ದಾವಣಗೆರೆಯಲ್ಲಿ ದುಪ್ಪಟ್ಟಾಯ್ತು ಹೂ ದರ: ದಸರಾಕ್ಕಿಂತ ದೀಪಾವಳಿಗೆ ಹಣ್ಣು ಅಗ್ಗ
ದಾವಣಗೆರೆ ಅಕ್ಟೋಬರ್ 22: ಹಬ್ಬ ಬಂತೆಂದರೆ ಸಾಕು ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಜೊತೆಗೆ ಹೂವು, ಹಣ್ಣುಗಳ ದರ ಕೇಳಿದರೆ ಯಾಕಾದರೂ ಹಬ್ಬ ಬರುತ್ತೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಈ ಬಾರಿ ವರುಣನ ಆರ್ಭಟದಿಂದಾಗಿ ಗ್ರಾಮೀಣ ಭಾಗದಲ್ಲಿನ ಜನರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ಒಂದೇ ತಿಂಗಳಿನಲ್ಲಿ ದಸರಾ, ಆಯುಧಪೂಜೆ ಹಾಗೂ ದೀಪಾವಳಿ ಬಂದಿರುವ ಕಾರಣ ಖರ್ಚು ಹೆಚ್ಚಾಗಿದೆ. ಹಬ್ಬಕ್ಕೆ ಇನ್ನು ಮೂರು ದಿನಗಳು ಬಾಕಿ ಇದೆ. ಆಗಲೇ ಹೂವಿನ ದರ ಗಗನಕ್ಕೇರಿದೆ. ನಾಳೆಯಿಂದ ಇನ್ನು ಹೆಚ್ಚಾಗಲಿದೆ.
ಆಯುಧ ಪೂಜೆ ದಿನವಂತೂ ಹೂವಿನ ದರ ಕೇಳಿ ಜಿಲ್ಲೆಯ ಜನರು ಕಂಗಾಲಾಗಿದ್ದರು. ಇನ್ನು ಈಗಾಗಲೇ ದೀಪಾವಳಿ ಸಿದ್ಧತೆ ಕೂಡ ಆರಂಭವಾಗಿದೆ. ಜೊತೆಗೆ ವಸ್ತುಗಳ ಬೆಲೆ ಅದರಲ್ಲೂ ಹೂವಿನ ದರ ಗಗನಕ್ಕೇರುತ್ತಿದೆ.

ದಾವಣಗೆರೆಯಲ್ಲಿ ಹೂವಿನ ಇಂದಿನ ದರವೆಷ್ಟು..?
ಮಾರುಕಟ್ಟೆಯಲ್ಲಿ ಸೇವಂತಿಗೆ ಒಂದು ಮಾರು ಹೂವಿಗೆ 70 ರೂಪಾಯಿ ಇದೆ. ದಿನ ಕಳೆದಂತೆ ದರ ಹೆಚ್ಚಾಗುತ್ತಿದೆ. ಚೆಂಡು ಹೂ, ಗುಲಾಬಿ, ಸೇವಂತಿಗೆ, ಮಲ್ಲಿಗೆ ಸೇರಿದಂತೆ ಎಲ್ಲಾ ಹೂವುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ದಸರಾ ಹಬ್ಬದ ವೇಳೆ 250ರಿಂದ 300 ರೂಪಾಯಿ ಸೇವಂತಿಗೆ ಹೂವಿನ ದರ ಇತ್ತು. ಇಂದು ಕಡಿಮೆ ಅನಿಸಿದರೂ ದೀಪಾವಳಿ ಹಬ್ಬದ ಸಮಯದಲ್ಲಿ 200 ರೂಪಾಯಿವರೆಗೆ ಹೋಗಬಹುದು ಎಂದು ಹೂವಿನ ವ್ಯಾಪಾರಿಗಳು ಹೇಳಿದ್ದಾರೆ.
ಒಂದು ಹೂವಿನ ಹಾರ ಈಗಲೇ 50 ರಿಂದ 150ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಇದು ಇನ್ನು ಹೆಚ್ಚಳವಾಗಲಿದೆ. ಸೋಮವಾರ ದೀಪಾವಳಿ ಹಬ್ಬ. ಈಗಲೇ ದರಗಳು ದುಪ್ಪಟ್ಟು ಆಗುತ್ತಿದೆ ಎನ್ನುವುದು ಗ್ರಾಹಕರ ಮಾತಾಗಿದೆ.

