ಬಿಎಸ್ವೈ ಆದರ್ಶದಂತೆ ಎಲ್ಲಾ ಜಾತಿ, ವರ್ಗಕ್ಕೆ ಧ್ವನಿಯಾಗಿ ಕೆಲಸ ಮಾಡುವೆ: ಬಿವೈ ವಿಜಯೇಂದ್ರ
ದಾವಣಗೆರೆ, ಸೆಪ್ಟೆಂಬರ್ 26: ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅವಮಾನ. ನಾನು ಸಹ ಮಾಜಿ ಸಿಎಂ ಹಾಗೂ ನನ್ನ ತಂದೆ ಯಡಿಯೂರಪ್ಪರಂತೆ ಆದರ್ಶ ಇಟ್ಟುಕೊಂಡು ರಾಜಕಾರಣ ಮಾಡುತ್ತೇನೆ. ಎಲ್ಲಾ ಜಾತಿ, ವರ್ಗಕ್ಕೆ ನ್ಯಾಯ ಕೊಡುವ ಹಾಗೂ ಧ್ವನಿಯಾಗುವ ಕೆಲಸ ಮಾಡುತ್ತೇನೆ. ತಾಯಂದಿರು ಹಾಗೂ ವಿವಿಧ ಮಠಾಧೀಶರ ಆಶೀರ್ವಾದದಿಂದ 45 ವರ್ಷ ರಾಜಕಾರಣ ಮಾಡಿದರು. ಅವರಂತೆಯೇ ನಾನು ನಡೆಯುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಜಗಳೂರು ಕ್ಷೇತ್ರದ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಚನ್ನಬಸವ ಮಹಾ ಶಿವಯೋಗಿಳರವರ ಸ್ಮರಣತ್ಸೋವ ಹಾಗೂ ಬಸವ ತತ್ವ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪರ ಕುರಿತು ಮಾತನಾಡಿದರು. ಜೊತೆಗೆ ಸಾಧನೆಗಳನ್ನು ಮೆಲುಕು ಹಾಕಿದರು. ಯಡಿಯೂರಪ್ಪರ ಮೇಲೆ ತೋರಿದ ಪ್ರೀತಿ, ವಿಶ್ವಾಸ ನನ್ನ ಮೇಲೆ ಇರಲಿ. ತಾಯಂದಿರ ಆಶೀರ್ವಾದ ಇದ್ರೆ ಏನೂ ಬೇಕಾದರೆ ಸಾಧಿಸಬಹುದು ಎಂದು ಹೇಳಿದರು.
2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತಯಾರಿ- ನ. 1 ರಿಂದ ಪಂಚರತ್ನ ಯಾತ್ರೆ
ದೇಶಕ್ಕೆ ಎರಡು ಕಣ್ಣುಗಳು ಗಡಿ ಕಾಯುವ ಯೋಧ ಹಾಗೂ ರೈತರು. ಒಂದು ಕಡೆ ವೀರ ಯೋಧ ದೇಶ ಉಳಿಸಿದರೆ, ದೇಶದ ಬೆನ್ನೆಲುಬು ರೈತ ಮತ್ತೊಂದು ಕಣ್ಣು. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ನಾಡಿನ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಧೀಮಂತ ನಾಯಕ. ಬಡವರ ಮನೆಯಲ್ಲಿ ಹುಟ್ಟುವ ಹೆಣ್ಣು ಮಗಳು ಶಾಪ ಅಂತಾ ಭಾವಿಸಿದ್ದರು. ಊಟಕ್ಕೂ ಗತಿ ಇಲ್ಲದವರಿಗೆ ಯಡಿಯೂರಪ್ಪ ಅವರು ಹೆಣ್ಣು ಶಾಪ ಅಲ್ಲ, ಭಾಗ್ಯ ಅಂತಾ ಹೇಳಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. 2ರಿಂದ 3 ಕಿಲೋ ಮೀಟರ್ ನಡೆದುಕೊಂಡು ಹೋಗುವ ಹೆಣ್ಣು ಮಕ್ಕಳಿಗೆ ಬೈಸಿಕಲ್ ನೀಡಿದ ಮಹಾನ್ ನಾಯಕ ಎಂದು ಪ್ರಶಂಸಿಸಿದರು.
