Assmbly election 2023: ದಾವಣಗೆರೆ ದಕ್ಷಿಣದಲ್ಲಿ"ಕೈ" ಟಿಕೆಟ್ ಮುಸ್ಲಿಮರಿಗೆ ನೀಡಿ, ಶಿವಶಂಕರಪ್ಪ ಮಾತಿನಂತೆ ನಡೆದುಕೊಳ್ಳಲಿ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ
ದಾವಣಗೆರೆ, ಮಾರ್ಚ್, 01: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮುದಾಯದ ಮುಖಂಡರಾದ ಮೆಹಬೂಬ್ ಜಬಿ, ಹಜರತ್, ದಾದಾಪೀರ್ ಅವರು, 2018ರಲ್ಲಿ ಶಾಮನೂರು ಶಿವಶಂಕರಪ್ಪ ಅವರು ಇದೇ ನನ್ನ ಕೊನೆಯ ಚುನಾವಣೆ ಎಂದಿದ್ದರು. ಈ ಬಾರಿ ಬೆಂಬಲಿಸಿ, ಮುಂದಿನ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದರು. ಈಗ ಮಾತಿನಂತೆ ಅವರು ನಡೆದುಕೊಳ್ಳಬೇಕು. ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡದಿದ್ದರೆ ಮುಸ್ಲಿಂ ಸಮುದಾಯದ ಮುಖಂಡರು ಮತ್ತೊಮ್ಮೆ ಸಭೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು.

83 ಸಾವಿರ ಜನಸಂಖ್ಯೆ ಇದೆ
ಜೆಡಿಎಸ್ನ ಅಮಾನುಲ್ಲಾ ಖಾನ್ ಅವರು ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಿದರೆ ಕಣದಿಂದ ಹಿಂದೆ ಸರಿಯುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 83 ಸಾವಿರ ಜನಸಂಖ್ಯೆ ನಮ್ಮ ಸಮುದಾಯಲ್ಲಿ ಇದೆ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದ್ದೇವೆ. ಸಾದಿಕ್ ಪೈಲ್ವಾನ್ ಅವರು ಸುಮಾರು 45 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ನಮ್ಮದು ಎಂದರು.
ನಾವೆಲ್ಲರೂ ಒಗ್ಗಟ್ಟಾಗಿ ದುಡಿಯುತ್ತೇವೆ
ಒಂದು ವೇಳೆ ಇವರಿಗೆ ಟಿಕೆಟ್ ನೀಡದಿದ್ದರೆ, ಬೇರೆ ಅಭ್ಯರ್ಥಿಗೆ "ಕೈ" ಟಿಕೆಟ್ ಸಿಕ್ಕರೂ ನಾವೆಲ್ಲರೂ ಒಗ್ಗಟ್ಟಾಗಿ ದುಡಿಯುತ್ತೇವೆ ಎಂದು ಹೇಳಿದರು. ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಇಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿರುವ ಮುಸ್ಲಿಂರಿಗೆ ಟಿಕೆಟ್ ಕೊಡಲೇಬೇಕೆಂಬ ಬೇಡಿಕೆ ಇದೆ. ಯಾವುದೇ ಕಾರಣಕ್ಕೂ ಆಮೀಷಗಳಿಗೆ ಬಲಿಯಾಗುವುದಿಲ್ಲ. ಟಿಕೆಟ್ ಸಿಗದಿದ್ದರೆ ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಛಿದ್ರವಾಗಲಿದೆ. ಜಿಲ್ಲೆಯ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ನಮ್ಮ ಸಮುದಾಯದವರಿದ್ದು, ಅಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಚ್ಚರಿಸಿದರು.

2 ಲಕ್ಷ ರೂಪಾಯಿ ನೀಡಿ ಅರ್ಜಿ ಸಲ್ಲಿಸಿದ್ದಾರೆ
ಸಾದಿಕ್ ಪೈಲ್ವಾನ್ 2 ಲಕ್ಷ ರೂಪಾಯಿ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಸೈಯ್ಯದ್ ಸೈಫುಲ್ಲಾ ಪುತ್ರ ಖಾಲಿದ್ ಸೈಫುಲ್ಲಾ ಸೇರಿದಂತೆ ನಾಲ್ವರು ಟಿಕೆಟ್ ಸಲ್ಲಿಸಿದ್ದಾರೆ. ಖಾಲಿದ್ ಸೈಫುಲ್ಲಾರಿಗೆ ಇನ್ನು ಚಿಕ್ಕ ವಯಸ್ಸು. ಮುಂದೆ ಅವರಿಗೆ ಅವಕಾಶಗಳಿವೆ. ಸಾದಿಕ್ ಪೈಲ್ವಾನ್ ಅವರು ಮಾತ್ರವಲ್ಲ, ಇಡೀ ಕುಟುಂಬವೇ ಕಾಂಗ್ರೆಸ್ಗೆ ದುಡಿದಿದೆ. ಅವರಿಗೆ ಟಿಕೆಟ್ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಲಾಗುವುದು ಎಂದರು.
ಕ್ಷೇತ್ರದಲ್ಲಿ ಮುಸ್ಲಿಮರೇ ಹೆಚ್ಚು ಮತದಾರರಿದ್ದಾರೆ. ಲಿಂಗಾಯತರು, ಕುರುಬರು, ಎಸ್ಸಿ, ಎಸ್ಟಿ, ದಲಿತರ ಮತಗಳೂ ಇವೆ. ಹೆಚ್ಚಾಗಿ ನಾವೇ ಇದ್ದು, ಈ ಬಾರಿ ನಮ್ಮ ಸಮುದಾಯಕ್ಕೆ ಟಿಕೆಟ್ ಕೊಟ್ಟರೆ ಜಯಭೇರಿ ಬಾರಿಸುವುದರಲ್ಲಿ ಅನುಮಾನ ಇಲ್ಲ. ಕಾಂಗ್ರೆಸ್ ವರಿಷ್ಠರು ಈ ಬಗ್ಗೆ ನಿರ್ಧಾರ ತಿಳಿಸಬೇಕು.
ಶಾಮನೂರು ಶಿವಶಂಕನಪ್ಪರು ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ ಕಳೆದ ಮೂರು ಚುನಾವಣೆಗಳಲ್ಲಿಯೂ ಕೊನೆಯ ಚುನಾವಣೆ ಎಂದು ಹೇಳಿಕೊಂಡು ಬಂದಿದ್ದಾರೆ. ನಾವೂ ಅವರನ್ನು ಬೆಂಬಲಿಸಿಕೊಂಡು ಬಂದಿದ್ದೇವೆ. ನಮಗೂ ರಾಜಕೀಯ ಪ್ರಾತಿನಿಧ್ಯ ಈ ಕ್ಷೇತ್ರದಲ್ಲಿ ಬೇಕು. ಹಾಗಾಗಿ, ಒತ್ತಾಯ ಮಾಡುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಸೈಯ್ಯದ್ ಅಕ್ಬರ್ ಆಲಿ, ಕೆ. ಜಮಾಲುದ್ದೀನ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications