ಗೊಂದಲದ ಗೂಡಾದ ಸಭೆ: ಜಿಲ್ಲಾಧಿಕಾರಿ ಕಾರಿನ ಮುಂದೆ ರೈತರು ರೊಚ್ಚಿಗೆದ್ದು ಪ್ರತಿಭಟಿಸಿದ್ಯಾಕೆ?
ದಾವಣಗೆರೆ, ಮಾರ್ಚ್ 13: ಶಾಸಕ ಶಾಮನೂರು ಶಿವಶಂಕರಪ್ಪರ ಪುತ್ರ ಎಸ್.ಎಸ್. ಗಣೇಶ್ ಅವರ ಒಡೆತನದ ಕುಕ್ಕುವಾಡ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆ ಗೊಂದಲದಲ್ಲೇ ಮುಕ್ತಾಯವಾಗಿದೆ.
ಕುಕ್ಕುವಾಡ ಸಕ್ಕರೆ ಕಾರ್ಖಾನೆಯಿಂದ ಧೂಳು ಹಾಗೂ ಬೂದಿ ಹೊರಬರುತ್ತಿರುವುದರಿಂದ ಆಗುತ್ತಿರುವ ಸಮಸ್ಯೆ, ಕಬ್ಬು ಬೆಳೆಗಾರರ ತೊಂದರೆ ಪರಿಹರಿಸುವಂತೆ ಕರೆದಿದ್ದ ಸಭೆಯು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಕರೆದಿದ್ದ ಸಭೆಗೆ ರೈತರು, ಕಾರ್ಖಾನೆಯ ಛೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನು ಆಹ್ವಾನಿಸಲಾಗಿತ್ತು. ಮಧ್ಯಾಹ್ನ 3.30 ಗಂಟೆಗೆ ಕರೆದಿದ್ದ ಸಭೆಗೆ ಕಾರ್ಖಾನೆಯ ಎಂ.ಡಿ. ಎಸ್.ಎಸ್ ಗಣೇಶ್ ಒಂದು ಗಂಟೆ ಮುಂಚಿತವಾಗಿ ಆಗಮಿಸಿ ಒಳಗಡೆ ಕುಳಿತಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತರು ಸಮಯಕ್ಕೆ ಸರಿಯಾಗಿ ಬಂದು ಕಾದರು.
ಜಿಲ್ಲಾಧಿಕಾರಿ ಮತ್ತು ಎಸ್ಪಿ ಸುಮಾರು 4.15ಕ್ಕೆ ಬಂದು ಸೀದಾ ಗಣೇಶ ಅವರಿದ್ದ ಕಚೇರಿಗೆ ಹೋದರು. ಹೊರಗಡೆ ಇದ್ದ ರೈತರನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇರುವಂತೆ ಪೊಲೀಸರ ಮೂಲಕ ಹೇಳಿ ಕಳುಹಿಸಿದರು. ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕಾರ್ಖಾನೆಯಿಂದ ಹೊರಗಡೆ ಬಂದು ಸೀದಾ ಗ್ರಾಮ ಪಂಚಾಯಿತಿ ಕಚೇರಿಗೆ ಹೋದರು. ಸಿಟ್ಟಿಗೆದ್ದ ರೈತರು ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ನಿಂತಿದ್ದ ಅವರ ಕಾರು ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕಾರ್ಖಾನೆಯ ಒಳಗಡೆ ಪರಿಶೀಲಿಸಿದ್ದೇನೆ. ಬೂದಿ ಮತ್ತು ತ್ಯಾಜ್ಯ ನೀರನ್ನು ಬಿಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಆಗ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಒಕ್ಕೂಟದ ಮುಖಂಡ ಬಿ. ಎಂ. ಸತೀಶ್ ಕೊಳೇನಹಳ್ಳಿ ಮಾತನಾಡಿ, ರೈತರ ಮತ್ತು ಕಾರ್ಖಾನೆಯವರ ಸಭೆಯನ್ನು ಕರೆದಿರುವುದಾಗಿ ಹೇಳಿದ್ದೀರಿ. ಆದರೆ ಈಗ ಕಾರ್ಖಾನೆಯವರೊಂದಿಗೆ ಪ್ರತ್ಯೇಕವಾಗಿ ಒಳಗಡೆ ಮಾತನಾಡಿಕೊಂಡು ಬಂದು ಈಗ ರೈತರೊಂದಿಗೆ ಮಾತನಾಡುತ್ತಿದ್ದೀರಿ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ನಾನು ಕಾರ್ಖಾನೆಯ ಒಳಗಡೆ ನಿಮ್ಮ ಬೇಡಿಕೆಗಳಾನುಸಾರ ಪರಿಶೀಲನೆಗೆ ಹೋಗಿದ್ದೆ. ಕಾರ್ಖಾನೆ ಚಿಮಣಿ ಮೂಲಕ ಹೊರಸೂಸುವ ಬೂದಿಯಿಂದ ವಾಯು ಮಾಲಿನ್ಯ ಮತ್ತು ಹಳ್ಳಕ್ಕೆ ಬಿಡುವ ರಾಸಾಯನಿಕಯುಕ್ತ ತ್ಯಾಜ್ಯ ನೀರಿನಿಂದ ಜಲ ಮಾಲಿನ್ಯವಾಗಿರುವುದು ಸತ್ಯ. ಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕ್ರಮವಹಿಸುತ್ತೇನೆ. ಇದರ ಜವಾಬ್ದಾರಿ ನನ್ನದು ಎಂದರು.
ಸಕ್ಕರೆ ಕಾರ್ಖಾನೆಯವರ ಮತ್ತು ರೈತರ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅತಿ ಶೀಘ್ರದಲ್ಲೇ ನಡೆಸಲಾಗುವುದು ಎಂದ ಅಧಿಕಾರಿಗಳುಸಭೆ ನಡೆಸದೆ ತೆರಳಿದರು. ಇದು ರೈತರ ಆಕ್ರೋಶಕ್ಕೆ ಕಾರಣವಾಯಿತು.












Click it and Unblock the Notifications