ಬಳ್ಳಾರಿ; ಮದುವೆ ವಿಷಯ ಮಾತನಾಡಲು ಬಂದ ಪ್ರಿಯಕರನಿಗೆ ಬೆಂಕಿ ಹಚ್ಚಿದ ಯುವತಿ
ಬಳ್ಳಾರಿ, ಜನವರಿ 20: ಯುವತಿಯೊಬ್ಬಳು ತನ್ನ ಪ್ರೇಮಿಯ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ ಘಟನೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ವಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಡ್ಡೇನಹಳ್ಳಿ ಗ್ರಾಮದ ಲಕ್ಷ್ಮೀ ಮತ್ತು ಪರಸಪ್ಪ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಈಚೆಗೆ ಮನೆಯವರು ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ನೆರವೇರಿಸಿದ್ದರು. ಇದನ್ನು ತಿಳಿದ ಪರಸಪ್ಪ ಯುವತಿಯ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ. ನಾವು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ನಮ್ಮನ್ನು ಬೇರೆ ಮಾಡಬೇಡಿ ಎಂದು ಕೇಳಿಕೊಂಡಿದ್ದಾನೆ.
ಈ ಸಂಬಂಧ ಪರಸಪ್ಪ ಮತ್ತು ಲಕ್ಷ್ಮೀ ನಡುವೆಯೂ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಆ ಯುವತಿ ಬಕೆಟ್ ನಲ್ಲಿ ಸೀಮೆಎಣ್ಣೆ ತುಂಬಿಕೊಂಡು ಬಂದು ಪರಸಪ್ಪನ ಮೇಲೆ ಎರಚಿ, ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಉರಿ ತಾಳಲಾರದೆ ಯುವಕ ಪಕ್ಕದ ಹುಲ್ಲಿನ ಬಣವೆಗೆ ಮೈ ಉಜ್ಜಲು ಓಡಿದ್ದಾನೆ. ಇದರಿಂದ ಹುಲ್ಲಿನ ಬಣವೆ ಕೂಡ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ವಿಷಯ ತಿಳಿದ ಗ್ರಾಮಸ್ಥರು ಯುವಕನನ್ನು ರಕ್ಷಿಸಿದ್ದು, ಆಂಬ್ಯುಲೆನ್ಸ್ ಕರೆಸಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪರಸಪ್ಪನಿಗೆ ಶೇ.30ರಷ್ಟು ಸುಟ್ಟ ಗಾಯಗಳಾಗಿವೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications