ಬೆಣ್ಣೆನಗರಿ ದಾವಣಗೆರೆ ಹೊಸ ಆಕರ್ಷಣೆ 'ಗ್ಲಾಸ್ ಹೌಸ್': ವಿಶೇಷತೆ, ಹೇಗೆ ತಲುಪಬೇಕು, ಶುಲ್ಕದ ವಿವರ
ದಾವಣಗೆರೆ, ಸೆಪ್ಟೆಂಬರ್, 15: ಬೆಣ್ಣೆನಗರಿಯಲ್ಲಿನ ಗಾಜಿನ ಮನೆ ಪ್ರವಾಸಿಗರ ಗಮನ ಸೆಳೆಯುವುದರ ಜೊತೆಗೆ, ರಾಷ್ಟ್ರಮಟ್ಟದಲ್ಲಿಯೂ ಪ್ರಖ್ಯಾತಿ ಪಡೆದಿದೆ. ಪ್ರವಾಸಿಗರ ಪಾಲಿಗೆ ಅತ್ಯುತ್ತಮ ಪ್ರವಾಸಿ ತಾಣವೂ ಆಗಿದ್ದು, ಇಲ್ಲಿ ಸಾಕಷ್ಟು ವಿಶೇಷತೆಗಳನ್ನು ಕಾಣಬಹುದು.
ದಾವಣಗೆರೆ ನಗರದಿಂದ ಕುಂದುವಾಡಕ್ಕೆ ಹೋಗುವ ಮಾರ್ಗದ ಮಧ್ಯದಲ್ಲಿ ಈ ಗಾಜಿನ ಮನೆ ಇದೆ. ಇದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಬೇರೆಡೆ ಪ್ರಯಾಣ ಮಾಡುವವರು ಇಲ್ಲಿದೆ ಭೇಟಿ ನೀಡಿ ಗಾಜಿನ ಮನೆಯ ಸೌಂದರ್ಯವನ್ನು ಸವಿದು ಹೋಗುತ್ತಾರೆ. ಕೇವಲ ಮೂರು ಎಕರೆ ವಿಸ್ತೀರ್ಣದಲ್ಲಿ ಗಾಜಿನ ಮೆನ ಇದೆ. ಆದರೆ ಸುತ್ತಮುತ್ತ ಇರುವ 12 ಎಕರೆ ಜಾಗದಲ್ಲಿ ಸಿನಿಮಾ ಶೂಟಿಂಗ್ಗಳಿಗೆ ಹೇಳಿ ಮಾಡಿಸಿದ ಜಗವಾಗಿದೆ. ಸ್ಯಾಂಡಲ್ವುಡ್ನ ಹಲವು ಚಿತ್ರಗಳ ಚಿತ್ರೀಕರಣವೂ ಆಗಿದೆ. ನೋಡುಗರ ಪಾಲಿಗಂತೂ ಹೇಳಿ ಮಾಡಿಸಿದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ದಾವಣಗೆರೆಯಲ್ಲಿ ಬೆಣ್ಣೆದೋಸೆ ಪ್ರಸಿದ್ಧಿ ಆಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ವೀಕೆಂಡ್ ದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಕೇವಲ ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಬೇರೆ ತಾಲೂಕುಗಳಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕಾರಣದಿಂದ ಗ್ಲಾಸ್ ಹೌಸ್ ನೋಡಲು ಜನಸಾಗರವೇ ನೆರೆಯುತ್ತದೆ. ಇಲ್ಲಿನ ಸೌಂದರ್ಯಕ್ಕೆ ಮಾರುಹೋದ ಪ್ರವಾಸಿಗರಂತೂ ಹತ್ತು ಹಲವು ಬಾರಿ ಭೇಟಿ ನೀಡುತ್ತಲೇ ಇದ್ದಾರೆ. ಈಗಾಗಲೇ ಗಾಜಿನ ಮನೆಯ ಸಿಂಗಾರಕ್ಕೆ ಸುಮಾರು 50 ಕೋಟಿ ರೂಪಾಯಿಗೂ ಅಧಿಕ ಖರ್ಚಾಗಿದ್ದು, ಇದು ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ.
2013-14ನೇ ಸಾಲಿನಲ್ಲಿ ಅನುಮೋದನೆ
2013-14ನೇ ಸಾಲಿನಲ್ಲಿ ಗಾಜಿನ ಮನೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು. ಒಟ್ಟು 47.31 ಕೋಟಿ ರೂಪಾಯಿ ಹಣ ಮಂಜೂರಾಗಿತ್ತು. ಮುಖ್ಯವಾಗಿ ಕುಂದುವಾಡ ಕೆರೆಯ ಪಕ್ಕದಲ್ಲಿಅತಿ ದೊಡ್ಡದಾದ ಮತ್ತು ಸುಂದರವಾದ ಗಾಜಿನ ಮನೆಯ ಪ್ರಾರಂಭಿಕವಾಗಿ 25 ಕೋಟಿ 63 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ದಿನಗಳು ಕಳೆದಂತೆ ಯೋಜನೆಯ ಗಾತ್ರ ವೆಚ್ಚವೂ ಹೆಚ್ಚಾಗುತ್ತಾ ಹೋಯಿತು. ಗಾಜಿನ ಮನೆ ಮಾತ್ರವಲ್ಲ, ವಿದೇಶಿ ಗಿಡಗಳು ಕೂಡ ಇಲ್ಲಿ ಇವೆ. ಒಂದಕ್ಕಿಂತ ಮತ್ತೊಂದು ವಿಭಿನ್ನವಾದ ಗಿಡಗಳನ್ನು ಇಲ್ಲಿ ಇರಿಸಲಾಗಿದೆ. ಜಪಾನ್, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶಗಳ ಗಿಡಗಳು ಇಲ್ಲಿರುವುದು ವಿಶೇಷವಾಗಿದೆ.
ಎಸ್. ಎಸ್. ಮಲ್ಲಿಕಾರ್ಜುನ್ ಅವರು ತೋಟಗಾರಿಕೆ ಸಚಿವರಾಗಿದ್ದಾಗ ದಾವಣಗೆರೆಗೆ ಗಾಜಿನ ಮನೆ ತರಲು ಪಣ ತೊಟ್ಟಿದ್ದರು. ಇದು ರಾಮನಗರಕ್ಕೆ ಹೋಗುವ ಸಾಧ್ಯತೆ ಇತ್ತು. ಆದರೂ ಪಟ್ಟುಬಿಡದ ಮಲ್ಲಿಕಾರ್ಜುನ್ ಅವರು ದಾವಣಗೆರೆಗೆ ಮಂಜೂರಾತಿ ಮಾಡಿಸುವಲ್ಲಿ ಯಶಸ್ವಿ ಆಗಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಗಾಜಿನ ಮನೆ ಆಗಬೇಕೆಂಬ ಬೇಡಿಕೆ ಇತ್ತು. ಕೊನೆಗೂ ಶಕ್ತಿ ಬಳಸಿ ಬೆಣ್ಣೆನಗರಿಯಲ್ಲಿ ಸುಂದರಮಯ ಗಾಜಿನ ಮನೆ ರೂಪುಗೊಳ್ಳಲು ಕಾರಣಕರ್ತರಾದರು.
Shanti Sagara : ಸೂಳೆಕೆರೆ ಸೌಂದರ್ಯ ಸವಿಯುವುದಕ್ಕೆ ಹೀಗಿದೆ 'ಮಾರ್ಗ'; ಇದು ಪ್ರವಾಸಿಗರ ಸ್ವರ್ಗ
ಯಾವ್ಯವ ದೇಶಗಳ ಗಿಡಗಳು ಇಲ್ಲಿವೆ?
ಸುಮಾರು 108 ಮೀಟರ್ ಉದ್ದವಿರುವ ಗಾಜಿನ ಮನೆಯ ಅಗಲ 68 ಮೀಟರ್ ಇದ್ದು, 18 ಮೀಟರ್ ಎತ್ತರ ಇದೆ. ಇದನ್ನು ಸೇಂಟ್ ಗೊಬೇನ್ ಗ್ಲಾಸ್ಗಳನ್ನು ಬಳಸಿ ವೈವಿಧ್ಯಮಯವಾಗಿ ವಿನ್ಯಾಸ ರೂಪಿಸಲಾಗಿದೆ. ಒಳಗಡೆ ಗ್ರಾನೈಟ್ ನೆಲಹಾಸು ಅಳವಡಿಸಲಾಗಿದೆ. ಸೂರ್ಯನ ತಪ್ಪಿಸುವಂತೆ ಗ್ಲಾಸ್ಗಳನ್ನು ಹೊಂದಿಸಲಾಗಿದೆ. ಇದರಿಂದಾಗಿ ಬಿಸಿಲಿನ ತಾಪ ಒಳಗಡೆ ಬರುವುದಿಲ್ಲ. ಬದಲಾಗಿ ಇಲ್ಲಿ ತಂಪೆನೆಯ ವಾತಾವರಣದ ಜೊತೆಗೆ ತಂಗಾಳಿಯ ಅನುಭವ ಆಗುತ್ತದೆ. ಇದು ಇಲ್ಲಿಗೆ ಬರುವವರಿಗೆ ಮತ್ತಷ್ಟು ಸಂತೋಷ ನೀಡುತ್ತದೆ.
ಇನ್ನು ಇಲ್ಲಿ ಇದೀಗ ಉದ್ಯಾನವನವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರು ಕುಳಿತುಕೊಳ್ಳಲು ಬೆಂಚ್ಗಳನ್ನು ಅಳವಡಿಸಲಾಗಿದೆ. ಸ್ಪೈನ್, ಫಿಲಿಫೈನ್ಸ್, ಥೈಲಾಂಡ್ನಿಂದ ಇಲ್ಲಿಗೆ 300 ರಿಂದ 400 ಗಿಡಗಳನ್ನು ತಂದು ನೆಡಲಾಗಿದೆ. ಈ ಮಧ್ಯೆ ಸಂಗೀತ ಕಾರಂಜಿಯೂ ಇಲ್ಲಿದ್ದು, ಪ್ರವಾಸಿಗರಿಗೆ ಮತ್ತಷ್ಟು ರಂಗು ನೀಡುತ್ತಿದೆ. ಇಲ್ಲಿ ವರ್ಷಕ್ಕೊಮ್ಮೆ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಹೂವು ಪ್ರಿಯರಿಗೆ, ಪ್ರವಾಸಿಗರಿಗೆ ಈ ತಾಣ ಮುದ ನೀಡುವುದಲ್ಲದೇ, ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡಬೇಕು ಎನಿಸುವಷ್ಟರ ಮಟ್ಟಿಗೆ ಗಮನ ಸೆಳೆಯುತ್ತಲೇ ಇದೆ. ಇಲ್ಲಿನ ಗ್ಲಾಸ್ ಹೌಸ್ ಈಗ ಕೇವಲ ದಾವಣಗೆರೆ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಪ್ರಖ್ಯಾತಿ ಪಡೆದಿದೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರವಾಸಿರು ಎಂಜಾಯ್ ಮಾಡಲು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಮಂಗಳೂರು, ಉಡುಪಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದರು. ಆದರೆ ಇದೀಗ ಅದೆಷ್ಟೋ ಜನರು ಕುಟುಂಬ ಸಮೇತರಾಗಿ ಗ್ಲಾಸ್ ಹೌಸ್ಗೆ ಬಂದು ಇಲ್ಲಿನ ಸೌಂದರ್ಯವನ್ನು ಸವಿದು ಹೋಗುತ್ತಿರುವುದು ತುಂಬಾ ವಿಶೇಷವಾಗಿದೆ. ವೀಕೆಂಡ್ನಲ್ಲಿ ಸಾವಿರಾರು ಜನ ಇಲ್ಲಿಗೆ ಮಕ್ಕಳೊಂದಿಗೆ ಬಂದು ಎಂಜಾಯ್ ಮಾಡುತ್ತಿದ್ದಾರೆ. ಯುವಕ, ಯುವತಿಯರಂತೂ ಇಲ್ಲಿಗೆ ಬಂದರೆ ತಮ್ಮದೊಂದು ಸೆಲ್ಫೀ ಫೋಟೋ ತೆಗೆದುಕೊಂಡು ಹೋಗದೇ ಹಿಂದಿರುಗುವುದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ಸೌಂದರ್ಯ ಯುವಜನತೆಯನ್ನು ತನ್ನತ್ತ ಸೆಳೆಯುತ್ತಿದೆ.
