ದಾವಣಗೆರೆ; ಪಂಚಾಯಿತಿ ಚುನಾವಣೆ, ವಾಮಚಾರ
ದಾವಣಗೆರೆ, ಡಿಸೆಂಬರ್ 27: ದಾವಣಗೆರೆ ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಚುರುಕಾಗಿ ನಡೆಯುತ್ತಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮತದಾನ ನಡೆಯುತ್ತಿದ್ದು, ವೃದ್ಧರು ಸಹ ಉತ್ಸಾಹದಿಂದ ಆಗಮಿಸಿ ಹಕ್ಕು ಚಲಾವಣೆ ಮಾಡುತ್ತಿದ್ದಾರೆ.
ಹರಿಹರ ತಾಲೂಕಿನ ದೇವರ ಬೆಳಕೆರೆ ಗ್ರಾಮದಲ್ಲಿ ವೃದ್ದರು ಹುಮ್ಮಸ್ಸಿನಿಂದ ಮತದಾನ ಮಾಡಿದರು. ಮೂವರು ಶತಾಯಿಶಿಗಳು ಮತದಾನ ಮಾಡಿ ಎಲ್ಲ ಗಮನ ಸೆಳೆದರು. ದೇವರಬೆಳಕೆರೆ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮಾರಮ್ಮ(102), ಮುನಿಯಮ್ಮ(101), ಗೌರಮ್ಮ(100) ಹಾಗೂ ನಿಂಗಮ್ಮ (95) ಮತದಾನ ಮಾಡಿದರು.
ಸಂಬಂಧಿಕರ ಸಹಾಯದಿಂದ ಮತಗಟ್ಟೆಗೆ ಆಗಮಿಸಿದ ವೃದ್ಧರು ವೀಲ್ ಚೇರ್ ಸಹಾಯದಿಂದ ಬಂದು ಮತದಾನ ಮಾಡಿದರು. ಮತದಾನ ನಮ್ಮ ಕರ್ತವ್ಯ ಅದ್ದರಿಂದ ಪ್ರತಿ ಬಾರಿ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸುತ್ತೇವೆ ಎಂದು ಹೇಳಿದರು.

ಬಹಿಷ್ಕಾರಕ್ಕೆ ತೀರ್ಮಾನ; ಹರಪನಹಳ್ಳಿ ತಾಲೂಕಿನ ಶಿರಗಾನಹಳ್ಳಿ ಗ್ರಾಮದಲ್ಲಿ ಮತಗಟ್ಟೆಯ ಮುಂಭಾಗ ವಾಮಾಚಾರ ಮಾಡಿರುವ ಘಟನೆ ನಡೆದಿದೆ. ನಿಂಬೆ ಹಣ್ಣು, ಅಕ್ಕಿ ಕುಂಕುಮವಿಟ್ಟು ವಾಮಚಾರ ಮಾಡಿದ್ದಾರೆ. ವಾಮಾಚಾರದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕಿಡಿಗೇಡಿಗಳು ಮತಗಟ್ಟೆಯ ಸುತ್ತ ನಿಂಬೆಹಣ್ಣು ಹಾಕಿದ್ದರು. ಜನರು ವಾಮಚಾರ ಮಾಡಿದ ನಿಂಬೆಹಣ್ಣು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಸುಟ್ಟು ಹಾಕಿದರು. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಚನ್ನಗಿರಿ ತಾಲೂಕಿನ ಕೋಗಲೂರು ಗ್ರಾಮದಲ್ಲಿ ವೀಲ್ ಚೇರ್ ನಲ್ಲಿ ಬಂದು ಅಂಗವಿಕಲೆ ಮತದಾನ ಮಾಡಿದರು. ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ಮಾಡಲು ಸಂಜೆ 5 ಗಂಟೆಯ ತನಕ ಅವಕಾಶವಿದೆ. ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications