2 ದಶಕಗಳ ಬಳಿಕ ಬ್ರಿಟಿಷರು ಮಾಡಿದ ಮಾರ್ಗದಲ್ಲಿ ರೈಲು ಸಂಚಾರ
ದಾವಣಗೆರೆ, ಅಕ್ಟೋಬರ್ 16 : ಎರಡು ದಶಕಗಳ ಬಳಿಕ ಹರಿಹರ- ಹೊಸಪೇಟೆ-ಕೊಟ್ಟೂರು ರೈಲು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ. ಬ್ರಿಟಿಷರು ರೈಲು ಸಂಚಾರ ಆರಂಭಿಸಿದ್ದ 1994ರಿಂದ ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತವಾಗಿತ್ತು.
ಅಕ್ಟೋಬರ್ 17ರಂದು 9.30ಕ್ಕೆ ಹೊಸಪೇಟೆ ರೈಲು ನಿಲ್ದಾಣದಲ್ಲಿ ಹರಿಹರ-ಕೊಟ್ಟೂರು ರೈಲು ಸೇವೆಗೆ ಚಾಲನೆ ಸಿಗಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ರೈಲು ಸಂಚಾರಕ್ಕೆ ಹಸಿರು ನಿಶಾನೆಯನ್ನು ತೋರಿಸಲಿದ್ದಾರೆ.
ಹರಿಹರ-ಕೊಟ್ಟೂರು ರೈಲು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರ ಆರಂಭವಾದರೆ ಬೆಂಗಳೂರು-ಹೊಸಪೇಟೆ-ಹಂಪಿ ನಡುವಿನ ಪ್ರಯಾಣದ ಅವಧಿ ಕಡಿತವಾಗಲಿದೆ. ಬೆಂಗಳೂರು- ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಗುಂತಕಲ್ ಮಾರ್ಗಕ್ಕೂ ಇದು ಸಂಪರ್ಕ ಕಲ್ಪಿಸುತ್ತದೆ.

19ನೇ ಶತಮಾನದಲ್ಲಿ ಬ್ರಿಟಿಷರು ಕೊಟ್ಟೂರಿನಿಂದ ಹತ್ತಿಯನ್ನು ತೆಗೆದುಕೊಂಡು ಹೋಗಲು ಈ ರೈಲು ಮಾರ್ಗವನ್ನು ಮಾಡಿದ್ದರು. 1994ರ ತನಕ ಈ ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಹ ಸಂಚಾರ ನಡೆಸುತ್ತಿತ್ತು. ಆದರೆ, ಬ್ರಾಡ್ ಗೇಜ್ಗೆ ಬದಲಾವಣೆಯಾದ ಬಳಿಕ ರೈಲು ಸಂಚಾರ ಸ್ಥಗಿತವಾಗಿತ್ತು.
2016ರಿಂದ ಗೂಡ್ಸ್ ರೈಲಿನ ಸಂಚಾರ ಆರಂಭಗೊಂಡರೂ ಪ್ರಯಾಣಿಕ ರೈಲು ಸಂಚಾರ ಆರಂಭವಾಗಿರಲಿಲ್ಲ. ಸುರೇಶ್ ಅಂಗಡಿ ರೈಲ್ವೆ ಸಚಿವರಾದ ಬಳಿಕ ಜನರ ಒತ್ತಾಯಕ್ಕೆ ಮಣಿದು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದ್ದರು.
ರೈಲು ನಂಬರ್ 56529 ಮತ್ತು 56530 ಹರಿಹರ-ಕೊಟ್ಟೂರು-ಹರಿಹರ ನಡುವೆ ಸಂಚಾರ ನಡೆಸಲಿದೆ. ಅಕ್ಟೋಬರ್ 18ರಿಂದ ಹರಿಹರ-ಹೊಸಪೇಟೆ-ಹರಿಹರ ರೈಲು ಸೇವೆಗೆ ಚಾಲನೆ ಸಿಗಲಿದೆ. 9 ಬೋಗಿಗಳ ರೈಲಿನಲ್ಲಿ 7 ಜನರಲ್, 2 ಸೆಕೆಂಡ್ ಕ್ಲಾಸ್ ಬೋಗಿ ಇರುತ್ತವೆ.












Click it and Unblock the Notifications