2018ರಲ್ಲಿ ಗಾಜಿನ ಮನೆಗೆ ರಾಷ್ಟ್ರೀರ ಪ್ರಶಸ್ತಿ
ಗಾಜಿನ ಮನೆಯ ಸುತ್ತಲೂ ಹಚ್ಚ ಹಸಿರು, ಪ್ರವೇಶಿಸುತ್ತಿದ್ದಂತೆ ಕಲಾಕೃತಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿದ್ದು, ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಕ್ಕಿದೆ. ಈಗಾಗಲೇ ಬೆಣ್ಣೆನಗರಿ ಮಂಡಕ್ಕಿ, ಮೆಣಸಿನಕಾಯಿ ಬೋಂಡಾಕ್ಕೆ ಪ್ರಸಿದ್ಧಿಯಾಗಿದೆ. ಇದೀಗ ಗಾಜಿನ ಮನೆಯ ವಿನ್ಯಾಸವೂ ಕೂಡ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಗಾಜಿನ ಕಟ್ಟಡ ನಿರ್ಮಾಣ ವಿಭಾಗದಲ್ಲಿ ಇಲ್ಲಿನ ಗಾಜಿನ ಮನೆಯು 2018ನೇ ಸಾಲಿನ ಝಾಕ್ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ. ಇದರೊಂದಿಗೆ ಗಾಜಿನ ಮನೆಯು ದೇಶದ್ಯಾಂತ ಮನೆಮಾತಾಯಿತು. ಮುಂಬೈನಲ್ಲಿ ನಡೆದಿದ್ದ ಸಮಾರಂಭದಲ್ಲಿ ಬೆಂಗಳೂರಿನ ಆರ್ಗೊ ಫೆಸೆಡಸ್ ಕಂಪೆನಿಯ ಪಾಲುದಾರ ಅರವಿಂದ್ ದಾಸ್ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದರು. ಗಾಜಿನ ಮನೆ ನಿರ್ಮಾಣ ಜವಾಬ್ದಾರಿಯನ್ನು ನಿಕಿತಾ ಬಿಲ್ಡ್ ಟೆಕ್ ಕಂಪೆನಿ ಗುತ್ತಿಗೆ ಪಡೆದಿತ್ತು. ಮದನ್ ಅಸೋಸಿಯೇಷನ್ ಇದರ ವಿನ್ಯಾಸ ತಯಾರಿಸಿದ್ದು, ಈ ಕಂಪೆನಿಯು ಗಾಜಿನ ಕೆಲಸಗಳನ್ನು ಮಾಡಿತ್ತು. ಗಾಜಿನ ಮನೆ ನಿರ್ಮಾಣ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ತೋಟಗಾರಿಕೆ ಇಲಾಖೆ ನಿರ್ದೇಶಕರಿಗೆ ಮಾತ್ರವಲ್ಲ, ಇಲ್ಲಿನ ಜಿಲ್ಲೆಯ ಜನರಿಗೂ ಖುಷಿ ಕೊಟ್ಟಿದೆ.
ಗಾಜಿನ ವಿಭಾಗದಲ್ಲಿ ದಾವಣಗೆರೆ ಗ್ಲಾಸ್ ಹೌಸ್ಗೆ ಪ್ರಥಮ ಸ್ಥಾನ ದೊರೆತಿತ್ತು. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೆದರ್ ಲ್ಯಾಂಡ್ನಲ್ಲಿದ್ದ ಗಾಜಿನಮನೆಯ ಮಾದರಿಯಲ್ಲಿ ನಿರ್ಮಿಸುವಂತೆ ವಿನ್ಯಾಸ ತಯಾರಿಸಲು ಸಲಹೆ ನೀಡಿದ್ದರು. ಅದರಂತೆ 16 ಕೋಟಿ ರೂಪಾಯಿ ವೆಚ್ಚದಲ್ಲಿ ಗಾಜಿನ ಮನೆಯನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದು ದಿನ ಕಳೆದಂತೆ ಯೋಜನೆಯ ವೆಚ್ಚವೂ ಹೆಚ್ಚಾಯಿತು. ಕೆಆರ್ಐಡಿಎಲ್ ಸಂಸ್ಥೆಗೆ ನಿರ್ಮಾಣ ಜವಾಬ್ದಾರಿ ವಹಿಸಿಕೊಡಲಾಗಿತ್ತು.
ಯಾವೆಲ್ಲ ಕಾರ್ಯಕ್ರಮಗಳಿಗೆ ಎಷ್ಟು ಶುಲ್ಕ?
1. ಒಬ್ಬರು ವಯಸ್ಕರಿಗೆ - 20 ರೂಪಾಯಿ
2. ಒಬ್ಬರುವ ಮಕ್ಕಳಿಗೆ -10 ರೂಪಾಯಿ
3. ದ್ವಿಚಕ್ರ ವಾಹನ- 10 ರೂಪಾಯಿ,
4. 3, 4 ಚಕ್ರಗಳ ವಾಹನಗಳಿಗೆ - 20 ರೂಪಾಯಿ
5. ಪ್ರೀ ಪೋಸ್ಟ್ ವೆಡ್ಡಿಂಗ್ ಶೂಟಿಂಗ್ - 10,000
6. ಧಾರಾವಾಹಿ, ಕಿರುಚಿತ್ರ ಚಿತ್ರೀಕರಣ -10,000
7. ಚಲನಚಿತ್ರ ಚಿತ್ರೀಕರಣ - 25,000
8. ಡ್ರೋಣ್ ಕ್ಯಾಮೆರಾ ಚಿತ್ರೀಕರಣ - 5,000
9. ವಿಶ್ವವಿದ್ಯಾಲಯದ ಕಾರ್ಯಕ್ರಮ - 5,000
10. ವಿವಿಧ ಇಲಾಖೆಗಳ ಕಾರ್ಯಕ್ರಮ : 5,000
ವಿದ್ಯುತ್ ಶುಲ್ಕ ನಿರ್ವಹಣೆಗೆ ಪ್ಲಾನ್
ಗಾಜಿನ ಮನೆ ನಿರ್ವಹಣೆಗೆ ಆದಾಯ ಗಳಿಸುವ ದೃಷ್ಟಿಯಿಂದ ಈ ದರ ನಿಗದಿ ಮಾಡಲಾಗಿದೆ. ಪ್ರತಿನಿತ್ಯ ಇಲ್ಲಿನ ಗಿಡಗಳ ನಿರ್ವಹಣೆಗೆ ಮೋಟರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ತಿಂಗಳಿಗೆ 45 ಸಾವಿರ ರೂಪಾಯಿ ವಿದ್ಯುತ್ ಬಿಲ್ ಬರುತ್ತಿದೆ. ಇದರ ಜೊತೆಗೆ ಹೊಸದಾಗಿ ಹೂವಿನ ಗಿಡ ನೆಡಲು, ಉದ್ಯಾನವನ ನಿರ್ವಹಣೆ, ಔಷಧಿ ಸೇರಿದಂತೆ ಸಾಕಷ್ಟು ಹಣ ಬೇಕಾಗಿದೆ. ಇದೀಗ ನಿಗದಿ ಮಾಡಿದ ಶುಲ್ಕದಿಂದ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಟನಲ್ ಅಕ್ವೇರಿಯಂ, ಫಿಶ್ ವಿತ್ ಕಿಡ್ಸ್, ಸಂಗೀತ ಕಾರಂಜಿ, ಗಾಜಿನಮನೆಗೆ ವಿದ್ಯುತ್ ಅಳವಡಿಕೆ ಮಾಡಲು ಸಮಗ್ರ ಯೋಜನೆ ಸಿದ್ಧಪಡಿಸಲಾಗಿತ್ತು. ಈ ಕಾರ್ಯವೂ ಬಹುತೇಕ ಮುಗಿಯುವ ಹಂತದಲ್ಲಿದೆ.