ಹೊನ್ನಾಳಿ ಗಣಮಗನ ಹತ್ಯೆ: ಸುಪಾರಿ ಹಂತಕರನ್ನು ಬಂಧಿಸಿದ ಪೊಲೀಸರು
ದಾವಣಗೆರೆ ಮೇ, 26: ಜಿಲ್ಲೆಯ ಹೊನ್ನಾಳಿ ತಾಲೂಕಿನ ದೊಡ್ಡಕೇರಿ ಬೀರಲಿಂಗೇಶ್ವರ ದೇವಸ್ಥಾನದ ದೇವರಗಣಮಗ ಎಂದೇ ಕರೆಯಲ್ಪಡುತ್ತಿದ್ದ ಹೆಚ್. ಕೆ. ಕುಮಾರ್ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾಳಿಯ ಬಿ. ಎಸ್. ಮೋಹನ್ ಸಣ್ಣರಾಯಪ್ಪ, ಹಾಸನದ ದಿನೇಶ್ ದೊರೆಸ್ವಾಮಿ, ಹರಿಹರ ತಾಲೂಕಿನ ಹಿಂಡಸಘಟ್ಟ ಕ್ಯಾಂಪ್ನ ಕಾರ್ತಿಕ್ ಕುಮಾರ್ ನಾಯ್ಕ್, ಪರಮೇಶ್ ನಾಯ್ಕ್, ಸುನೀಲ್ ನಾಯ್ಕ್ ಬಂಧಿತ ಆರೋಪಿಗಳು. ಇವರು ಸೋಮವಾರ ಕುಮಾರ್ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಪೊಲೀಸರು ಬಂಧಿತ ಆರೋಪಿಗಳಿಂದ ಕೊಲೆ ಮಾಡಲು ಬಳಸಿದ್ದ ಚಾಕು, ಕಂದ್ಲಿ, ಮೋಟಾರ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಕೊಲೆ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆ ಹಿಡಿದಿರುವ ಹೊನ್ನಾಳಿ ಸಿಪಿಐ ದೇವರಾಜ್ ಕಾರ್ಯಕ್ಷಮತೆ, ಚಾಕಚಕ್ಯತೆಗೆ ಪ್ರಶಂಸೆ ವ್ಯಕ್ತವಾಗಿದೆ.
ಹಣ ವಾಪಸ್ ನೀಡುತ್ತೇವೆ ಎಂದು ಕರೆಸಿ ಕೊಲೆ
ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿದ್ದ ಹಣ ವಾಪಸ್ ನೀಡುತ್ತೇವೆ ಎಂದು ಹೇಳಿ ಆರೋಪಿಗಳು ಕುಮಾರ್ನನ್ನು ಕರೆಯಿಸಿದ್ದಾರೆ. ಕಾರಿನಲ್ಲಿ ಹೆಚ್. ಕಡದಕಟ್ಟೆ ಬಳಿಯ ಟವರ್ ಬಳಿಯ ಜಮೀನಿಗೆ ಕುಮಾರ್ ಬಂದಿದ್ದಾರೆ. ಆಗ ಹೊಂಚು ಹಾಕಿ ಕುಳಿತಿದ್ದ ಮೂವರು ಪಾತಕಿಗಳು ಕುಮಾರ್ ಕುತ್ತಿಗೆಗೆ ಹಿಂದಿನಿಂದ ಟವಲ್ ಹಾಕಿ ಬಿಗಿದು ಕುತ್ತಿಗೆಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದಿದ್ದಾರೆ. ಕಂದ್ಲಿ (ಮಚ್ಚು)ಯಿಂದ ಹಲ್ಲೆ ಮಾಡಿ ಕೊಂದು ಹಾಕಿದ್ದಾರೆ ಎಂದು ಸಿಪಿಐ ದೇವರಾಜ್ ಮಾಹಿತಿ ನೀಡಿದ್ದಾರೆ.
