನನ್ನ ಗೌರವ, ಶ್ರದ್ಧೆ ಪಕ್ಷ ಮತ್ತು ಯಡಿಯೂರಪ್ಪ ಅವರಿಗೆ ಇರುತ್ತದೆ. ಬೇರೆ ವಿಚಾರಗಳ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.
ನನಗೆ ಯಾರ್ಯಾರಿಗೆ ಯಾವ ಸಂದರ್ಭದಲ್ಲಿ ಉತ್ತರ ಕೊಡಬೇಕೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಾಟ್ ರೀಚಬಲ್ ಯಾರು ಎಂಬುದು ನನಗೂ ಗೊತ್ತಿದೆ. ನಾನು ಸಣ್ಣಮಗು ಅಲ್ಲ, ಲಾಲಿಪಪ್ ತಿನ್ನುತ್ತಿಲ್ಲ. ನಾನು ಸಂಘಟನೆಯಿಂದ ಬಂದವನು. ಯಡಿಯೂರಪ್ಪರ ಜೊತೆ ಪಾದಯಾತ್ರೆ ಮಾಡಿದ್ದೇನೆ. ಹೊನ್ನಾಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದವನು. ಯಾರಿಂದಲೂ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಸಾಮರ್ಥ್ಯ, ಶಕ್ತಿ ಮುಖಂಡರು, ಕಾರ್ಯಕರ್ತರಿಗೆ ಗೊತ್ತಿದೆ. ಬಕೆಟ್ ಹಿಡಿಯುವ ರಾಜಕಾರಣ ಮಾಡಲ್ಲ ಎಂದರು.
ಕಾವೇರಿ ವಿವಾದದ ಬಗ್ಗೆ ಮಾತನಾಡಿದ ಅವರು, ಕಾವೇರಿ ನೀರು ನಮ್ಮದು. ನಮ್ಮ ಹಕ್ಕು. ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹೋರಾಟ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಟ್ಟು ಸಮಸ್ಯೆ ಬಗೆಹರಿಸಬೇಕು. ನಮಗೆ ಕುಡಿಯಲು ನೀರಿಲ್ಲ. ನೀರುಕೊಡಬಾರದು ಎಂದು ಹೋರಾಟ ಮಾಡಲಾಗುತ್ತಿದೆ. ನಾನು ಕಾವೇರಿ ಪರವಾಗಿ ಇದ್ದೇನೆ ಎಂದು ತಿಳಿಸಿದರು.

ಗಣೇಶನ ದರ್ಶನ ಪಡೆದ ರೇಣುಕಾಚಾರ್ಯ
ದಾವಣಗೆರೆ ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದು ಯುವ ಶಕ್ತಿ ವೇದಿಕೆಯಿಂದ 32 ವರ್ಷದ ಗಣೇಶೋತ್ಸವದ ಅಂಗವಾಗಿ 205 ಕೆ.ಜಿ ಗೋಪಿ ಚಂದನದಿಂದ ಗಣೇಶಮೂರ್ತಿ ಪ್ರತಿಸ್ಟಾಪಿಸಿದ್ದು, ಗಣೇಶನ ಮೂರ್ತಿ ದರ್ಶನವನ್ನು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಪಡೆದರು.
ಗಣೇಶೋತ್ಸವ ಸಮಿತಿಯು ಹಮ್ಮಿಕೊಂಡಿದ್ದ ಗಣಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ವೇಳೆ ಕಮಿಟಿ ವತಿಯಿಂದ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.ಈ ವೇಳೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.












Click it and Unblock the Notifications