₹50,000 ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ
ದಾವಣಗೆರೆ, ಡಿಸೆಂಬರ್ 29: ಶಾಲೆಯೊಂದರ ಸಿ.ಬಿ.ಎಸ್.ಇ. ಮಾನ್ಯತೆ ನವೀಕರಣ ಮಾಡಿಕೊಡಲು 15 ಸಾವಿರ ರೂಪಾಯಿ ಲಂಚ ಪಡೆದುಕೊಳ್ಳುಲು ಮುಂದಾದ ಹರಿಹರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ದಾವಣಗೆರೆಯ ಹರಿಹರದಲ್ಲಿ ನಡೆದಿದೆ.
ಬಿ.ಸಿ. ಸಿದ್ದಪ್ಪ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ.
Breaking; ದಾವಣಗೆರೆ ಜಿಲ್ಲೆಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ
ಹರಿಹರ ಪಟ್ಟಣದ ಕೆ. ಆರ್. ನಗರದ ಶ್ರೀ ದುರುಗೋಜಿ ಗೋಪಾಲರಾವ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನ ಚೇರ್ಮನ್ ಡಿ. ರಘುನಾಥ್ ಎನ್ನುವವರು ತಮ್ಮ ವಿದ್ಯಾದಾಯಿನಿ ಶಾಲೆಯ ಸಿ.ಬಿ.ಎಸ್.ಇ. ಮಾನ್ಯತೆ ನವೀಕರಣಕ್ಕಾಗಿ ಆನ್ಲೈನ್ನಲ್ಲಿ ದಾಖಲೆ ಸಲ್ಲಿಸಿದ್ದರು. ಹರಿಹರ ಬಿ.ಇ.ಓ. ಕಚೇರಿಯಿಂದ ಸರ್ಟಿಫಿಕೇಟ್ ಆಫ್ ರೆಕಗ್ನಿಷನ್ ಅಪೆಂಡಿಕ್ಸ್ 15 ನಮೂನೆಯಲ್ಲಿ ಭರ್ತಿ ಮಾಡಿಕೊಡಲು ಹಾಗೂ ಶಾಲಾ ಶುಲ್ಕ ನಿಗದಿ ಮಾಡಿಕೊಡಲು ಮನವಿ ಸಲ್ಲಿಸಿದ್ದರು. ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಸಿ. ಸಿದ್ದಪ್ಪ 50,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಕಳೆದ ಡಿಸೆಂಬರ್ 13 ನೇ ತಾರೀಖಿನಂದು ಮುಂಗಡವಾಗಿ 10 ಸಾವಿರ ರೂಪಾಯಿ ಪಡೆದಿದ್ದ ಸಿದ್ದಪ್ಪ, ಡಿಸೆಂಬರ್ 28ರಂದು 30,000 ರೂಪಾಯಿ ಕೊಡಲು ಬೇಡಿಕೆ ಇಟ್ಟಿದ್ದರು. ಡಿಸೆಂಬರ್ 29ರಂದು ಮಧ್ಯಾಹ್ನ ಡಿ. ರಘುನಾಥ್ ಅವರಿಂದ 15,000 ರೂಪಾಯಿ ಲಂಚ ಪಡೆಯುವಾಗ ದಾವಣಗೆರೆ ಲೋಕಾಯುಕ್ತ ಘಟಕದ ಪೊಲೀಸ್ ಆಧೀಕ್ಷಕ ಎಂ.ಎಸ್.ಕೌಲಾಪುರರವರ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿ ರೆಡ್ಹ್ಯಾಂಡ್ ಆಗಿ ಹಿಡಿದು, ಹಣವನ್ನು ವಶಕ್ಕೆ ಪಡೆದಿದ್ದಾರೆ.
ಡಿವೈಎಸ್ಪಿ ಕೆ. ಜಿ. ರಾಮಕೃಷ್ಣ, ಪೊಲೀಸ್ ಇನ್ಸ್ಪೆಕ್ಟರ್ ಆಂಜನೇಯ ಎನ್.ಹೆಚ್, ಹೆಚ್. ಎಸ್.ರಾಷ್ಟ್ರಪತಿ, ಸಿಬ್ಬಂದಿ ಚಂದ್ರಶೇಖರ್, ಆಂಜನೇಯ, ಧನರಾಜ್, ಮುಜೀಬ್ ಖಾನ್, ಬಸವರಾಜ್, ಮೋಹನ್ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.