ಬಸವಣ್ಣರ ತತ್ವವನ್ನು ಪಾಲಿಸಿದ ರಾಜಕಾರಣಿ ಬಿಎಸ್ವೈ
ಮಾಜಿ ಸಿಎಂ ಯಡಿಯೂರಪ್ಪರು ಇಂದು ಮುಖ್ಯಮಂತ್ರಿ ಅಲ್ಲ. ಆದ್ರೂ ಕೂಡ ಮೋದಿ ಅವರಿಗೆ ಹೇಗೆ ಚಪ್ಪಾಳೆ ಸಿಗುತ್ತದೆಯೋ ಅದು ಯಡಿಯೂರಪ್ಪರಿಗೂ ಸಿಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೇಳಿ ಬಂದ ಕರತಾಡನ ಎಲ್ಲರಿಗೂ ಆಶ್ಚರ್ಯ ತಂದಿತು. ನಾನು ಬಿಜೆಪಿ ಉಪಾಧ್ಯಕ್ಷನಾಗಿ ರಾಜ್ಯದ ಯಾವುದೇ ಮೂಲೆಗೆ ಹೋದರೂ ನಮ್ಮ ಯಡಿಯೂರಪ್ಪರ ಮಗ ಬಂದಿದ್ದಾನೆ ಎಂದು ವಿಶೇಷವಾಗಿ ತಾಯಂದಿರು, ಯುವಕರು ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ. ಒಂದಲ್ಲಾ, ಎರಡಲ್ಲಾ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪರು ಅಧಿಕಾರ ನಡೆಸಿದ್ದಾರೆ. ಇದಕ್ಕೆ ಮೂರು ಪ್ರಮುಖ ಕಾರಣ ಒಂದು ಬಿಜೆಪಿಯ ಕಾರ್ಯಕರ್ತರ ಪರಿಶ್ರಮ, ನಾಡಿನ ಸಾಧು ಸಂತರ ಆಶೀರ್ವಾದ, ಬಿಜೆಪಿ ನಾಯಕರ ಶ್ರಮ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಬಸವಣ್ಣನವರ ತತ್ವ ಪಾಲಿಸಿ ಆಡಳಿತ ನಡೆಸಿದ ರಾಜಕಾರಣಿಯೆಂದರೆ ಯಡಿಯೂರಪ್ಪರು ಮಾತ್ರ ಎಂದು ಬಣ್ಣಿಸಿದರು.
'ಪೇಸಿಎಂ ಅಭಿಯಾನದಿಂದ ಸಿಎಂ ಹುದ್ದೆಗೆ ಅವಮಾನ ಆಗಿದೆಯಂತೆ'
ಆಂಬುಲೆನ್ಸ್ ಸೇವೆ ಜಾರಿಗೆ ತಂದದ್ದು ಯಡಿಯೂರಪ್ಪ
ಫೋನ್ ಮಾಡಿದರೆ ಆಂಬುಲೆನ್ಸ್ ಬರುವ ವ್ಯವಸ್ಥೆಯನ್ನು ರಾಜ್ಯದಲ್ಲಿ ಅಧಿಕಾರ ನಡೆಸಿದ ಯಾವ ಸಿಎಂ ಮಾಡಿರಲಿಲ್ಲ. ಆ ಕೆಲಸವನ್ನು ಸಿಎಂ ಆಗಿದ್ದಾಗ ಯಡಿಯೂರಪ್ಪ ಮಾಡಿದರು. ಬಿಜೆಪಿ ಸರಕಾರ ಇಂಥ ಪುಣ್ಯದ ಕೆಲಸ ಮಾಡಿದೆ. ಬಡವರು ಬಡವರಾಗಿದ್ದಾರೆ. ಬಡವರು, ರೈತರ ಹೆಸರನ್ನು ಬಂಡವಾಳ ಮಾಡಿಕೊಂಡು ರಾಜಕಾರಣ ಯಾರು ಮಾಡಿದ್ದಾರೆ ಎಂಬುದನ್ನು ಎಲ್ಲರೂ ಯೋಚಿಸಬೇಕಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಜನತೆ ಬಗ್ಗೆ ಬಿಎಸ್ವೈಗೆ ಅಪಾರ ಕಾಳಜಿ
