ಚಿತ್ರದುರ್ಗ : ವಿಷಪೂರಿತ ಆಹಾರ ಸೇವನೆ, ಒಂದೇ ಕುಟುಂಬದ ನಾಲ್ವರ ಸಾವು
ಚಿತ್ರದುರ್ಗ, ಡಿಸೆಂಬರ್ 21 : ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೂವರು ಅಸ್ವಸ್ಥಗೊಂಡಿದ್ದು, ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿರಿಯೂರು ತಾಲೂಕಿನ ಹುಲಿತೊಟ್ಟು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿತ್ತಪ್ಪ (80), ಶಶಿಧರ್ (40), ಹೇಮಲತಾ (30), ಭಾಗ್ಯಮ್ಮ (35) ಮೃತಪಟ್ಟವರು. ಮೃತರೆಲ್ಲರೂ ಒಂದೇ ಕುಟುಂಬದವರು ಅಪ್ಪ ಹಾಗೂ ಮೂವರು ಮಕ್ಕಳು.
ಆಹಾರ ಸೇವಿಸಿದ ಮೂವರ ಸ್ಥಿತಿ ಗಂಭೀರವಾಗಿದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸದಾನಂದ (13), ಮುದ್ದುರಾಜ್ (14), ಅಜಯ್ (14) ಅವರನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ರಾತ್ರಿ ಮನೆಯಲ್ಲಿದ್ದ7 ಜನರು ಮುದ್ದೆ ಮತ್ತು ಅವರೆಕಾಳು ಸಾರು ಊಟ ಮಾಡಿದ್ದರು. ಕೆಲವು ಹೊತ್ತಿನ ಬಳಿಕ ಎಲ್ಲರೂ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಮೃತಪಟ್ಟಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇದು ಆತ್ಮಹತ್ಯೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಾಮರಾಜನಗರದಲ್ಲಿ ಕೆಲವು ದಿನಗಳ ಹಿಂದೆ ದೇವಾಲಯದ ವಿಷ ಪ್ರಸಾದ ಸೇವಿಸಿ 15 ಜನರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.












Click it and Unblock the Notifications