ತಮ್ಮ ಸಂಕಷ್ಟ ತೋಡಿಕೊಂಡ ಹೂವು ಬೆಳೆಗಾರರು
ಹೂವಿನ ದರ ಏರಿಕೆಗೆ ಪ್ರಮುಖ ಕಾರಣ ಈ ಬಾರಿ ಸುರಿದ ಭಾರಿ ಮಳೆ. ಸೇವಂತಿಗೆ ಸೇರಿದಂತೆ ಬೇರೆ ಬೇರೆ ಹೂವುಗಳು ನೀರಿನಲ್ಲಿ ಹಾಳಾಗಿವೆ. ಬೆಳೆ ಕಡಿಮೆ ಬಂದಿದೆ. ಜೊತೆಗೆ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ. ಮಾರುಕಟ್ಟೆಗೆ ಹೂವು ಕಡಿಮೆ ಬರುತ್ತಿರುವ ಕಾರಣ ದರ ಹೆಚ್ಚಳವಾಗಿದೆ. ಜನರು ಚೌಕಾಸಿ ವ್ಯಾಪಾರ ಮಾಡುತ್ತಾರೆ. ಕೆಲವರು ದರ ಕೇಳಿ ಇನ್ನು ಕಡಿಮೆಯಾಗಿಲ್ವಾ, ಹೂ ಬೇಡ ಬಿಡಿ ಎಂದು ಮುಂದಕ್ಕೆ ಹೋಗುತ್ತಾರೆ. ಮತ್ತೆ ಕೆಲವರು ಎರಡು ಮಾರು ಹೂವು ಖರೀದಿ ಮಾಡುವವರು ಕೇವಲ ಅರ್ಧ ಮಾರು ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೂವಿನ ವ್ಯಾಪಾರಿಗಳು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.
ಇನ್ನು ದೀಪಗಳ ಹಬ್ಬದಲ್ಲಿ ಲಕ್ಷ್ಮೀಗೆ ವಿಶೇಷ ಪ್ರಾಧಾನ್ಯತೆ. ಪೂಜೆ, ಪುನಸ್ಕಾರ ಮಾಡಲಾಗುತ್ತದೆ. ಹಾಗಾಗಿ ಹೂವು ಬೇಕು. ಈ ಕಾರಣಕ್ಕೆ ದುಬಾರಿ ಆದರೂ ಖರೀದಿ ಮಾಡಬೇಕು. ಹೀಗಾಗಿ ನಮ್ಮ ಜೇಬಿಗೆ ಕತ್ತರಿ ಬಿದ್ದರೂ ಖರೀದಿಸುತ್ತೇವೆ ಎಂದು ಗ್ರಾಹಕರು ಹೇಳಿದ್ದಾರೆ.

ದಸರಾಕ್ಕಿಂತ ದೀಪಾವಳಿಗೆ ಅಗ್ಗ
ಇನ್ನು ಸೇಬು ಹಣ್ಣು ಸೇರಿದಂತೆ ಕಿತ್ತಳೆ, ಮೂಸುಂಬೆ, ದ್ರಾಕ್ಷಿ, ಸೀಬೆಹಣ್ಣು, ಬಾಳೆಹಣ್ಣಿನ ದರ ಸ್ವಲ್ಪ ಜನರ ಕೈಗೆಟುಕುವಂತೆ ಸಿಗುತ್ತಿದೆ. ಸೇಬಿನ ದರ ಒಂದು ಕೆಜಿಗೆ 140 ರೂಪಾಯಿ ಇದೆ. ದಸರಾ ಹಬ್ಬದ ವೇಳೆ 250 ರೂಪಾಯಿ ಇತ್ತು. ಈ ಬಾರಿ ಹೆಚ್ಚಳವಾಗಲ್ಲ. ಯಾಕೆಂದರೆ ಎಲ್ಲೆಡೆಯಿಂದ ಯಥೇಚ್ಛವಾಗಿ ಹಣ್ಣು ಬಂದಿರುವ ಕಾರಣ ಬೆಲೆ ಜಾಸ್ತಿಯಾಗದು. ಹೆಚ್ಚು ಕಡಿಮೆ ಇದೇ ದರ ಇರಲಿದೆ ಎಂದು ದಾವಣಗೆರೆ ಮಾರು ಕಟ್ಟೆಯ ಹಣ್ಣಿನ ವ್ಯಾಪಾರಿಗಳು ಹೇಳಿದ್ದಾರೆ.

ಈ ಬಾರಿ ಸರಳ ದೀಪಾವಳಿ ಆಚರಣೆಗೆ ಒತ್ತು
ದೀಪಾವಳಿ ಹಬ್ಬ ಆಚರಣೆಯನ್ನು ಗ್ರಾಮೀಣ ಭಾಗದಲ್ಲಿ ವೈಭವ, ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಜನರು ಮಳೆ ಅವಾಂತರದಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಮಳೆ ನೀರಿನಲ್ಲಿ ಬೆಳೆ ಕೊಚ್ಚಿ ಹೋದ ಕಾರಣ ಬಹುತೇಕ ರೈತರು ನಷ್ಟದಲ್ಲಿ ಸಿಲುಕಿದ್ದಾರೆ. ಹಾಗಾಗಿ ಸರಳ ದೀಪಾವಳಿಯತ್ತ ಜನರು ಹೆಚ್ಚು ಗಮನ ನೀಡುತ್ತಿದ್ದಾರೆ. ಹೀಗಾಗಿ ಈ ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಸರಳ ದೀಪಾವಳಿ ಆಚರಣೆ ನಡೆಯಲಿದೆ.












Click it and Unblock the Notifications