ಹಣಕಾಸಿನ ವಿಚಾರವಾಗಿ ವೈಷಮ್ಯ
ಹಾಸನ ತಾಲೂಕಿನ ಕಡದಾರವಳ್ಳಿ ಗ್ರಾಮದ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ದಿನೇಶ್ ಹಾಗೂ ಹೊನ್ನಾಳಿಯ ಬಿ. ಎಸ್. ಮೋಹನ್ ಕುಮಾರ್ ಜೊತೆ ಕೆಲ ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ಇಟ್ಟುಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಇವರ ಮಧ್ಯೆ ಹಣಕಾಸಿನ ವಿಚಾರವಾಗಿ ವೈಷಮ್ಯ ಉಂಟಾಗಿತ್ತು. ಹಾಗಾಗಿ, ಕುಮಾರ್ ತಾನು ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿರುವ ಹಣ ವಾಪಸ್ ಕೊಡುವಂತೆ ದಿನೇಶ್ ಹಾಗೂ ಮೋಹನ್ ಬಳಿ ಕೇಳಿದ್ದರು ಎಂದು ತಿಳಿದುಬಂದಿದೆ.
ಹಣ ನೀಡಬೇಕಾಗುತ್ತದೆ ಎಂದು ಹತ್ಯೆ
ಹಣದ ವಿಚಾರದಲ್ಲಿ ಗೊಂದಲ ಉಂಟಾಗಿದ್ದರಿಂದ ಕುಮಾರ್ ಆರೋಪಿಗಳ ಬಳಿ ಹಣ ಕೇಳಿದ್ದಾರೆ. ಆದರೆ ಆರೋಪಿಗಳು ಹಣ ನೀಡುವ ಬದಲಾಗಿ ಕುಮಾರ್ನನ್ನು ಕೊಂದು ಹಾಕಿದರೆ ಹಣ ತಮ್ಮಲ್ಲಿಯೇ ಉಳಿಯುತ್ತದೆ ಎಂಬ ದುರಾಸೆ ಪಟ್ಟಿದ್ದಾರೆ. ಜೊತೆಗೆ ಇದರೊಂದಿಗೆ ಹಣದ ವ್ಯವಹಾರವನ್ನು ಮುಚ್ಚಿಹಾಕಬಹುದು ಎಂದುಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ 3 ಲಕ್ಷ ರೂ. ಸುಪಾರಿ
ದಿನೇಶ್ ಮತ್ತು ಮೋಹನ್ ಗಣಮಗ ಕುಮಾರ್ ಕೊಲ್ಲುವುದಕ್ಕೆ ಮೂರು ಲಕ್ಷ ರೂ. ಸುಪಾರಿ ನೀಡಿದ್ದಾರೆ. ಇದರ ಮುಂಗಡವಾಗಿ ಎರಡು ಸಾವಿರ ರೂಪಾಯಿ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಹೊನ್ನಾಳಿಯ ಮೋಹನ್ ತನಗೆ ಪರಿಚಯವಿದ್ದ ಹರಿಹರ ತಾಲೂಕಿನ ಹಿಂಡಸಘಟ್ಟ ಕ್ಯಾಂಪ್ ಕಾರ್ತಿಕ್ ಕುಮಾರ್ ನಾಯ್ಕ್, ಪರಮೇಶ್ ನಾಯ್ಕ್, ಸುನೀಲ್ ನಾಯ್ಕ್ ಸಂಪರ್ಕಿಸಿದ್ದಾನೆ. ಕೊಲೆ ನಡೆಯುವ ಒಂದು ದಿನ ಮುಂಚೆ ಹೊನ್ನಾಳಿಗೆ ಕರೆಸಿಕೊಂಡು ಸಂಚು ರೂಪಿಸಿದ್ದು ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆ ನಡೆದ ಎರಡು ದಿನಗಳೊಳಗಾಗಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ತಮ್ಮ ತಾಂತ್ರಿಕ, ಚಾಕಚಕ್ಯತೆ ಹಾಗೂ ಕೌಶಲ್ಯದಿಂದ ಆರೋಪಿಗಳನ್ನು ಹಿಡಿಯುವಲ್ಲಿ ದೇವರಾಜ್ ಯಶಸ್ವಿಯಾಗಿದ್ದಾರೆ. ಇನ್ನು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿದ ದೇವರಾಜ್ ನೇತೃತ್ವದ ತಂಡವನ್ನು ಅಭಿನಂದಿಸಿ, ಬಹುಮಾನ ಘೋಷಿಸಲಾಗಿದೆ.
Recommended Video