ಇನ್ನು ಕಲ್ಯಾಣ ಕರ್ನಾಟಕಕ್ಕೆ ಯಡಿಯೂರಪ್ಪ ನೀಡಿರುವ ಕೊಡುಗೆ ಅಪಾರ. ವಿಜಯನಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಿದರು. ಆನಂದ್ ಸಿಂಗ್ ಸೇರಿದಂತೆ ಅನೇಕರ ಒತ್ತಡ ಇತ್ತು. ನುಡಿದಂತೆ ನಡೆದವರು ಯಡಿಯೂರಪ್ಪ. ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದರು. ಅನುದಾನ ಬಿಡುಗಡೆ ಮಾಡಿದರು. ಇದರ ಫಲ ಈಗ ಈ ಭಾಗದ ಜನರಿಗೆ ಸಿಗುತ್ತಿದೆ. ಇದಕ್ಕೆಲ್ಲಾ ಕಾರಣ ಯಡಿಯೂರಪ್ಪರಿಗೆ ನಿಮ್ಮ ಬಗ್ಗೆ ಇರುವ ಕಾಳಜಿ ಎಂದರು.
ಪ್ರಧಾನಿ ಮೋದಿ ದೇಶಕಂಡ ಮಹಾನ್ ನಾಯಕ
ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ. ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಮಹಾನ್ ನಾಯಕ. ನೆರೆ ರಾಷ್ಟ್ರ ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದೆ. ಚೈನಾ ದೇಶದಿಂದ ಸಾವಿರಾರುಕೋಟಿ ಸಾಲ ಪಡೆದಿದೆ. ಪೆಟ್ರೋಲ್, ಡೀಸೆಲ್ ಗೋಸ್ಕರ ಜನರು ಹೊಡೆದಾಟ, ಪರದಾಟ ನಡೆಸುತ್ತಿದ್ದಾರೆ. ಒಂದೊತ್ತು ಊಟಕ್ಕಿಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ಪರಿಸ್ಥಿತಿ ಇದಕ್ಕಿಂತ ಭಿನ್ನ ಇಲ್ಲ. ಪಾಕಿಸ್ತಾನ ಕೆಲವೇ ವರ್ಷಗಳಲ್ಲಿ ಬಡತನಕ್ಕೆ ತುತ್ತಾಗಿ ಊಟಕ್ಕೂ ಗತಿಯಿಲ್ಲದಂತಾಗುತ್ತದೆ. ಚೈನಾ ದೇಶದ ಸಾಲ ತಂದು ಆರ್ಥಿಕಸಂಕಷ್ಟದಿಂದ ಹೊರಬರಲಾಗದೇ ತತ್ತರಿಸಿ ಹೋಗಲಿದೆ ಎಂದು ತಿಳಿಸಿದರು.
ದೇಶದ ಪ್ರಧಾನ ಮಂತ್ರಿ ಆ ಪಕ್ಷ, ಈ ಪಕ್ಷ ಅಂತಲ್ಲ. ಎಲ್ಲಾ ವರ್ಗದವರು ಆಶೀರ್ವಾದ ಮಾಡಿದ್ದರ ಫಲವಾಗಿ ಪಿಎಂ ಆಗಿದ್ದಾರೆ. ಎಲ್ಲಾ ಮಠಮಾನ್ಯಗಳು ಆಶೀರ್ವಾದ ಮಾಡಿವೆ. ನರೇಂದ್ರ ಮೋದಿ ದಿಟ್ಟ ನಾಯಕತ್ವ ಆರ್ಥಿಕ ಸಂಕಷ್ಟದಿಂದ ದೇಶವನ್ನು ಹೊರತಂದಿದೆ. ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಕರೆ ಕೊಟ್ಟರು, ಲಸಿಕೆ ಕಂಡು ಹಿಡಿದು ಜನರಿಗೆ ನೀಡುವ ಮೂಲಕ ಸಂಕಷ್ಟದಿಂದ ಪಾರು ಮಾಡಿದರು ಎಂದರು.