ಸಿದ್ದರಾಮಯ್ಯ ಮುಂದಿನ ಸಿಎಂ ಘೋಷಣೆ ರಹಸ್ಯ ಬಿಚ್ಚಿಟ್ಟ ಈಶ್ವರಪ್ಪ!
ದಾವಣಗೆರೆ, ಜುಲೈ 23; "ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ನೆಗೆದು ಬೀಳಲಿಲ್ವಾ. ಆಗ ಹೇಗೆ ಗೊತ್ತಿತ್ತೋ ಈಗಲೋ ಹಾಗೆ". ಯಡಿಯೂರಪ್ಪ ಕೆಳಗಿಳಿಸೋದು ಆರು ತಿಂಗಳ ಹಿಂದೆ ಗೊತ್ತಿತ್ತು ಎಂದಿದ್ದ ಸಿದ್ದರಾಮಯ್ಯರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಈ ರೀತಿ ಚಾಟಿ ಬೀಸಿದರು.
ಶುಕ್ರವಾರ ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಅಭಿಮಾನಿಗಳಿಗೆ ಸಿಎಂ ಎಂದು ಕೂಗಿ ಅಂತಾ ಅವರೇ ಹೇಳ್ತಾರೆ. ಆ ಮೇಲೆ ಘೋಷಣೆ ಹಾಕಬೇಡಿ ಅಂತಾರೆ. ಸಿದ್ದರಾಮಯ್ಯ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರಾಜ್ಯದಲ್ಲಿ ಅತಿ ಹೆಚ್ಚು ಆಡಳಿತ ನಡೆಸಿದ್ದು ಕಾಂಗ್ರೆಸ್. ಎಷ್ಟು ಜನರು ಮುಖ್ಯಮಂತ್ರಿಯಾದ್ರು?, ದಲಿತರನ್ನು ಸಿಎಂ ಮಾಡಿದರಾ?" ಎಂದು ಈಶ್ವರಪ್ಪ ಪ್ರಶ್ನಿಸಿದರು.
"ದಲಿತ ನಾಯಕ ಡಾ. ಪರಮೇಶ್ವರ್ರನ್ನು ಸೋಲಿಸಿದರು. ನಾನು ಮುಖ್ಯಮಂತ್ರಿ ಆಗಲು ಅಡ್ಡಿ ಎಂಬ ಕಾರಣಕ್ಕೆ. ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬರಲಿ, ನಾನು ಬರುತ್ತೇನೆ" ಎಂದು ಸಿದ್ದರಾಮಯ್ಯರಿಗೆ ಬಹಿರಂಗ ಸವಾಲು ಹಾಕಿದರು.

"ನೀವು ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ಸಿದ್ದರಾಮಯ್ಯ ಬಹಿರಂಗವಾಗಿ ಹೇಳಲಿ. ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂಬ ಘೋಷಣೆ ಹಾಕಿಸುತ್ತಾರೆ. ಅವರ ರೀತಿ ನಾವು ಮಾಡಲಿಕ್ಕೆ ಆಗುತ್ತಾ? ಡಿ. ಕೆ. ಶಿವಕುಮಾರ್ ಸತ್ಯ ಹರಿಶ್ಚಂದ್ರರಾ?. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದು ಗೊತ್ತಿಲ್ವಾ?. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಮಾಡಲು ಶಿವಕುಮಾರ್ಗೆ ನೈತಿಕತೆ ಇಲ್ಲ" ಎಂದರು.
"ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವೆ ಏನು ಚರ್ಚೆಯಾಗಿದೆಯೋ ಗೊತ್ತಿಲ್ಲ. ಈ ಬಗ್ಗೆ ಯಡಿಯೂರಪ್ಪ ಹಾಗೂ ಹೈಕಮಾಂಡ್ ಅವರನ್ನೇ ಕೇಳಬೇಕು" ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
"ನಾನು ಈ ಇಲಾಖೆಯಲ್ಲಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ಬಿಎಸ್ವೈ ಬದಲಾವಣೆ ವಿಚಾರ ಸಂಬಂಧ ಏನೂ ಗೊತ್ತಿಲ್ಲ. ನಾನು ಮುಖ್ಯಮಂತ್ರಿ ಆಗಬೇಕೆಂದು ಯಾರು ಹೇಳಬೇಡಿ. ಈಗಲೇ ಚಿಕ್ಕಪುಟ್ಟ ಸಮಸ್ಯೆಗಳು ಬಗೆಹರಿಯುತ್ತಿವೆ. ದಯವಿಟ್ಟು ಈಶ್ವರಪ್ಪ ಸಿಎಂ ಆಗಬೇಕೆಂದು ಆಗ್ರಹಿಸಬೇಡಿ. ನನ್ನ ವೈಯಕ್ತಿಕ ಪ್ರಾರ್ಥನೆ ಎಂದು ಕೈಮುಗಿಯುತ್ತೇನೆ" ಎಂದರು.
"ಐಶ್ವರ್ಯ ರೈ ಮದುವೆಯಾಗ್ತೀರಾ ಅಂದರೆ ನೀವು ಆಗಲ್ವಾ?. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಯುವಕರಿಗೆ ಆದ್ಯತೆ ನೀಡಿದರೆ ತುಂಬಾ ಖುಷಿ. ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಹಿರಿಯರನ್ನು ಕೈಬಿಡಲಾಗಿದೆ. ಯುವಕರಿಗೆ ಆದ್ಯತೆ ನೀಡಿದರೆ ಒಳ್ಳೆಯದಲ್ವಾ. ರಾಜ್ಯದ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವನ್ನು ನಾವೆಲ್ಲರೂ ಶಿಸ್ತಿನಿಂದ ಸ್ವೀಕರಿಸುತ್ತೇವೆ" ಎಂದು ಹೇಳಿದರು.











Click it and Unblock the Notifications