ವಿಡಿಯೋ ವೈರಲ್: ಕೊರೊನಾ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ಸಖತ್ ಡ್ಯಾನ್ಸ್
ದಾವಣಗೆರೆ, ಮೇ 25: ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ಗ್ರಾಮದ ಕೋವಿಡ್ ಕೇರ್ ಸೆಂಟರ್ನಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಸಖತ್ತಾಗಿಯೇ ನೃತ್ಯ ಮಾಡಿದ್ದಾರೆ.
Recommended Video
ಶಿವಮೊಗ್ಗದ ಆರ್ಕೆಸ್ಟ್ರಾ ಕಲಾವಿದರು ಕನ್ನಡದ ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ಕೊರೊನಾ ಪೀಡಿತರನ್ನು ರಂಜಿಸಿದರು. ಡಾ.ರಾಜಕುಮಾರ್ ಅವರ, "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣು ಮೆಟ್ಟಬೇಕು' ಎಂಬ ಹಾಡನ್ನು ಹಾಡುತ್ತಿದ್ದಂತೆ ಶಾಸಕ ಎಂ.ಪಿ ರೇಣುಕಾಚಾರ್ಯ ಸಖತ್ತಾಗಿಯೇ ಸ್ಟೆಪ್ ಹಾಕಿದರು.
ಕೋವಿಡ್ ಸೋಂಕಿತರ ಜೊತೆ ಜಬರ್ದಸ್ತಾಗಿ ಕುಣಿದು ಕುಪ್ಪಳಿಸಿ, ಮನರಂಜಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ ಅವರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸೋಂಕಿತರು ಸಹ ಕುಣಿದರು.

ಕೋವಿಡ್ ಕೇರ್ ಸೆಂಟರ್ನಲ್ಲಿ 102 ಮಂದಿ ಸೋಂಕಿತರಿದ್ದು, ಎಲ್ಲರೂ ರೇಣುಕಾಚಾರ್ಯ ಡ್ಯಾನ್ಸ್ಗೆ ಫಿದಾ ಆದರು. ಕೊಠಡಿಯೊಳಗೆ ಬಂಧಿಯಾಗಿದ್ದ ಕೊರೊನಾ ಸೋಂಕಿತರು ರಸಮಂಜರಿ ಕಾರ್ಯಕ್ರಮ ಎಂಜಾಯ್ ಮಾಡಿದರು. ಕಿತ್ತೂರು ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ನಲ್ಲಿ ಕನ್ನಡ ಹಾಡುಗಳನ್ನು ಆರ್ಕೆಸ್ಟ್ರಾ ಕಲಾವಿದರು ಹಾಡುವ ಮೂಲಕ ರಂಜಿಸಿದರು. ಈ ಮೂಲಕ ಬೇಸರ ಕಳೆಯುವ ಪ್ರಯತ್ನ ಮಾಡಲಾಯಿತು.
ಸೋಂಕಿತರು ಹದಿನೈದು ದಿನಗಳ ಕಾಲ ಕೋವಿಡ್ ಸೆಂಟರ್ನಲ್ಲಿ ಇರುವ ಕಾರಣ ಬೇಸರದಲ್ಲಿಯೇ ಕಾಲ ಕಳೆಯುತ್ತಿದ್ದರು. ರಸಮಂಜರಿ ಕಾರ್ಯಕ್ರಮ ಏರ್ಪಡಿಸುವ ಮೂಲಕ ಕೊರೊನಾದಿಂದ ಬಳಲುತ್ತಿರುವವರಲ್ಲಿ ಧೈರ್ಯ ತುಂಬಲಾಯಿತು.

ಅಣ್ಣಾವ್ರ ಸಿನಿಮಾದ 'ಆಡಿಸಿ ನೋಡು ಬೀಳಿಸಿ ನೋಡು', ಗಂಧದ ಗುಡಿ ಚಿತ್ರದ 'ನಾವಾಡುವ ನುಡಿಯೇ ಕನ್ನಡ ನುಡಿ' ಸೇರಿದಂತೆ ಹತ್ತಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ಆರ್ಕೆಸ್ಟ್ರಾ ಗಾಯಕರು ಹಾಡಿದರು.
ಹೊನ್ನಾಳಿಯ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರು 'ಆಡಿಸಿ ನೋಡು ಬೀಳಿಸಿ ನೋಡು' ಹಾಡು ಹಾಡಿ ಎಲ್ಲರನ್ನೂ ರಂಜಿಸಿದರು. ಶಾಸಕ ರೇಣುಕಾಚಾರ್ಯ ಕೋವಿಡ್ ಸೋಂಕಿತರಿಗೆ ರಂಜನೆ ನೀಡಲು ವಿನೂತನ ಪ್ರಯತ್ನ ಮಾಡಿದ್ದು, ಸೋಂಕಿತರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.












Click it and Unblock the Notifications