ನಾನು ಪರ್ಸಂಟೇಜ್ ಪಡೆದಿದ್ದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ ಸವಾಲು
ದಾವಣಗೆರೆ, ಜುಲೈ 22: "ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ. 12 ವರ್ಷ ಹಣಕಾಸು ಸಚಿವನಾಗಿದ್ದೆ. ನನಗೆ ಪರ್ಸಂಟೇಸ್ ಕೊಟ್ಟಿದ್ದೇನೆ ಎಂದು ಯಾರಾದರೂ ಹೇಳಿ ಸಾಬೀತುಪಡಿಸಿದರೆ ಆ ದಿನವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ದಾವಣಗೆರೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇ.ಡಿ. ವಿಚಾರಣೆ ನೆಪದಲ್ಲಿ ಕೇಂದ್ರ ಸರಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕವು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರಿಗೆ ಮಾನ, ಮರ್ಯಾದೆ ಏನೂ ಇಲ್ಲ. ಭಂಡರು, ರಾಜ್ಯ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಬಿಜೆಪಿ ಸರಕಾರ ಶೇಕಡಾ 40ರಷ್ಟು ಕಮೀಷನ್ ಕೇಳ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಇದುವರೆಗೆ ತನಿಖೆ ನಡೆಸಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ. 40 ಪರ್ಸಂಟೇಸ್ ಹೊಡೆಯುತ್ತಿರುವವರ ಬಳಿ ದುಡ್ಡಿಲ್ವಾ, ಕೊರೊನಾದಲ್ಲಿ ಲೂಟಿ ಹೊಡೆದರು ಪಿಎಸ್ಐ ನೇಮಕಾತಿಯಲ್ಲಿ 300 ಜನರಿಂದ ಹಣ ಪಡೆದಿದ್ದಾರೆ. ಒಬ್ಬೊಬ್ಬ ಅಭ್ಯರ್ಥಿ ಬಳಿ 80 ಲಕ್ಷ ಪಡೆದಿದ್ದಾರೆ. ಅಮೃತ್ ಪೌಲ್ ಒಬ್ಬರೇ ಹಣ ಪಡೆದಿಲ್ಲ. ಸರಕಾರದ ಸಚಿವರೆಲ್ಲರೂ ಹಣ ತಿಂದವರೇ. ಈ ಹಿನ್ನೆಲೆಯಲ್ಲಿ ಸರಿಯಾಗಿ ವಿಚಾರಣೆ ಮಾಡುತ್ತಿಲ್ಲ. ಎಲ್ಲಿ ಮಂತ್ರಿಗಳ ಹೆಸರು ಹೊರಬರುತ್ತದೆಯೋ ಎಂಬ ಕಾರಣಕ್ಕೆ ಮಂಪರು ಪರೀಕ್ಷೆ ಮಾಡುತ್ತಿಲ್ಲ. ಸತ್ಯ ಹೊರತರಲು ಬಿಜೆಪಿ ಮುಂದಾಗುತ್ತಿಲ್ಲ. ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಹೊಟೇಲ್ ನ ತಿಂಡಿ ತಿನಿಸುಗಳ ದರ ನಿಗದಿಯಂತೆ ಅಧಿಕಾರಿಗಳ ವರ್ಗಾವಣೆಗೆ ಬೆಲೆ ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರಕರಣ ಮುಚ್ಚಿಹಾಕುವ ಯತ್ನ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪರಿಗೆ ಕ್ಲೀನ್ ಚಿಟ್ ಕೊಡಲಾಗಿದೆ. ಬಿ ರಿಪೋರ್ಟ್ ಹಾಕಿ ಮುಚ್ಚಿ ಹಾಕಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಆರಗ ಜ್ಞಾನೇಂದ್ರ ಅವರು ಪ್ರಕರಣ ಬೆಳಕಿಗೆ ಬಂದಾಗಲೇ ಈಶ್ವರಪ್ಪ ಆರೋಪ ಮುಕ್ತರಾಗಿ ಬರುತ್ತಾರೆ ಎಂದು ಮೊದಲೇ ಹೇಳಿದ್ದರು. ಸತ್ಯ ಹೊರಬರಬೇಕಾದರೆ ಹಾಗೂ ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕಾದರೆ ಮುಖ್ಯ ನ್ಯಾಯಮೂರ್ತಿ ಅವರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಯಾಗಬೇಕೆಂದು ಈಗಲೂ ಒತ್ತಾಯ ಮಾಡುತ್ತಿದ್ದೇನೆ. ಬಿ ರಿಪೋರ್ಟ್ ತಿರಸ್ಕರಿಸಿ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ತಪ್ಪು ಮುಚ್ಚಿಕೊಳ್ಳಲು ಧರ್ಮಾಧಾರಿತ ರಾಜಕಾರಣ
ಕೇಂದ್ರ ಹಾಗೂ ರಾಜ್ಯ ಸರಕಾರರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಇ. ಡಿ. ವಿಚಾರಣೆ, ಹಿಜಾಬ್, ಜಟ್ಕಾ, ಹಲಾಲ್ ಕಟ್, ಜಾತ್ರೆ, ಸಂತೆಯಲ್ಲಿ ಮುಸಲ್ಮಾನರಿಗೆ ಜಾತ್ರೆಗೆ ವ್ಯಾಪಾರಕ್ಕೆ ಅವಕಾಶ ಕೊಡಬೇಡಿ ಎನ್ನುತ್ತಾರೆ. ಆರ್ ಎಸ್ ಎಸ್ ಹಾಗೂ ಬಿಜೆಪಿಯದ್ದು ದ್ವಿಮುಖ ಪಾತ್ರ. ಸಂವಿಧಾನದ ಬಗ್ಗೆ ಗೌರವವಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿ ತಪ್ಪು ಮುಚ್ಚಿಕೊಳ್ಳಲು ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಮಕ್ಕಳ ಪಠ್ಯಪುಸ್ತಕದಲ್ಲಿ ಧರ್ಮದ ವಿಷಬೀಜ ಬಿತ್ತುತ್ತಿದ್ದಾರೆ. ಎಲ್ಲರ ಚರಿತ್ರೆ ತಿರುಚುವ ಕೆಲಸ ಮಾಡಿದ್ದಾರೆ. ಭಾವನಾತ್ಮಕ ವಿಚಾರಗಳಿಂದ ಜಾತಿ- ಜಾತಿ ಹಾಗೂ ಧರ್ಮ - ಧರ್ಮದ ನಡುವೆ ಸಂಘರ್ಷ ಹುಟ್ಟು ಹಾಕುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ರೈತರು ಆತಂಕದಲ್ಲಿ ಬದುಕಬೇಕಿದೆ. ಈ ಸರಕಾರ ಯಾರ ಸಾಲ ಮನ್ನಾ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿಯಿಂದ ದ್ವೇಷದ ರಾಜಕಾರಣಕ್ಕೆ ತಕ್ಕ ಪಾಠ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಇ. ಡಿ. ವಿಚಾರಣೆ ನಡೆಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ದ್ವೇಷ ಹಾಗೂ ರಾಜಕೀಯ ಸೇಡಿನ ಕ್ರಮಕ್ಕೆ ಜನರು ತಕ್ಕ ಪಾಠ ಕಲಿಸುವ ದಿನಗಳು ದೂರ ಇಲ್ಲ. ಅಧಿಕಾರ ಶಾಶ್ವತ ಅಲ್ಲ. ರಾಜಕೀಯ ದುರುದ್ದೇಶ, ದ್ವೇಷದ ರಾಜಕಾರಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಇಡಿ, ಆದಾಯ ತೆರಿಗೆ, ಸಿಬಿಐ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರವು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ. ಯಾರೂ ಹೆದರಬೇಡಿ. ಸೋನಿಯಾ, ರಾಹುಲ್ ಪರ ನಾವಿದ್ದೇವೆ ಎಂಬ ಸಂದೇಶ ರವಾನಿಸೋಣ. ಎಷ್ಟೇ ಸಮನ್ಸ್, ವಾರೆಂಟ್ ನೀಡಿದರೂ, ಜೈಲಿಗೆ ಕಳುಹಿಸಿದರೂ ಕಾಂಗ್ರೆಸ್ ಕಾರ್ಯಕರ್ತರು ಸುಮ್ಮನಿರಲ್ಲ. ನಾವೇನೂ ಕೈಗೆ ಬಳೆ ತೊಟ್ಟುಕೊಂಡಿಲ್ಲ. ಬಿಜೆಪಿಯವರೇ ಹೆಚ್ಚಾಗಿ ಜೈಲಿಗೆ ಹೋಗಿ ಬಂದವರೇ. ಅವರ ವಿರುದ್ಧ ಯಾಕೆ ದಾಳಿ ನಡೆಯುತ್ತಿಲ್ಲ. ಬಿಜೆಪಿಯವರು ಏನು ಸತ್ಯಹರಿಶ್ಚಂದ್ರರಾ ಎಂದು ವಾಗ್ದಾಳಿ ನಡೆಸಿದರು.

ಅಂಕಿ-ಅಂಶಗಳ ಬಗ್ಗೆ ಚರ್ಚೆ ಮಾಡಲು ಬಿಜೆಪಿ ಜೊತೆಗೆ ಸಿದ್ಧ
ಸ್ವಾತಂತ್ರ್ಯ ಬಂದ ನಂತರ 2018ರವರೆಗೆ 2.42 ಲಕ್ಷ ಕೋಟಿ ರೂಪಾಯಿ ರಾಜ್ಯದ ಮೇಲೆ ಸಾಲ ಇತ್ತು. ಕುಮಾರಸ್ವಾಮಿ ಮತ್ತು ಬಿಜೆಪಿಯ ಅಧಿಕಾರದ ಅವಧಿಯಲ್ಲಿ 5.40 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಹೀಗಾದರೆ ರಾಜ್ಯ ಉಳಿಯುತ್ತದಾ? ಅಸಲಿಗೆ ಬಡ್ಡಿ ಸೇರಿ 43 ಸಾವಿರ ಕೋಟಿ ಕಟ್ಟಲಾಗುತ್ತಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಮೂರು ಲಕ್ಷ ಕೋಟಿ ಸಾಲ ಮಾಡಲಾಗಿದೆ. ಇನ್ನು ಕೇಂದ್ರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಕೇಂದ್ರದಲ್ಲಿ 53 ಲಕ್ಷದ 11 ಸಾವಿರ ಕೋಟಿ ರೂ. ಇತ್ತು. ಕಳೆದ ಎಂಟು ವರ್ಷಗಳಲ್ಲಿ 102 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಈಗ ಒಟ್ಟು 155 ಲಕ್ಷ ಕೋಟಿ ಸಾಲ ಆಗಿದೆ. ಈ ಅಂಕಿ-ಅಂಶಗಳ ಬಗ್ಗೆ ಚರ್ಚೆ ಮಾಡಲು ಯಾವ ಬಿಜೆಪಿ ನಾಯಕರು ಬಂದರೂ ಸಿದ್ಧ ಎಂದು ಸವಾಲು ಹಾಕಿದರು.












Click it and Unblock the Notifications