ದಾವಣಗೆರೆ: 'ಮುಂದಿನ MLA ಶಾಮನೂರು ಮಲ್ಲಣ್ಣ'; ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಅಭಿಮಾನಿ
ದಾವಣಗೆರೆ, ಮಾರ್ಚ್ 24: ಭಕ್ತರು ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸಲು, ಉದ್ಯೋಗ, ವಿವಾಹ ಹೀಗೆ ಅನೇಕ ತಮ್ಮ ಮನದಾಸೆ ಈಡೇರಿಸಿಕೊಳ್ಳಲು ಹರಕೆ ಕಟ್ಟಿಕೊಳ್ಳುವುದು ಮಾಮೂಲಿ.
ಆದರೆ, ಇಲ್ಲೊಬ್ಬ ಭಕ್ತ 'ನಮ್ಮ ಮುಂದಿನ ಎಂಎಲ್ಎ ಶಾಮನೂರು ಮಲ್ಲಣ್ಣ' ಎಂದು ಬಾಳೆಹಣ್ಣಿನ ಮೇಲೆ ಬರೆದು ರಥೋತ್ಸವದ ಕಳಸಕ್ಕೆ ಎಸೆಯುವುದರ ಮುಖಾಂತರ ಹರಕೆ ಈಡೇರಿಸುವಂತೆ ಬೇಡಿಕೆಯಿಟ್ಟ ಘಟನೆ ದಾವಣಗೆರೆ ಸಮೀಪದ ಶಾಮನೂರು ಆಂಜನೇಯಸ್ವಾಮಿ ರಥೋತ್ಸವದಲ್ಲಿ ನಡೆದಿದೆ.
ಮಂಗಳವಾರ (ಮಾ.23) ರಾತ್ರಿ ದಾವಣಗೆರೆಯ ಶಾಮನೂರು ಆಂಜನೇಯ ಸ್ವಾಮಿ ರಥೋತ್ಸವ ನಡೆಯಿತು. ಬಾಳೆಹಣ್ಣಿನ ಮೇಲೆ ತಮ್ಮ ಮನದಾಸೆ ಬರೆದು ರಥೋತ್ಸವ ವೇಳೆ ಕಳಸಕ್ಕೆ ಎಸೆದರೆ ಇಷ್ಟಾರ್ಥ ಈಡೇರಲಿದೆ ಎನ್ನುವ ನಂಬಿಕೆ ಇದೆ.

ರಥೋತ್ಸವದ ವೇಳೆ ಭಕ್ತರು ತಮ್ಮ ಮನದಿಂಗಿತ ವ್ಯಕ್ತಪಡಿಸಿ ಹರಕ್ಕೆ ಕಟ್ಟಿಕೊಳ್ಳುತ್ತಾರೆ. ಅದನ್ನು ಬಾಳೆಹಣ್ಣಿನಲ್ಲಿ ಬರೆದು ಭಕ್ತಿ ಸಮರ್ಪಿಸುತ್ತಾರೆ. ಅದರಂತೆ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ಅಭಿಮಾನಿ, ಬಾಳೆಹಣ್ಣಿನ ಮೇಲೆ ಮತ್ತೊಮ್ಮೆ ಮಲ್ಲಿಕಾರ್ಜುನ್ ಅವರು ಶಾಸಕರಾಗಿ ಆಯ್ಕೆಯಾಗಬೇಕು ಎಂದು ಬರೆದು ಎಸೆದಿದ್ದಾರೆ.
ಎಸ್.ಎಸ್ ಮಲ್ಲಿಕಾರ್ಜುನ್ ಅವರು ಎರಡು ಬಾರಿ ಸಚಿವರಾಗಿ, ದಾವಣಗೆರೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮೊದಲ ಬಾರಿ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವರಾಗಿ ಮತ್ತು ಎರಡನೇ ಬಾರಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಖಾತೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಎಸ್.ಎ ರವೀಂದ್ರನಾಥ್ ಅವರ ವಿರುದ್ಧ ೨೦೮೦ ಮತಗಳ ಅಂತರದಲ್ಲಿ ಸೋಲಿನ ಕಹಿ ಉಂಡಿದ್ದರು.
ಶಾಮನೂರು ಶಿವಶಂಕರಪ್ಪ ಅವರ ಮಗನಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ಸೋಲು ಕಾಣುತ್ತಾರೆ ಎಂಬ ನಿರೀಕ್ಷೆಗಳು ಬಹುಪಾಲು ಅಭಿಮಾನಿಗಳದ್ದಾಗಿರಲಿಲ್ಲ. ಆದರೆ, ಅನಿರೀಕ್ಷಿತ ಸೋಲಿನ ಹತಾಶೆಯಿಂದಾಗಿ ಎಸ್.ಎಸ್ ಮಲ್ಲಿಕಾರ್ಜುನ್ ಅವರು ರಾಜಕೀಯದಿಂದ ದೂರ ಉಳಿದಿದ್ದರು. ಈಗ ಮತ್ತೆ ಅವರು ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದಾರೆ.












Click it and Unblock the Notifications